ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ ವಿರುದ್ಧ ಕನ್ನಡ ಸಾಹಿತ್ಯ ಪರಿಷತ್ನಲ್ಲಿ ಕಳೆದ ಮೂರು ವರ್ಷಗಳಿಂದ ನಡೆದಿರುವ ಅಧಿಕಾರ ಮತ್ತು ಹಣ ದುರುಪಯೋಗದ ಆರೋಪಿಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ವಿಚಾರಣೆ ನಡೆಸುತ್ತಿದೆ. ಈ ಕಾರಣಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಕೆ.ಎಂ ಗಾಯತ್ರಿ ಅವರನ್ನುಮೂರು ತಿಂಗಳ ಅವಧಿಗೆ ಸರ್ಕಾರ ಆಡಳಿತಾಧಿಕಾರಿಯಾಗಿ ನೇಮಕ ಮಾಡಿತ್ತು, ಕಳೆದ ಶುಕ್ರವಾರ ಇವರ ಆಡಳಿತಾವಧಿ ಮುಗಿಯುತ್ತದೆ ಎಂದು ತಿಳಿದು ಮಹೇಶ್ ಜೋಶಿ ಕನ್ನಡ ಸಾಹಿತ್ಯ ಪರಿಷತ್ನ ಬಾಗಿಲು ಬಡಿದು ಅಲ್ಲಿನ ಸಿಬ್ಬಂದಿಗೆ ಬಾಗಿಲು ತೆರೆಯುವಂತೆ ಜೋರು ಮಾಡಿದ್ದಾರೆ, ಆದರೆ ಅಲ್ಲಿನ ಸಿಬ್ಬಂದಿ ಬಾಗಿಲು ತೆರೆಯದೇ ಪೊಲೀಸರ ನೆರವಿನಿಂದಜೋಶಿಯವರನ್ನು ವಾಪಸ್ ಕಳುಹಿಸಿದ್ದಾರೆ. ಈಗ ಮತ್ತೆ ಸರ್ಕಾರ ಮೂರು ತಿಂಗಳ ಅವಧಿಗೆ ಆಡಳಿತಾಧಿಕಾರಿಯವರ ಅಧಿಕಾರವನ್ನು ವಿಸ್ತರಿಸಿದೆ. ಒಬ್ಬ ಪರಿಷತ್ನ ಅಧ್ಯಕ್ಷನಾಗಿ ತನ್ನ ವಿರುದ್ಧ ತನಿಖೆ ನಡೆಯುತ್ತಿದ್ದರೂ, ಪರಿಷತ್ಗೆ ಹೋಗಿ ಕುರ್ಚಿ ಮೇಲೆ ಕುಳಿತುಕೊಳ್ಳಲು ಇವರಿಗೆ ಯಾವ ನೈತಿಕತೆ ಇದೆ? ಈತನಿಗೆ ಕನಿಷ್ಠ ತಿಳಿವಳಿಕೆಯಾದರೂ ಬೇಡವೇ? ಕನ್ನಡಕ್ಕಾಗಿ ತ್ಯಾಗ ಮಾಡಿದ ಅನೇಕ ಮಹನೀಯರು ಕುಳಿತ ಕುರ್ಚಿಗೆ ಅವಮಾನ ಮಾಡಿದ ಕೀರ್ತಿ ಈ ತನಿಗೆ ಸಲ್ಲುತ್ತದೆ. ಈತ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಬಂದ ನಂತರ ನಡೆಸಿದ ಹುಚ್ಚಾಟಗಳಿಂದಾಗಿ ಪರಿಷತ್ನ ಗೌರವವೇ ಬೀದಿ ಪಾಲಾಗಿದೆ.
– ಬೂಕನಕೆರೆ ವಿಜೇಂದ್ರ, ಕುವೆಂಪು ನಗರ, ಮೈಸೂರು



