Mysore
21
clear sky

Social Media

ಭಾನುವಾರ, 08 ಫೆಬ್ರವರಿ 2026
Light
Dark

ಓದುಗರ ಪತ್ರ:  ಕದ್ದ ಮಾಲು ಸಿಕ್ಕ ಮೇಲೆ ಕಳ್ಳರನ್ನೂ ಖುಲಾಸೆಗೊಳಿಸಬೇಕು!

ಓದುಗರ ಪತ್ರ

ಮೈಸೂರು ಮುಡಾದ ೫೦:೫೦ ನಿವೇಶನ ಹಂಚಿಕೆ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಮತ್ತು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ವಿರುದ್ಧ ಇಡಿ ನೀಡಿದ್ದ ಸಮನ್ಸ್ ಅನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.‌

ರಾಜ್ಯ ಹೈಕೋರ್ಟ್ ಕೂಡ ಲೋಕಾಯುಕ್ತ ತನಿಖೆಯ ವರದಿಯನ್ನು ಮಾನ್ಯ ಮಾಡಿ ತೀರ್ಪು ನೀಡಿತ್ತು. ಆದರೆ ಪ್ರಕರಣ ಕೋರ್ಟ್ ಮೆಟ್ಟಿಲೇರಿದಾಗ ಪ್ರಕರಣದಲ್ಲಿ ಪ್ರಭಾವ ಬೀರಿರುವುದು ಮೇಲ್ನೋಟಕ್ಕೆ ಸತ್ಯವೆಂದು ತಿಳಿದು ಲೋಕಾಯುಕ್ತ ತನಿಖೆಗೆ ಕೋರ್ಟ್ ಒಪ್ಪಿಸಿತ್ತು. ತನಿಖೆ ನಡೆಸಿದ ಲೋಕಾಯುಕ್ತ ಕೋರ್ಟ್, ಯಾವುದೇ ಲಿಖಿತ ಸಾಕ್ಷಿ ಗಳು ಲಭ್ಯವಿಲ್ಲ ಎಂದು ಬಿಗ್ ರಿಪೋರ್ಟ್ ನೀಡಿತು. ಹೈ ಕೋರ್ಟ್ ಇದನ್ನು ಮಾನ್ಯ ಮಾಡಿತು.

ಸಚಿವ ಬೈರತಿ ಸುರೇಶ್ ಇದರಲ್ಲಿ ನನ್ನ ಮತ್ತು ಸಿಎಂ ಪತ್ನಿಯ ಪಾತ್ರವಿಲ್ಲ ಎಂದಿದ್ದಾರೆ. ಹಾಗಾದರೆ ಹಗರಣ ಬೆಳಕಿಗೆ ಬಂದ ಕೂಡಲೇ ಹೆಲಿಕಾಪ್ಟರ್‌ನಲ್ಲಿ ಮುಡಾ ಕಡತಗಳನ್ನೆಲ್ಲಾ ಬೆಂಗಳೂರಿಗೆ ತೆಗೆದುಕೊಂಡು ಹೋದದ್ದೇಕೆ? ಪ್ರಭಾವ ಬೀರದೆ ೧೪ ನಿವೇಶನಗಳು ಮಂಜೂರಾದದ್ದು ಹೇಗೆ? ಆಗಲೇ ನಿವೇಶನಗಳು ಬೇಡ ಎನ್ನಬಹುದಿತ್ತಲ್ಲವೇ.

ನಿವೇಶನ ವಾಪಸ್ ನೀಡಿದ ಮಾತ್ರಕ್ಕೆ ಅಪರಾಧ ಶೂನ್ಯ ವಾಗುತ್ತದೆಯೇ. ಹಾಗಾದರೆ ಪೊಲೀಸರು ಇನ್ನು ಮುಂದೆ ಕಳ್ಳರು ಕದ್ದ ಮಾಲು ಸಿಕ್ಕಿದ ಮೇಲೆ ಅವರ ಮೇಲಿರುವ ಪ್ರಕರಣ ರದ್ದು ಮಾಡಿ,ಖುಲಾಸೆಗೊಳಿಸಬೇಕು ಅಲ್ಲವೆ?

-ಮುಳ್ಳೂರು ಪ್ರಕಾಶ್, ಕನಕದಾಸನಗರ. ಮೈಸೂರು

Tags:
error: Content is protected !!