ಕೆಲವು ಖಾಸಗಿ ಶಾಲೆಗಳಲ್ಲಿ ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳನ್ನು ನಿರ್ಲಕ್ಷಿಸಲಾಗುತ್ತಿದೆ. ೮ನೇ ತರಗತಿಗೆ ದುಬಾರಿ ಶುಲ್ಕ ಪಾವತಿಸಿಕೊಂಡು ದಾಖಲಿಸಿಕೊಳ್ಳುವ ಶಿಕ್ಷಣ ಸಂಸ್ಥೆಗಳು ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿದ್ದಾರೆ ಎಂದು ತಿಳಿಯುತ್ತಲೇ ೯ನೇ ತರಗತಿಯ ನಂತರ ೧೦ನೇ ತರಗತಿಗೆ ಬೇರೆ ಶಾಲೆಗಳಿಗೆ ಅದರಲ್ಲೂ ಮುಖ್ಯವಾಗಿ ಸಮೀಪವಿರುವ ಸರ್ಕಾರಿ ಶಾಲೆಗಳಿಗೆ ವರ್ಗಾವಣೆ ಪತ್ರ ಕೊಟ್ಟು ಸಾಗ ಹಾಕುತ್ತಾರೆ. ಇದನ್ನು ಪ್ರಶ್ನಿಸಿದರೆ ೯ನೇ ತರಗತಿಯಲ್ಲೇ ಫೇಲ್ ಮಾಡುತ್ತೇವೆ. ಇನ್ನೂ ಒಂದು ವರ್ಷ ಇಲ್ಲೇ ಓದಬೇಕು ಎಂದು ಷರತ್ತನ್ನೂ ವಿಧಿಸುತ್ತಾರೆ. ಸರ್ಕಾರದ ನಿಯಮಾನುಸಾರ ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳಿಗೆ ಪರಿಹಾರ ಬೋಧನೆ ಕೈಗೊಳ್ಳುವ ಮೂಲಕ ಅವರ ಕಲಿಕಾ ಮಟ್ಟವನ್ನು ಹೆಚ್ಚಿಸಬೇಕು. ಆದರೆ ಕೇವಲ ಅಂಕ ಗಳಿಕೆ ಹಾಗೂ ರ್ಯಾಂಕ್ ಹಿಂದೆ ಬಿದ್ದಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮ ಜವಾಬ್ದಾರಿಯನ್ನೇ ಮರೆತಿರುವುದು ವಿಪರ್ಯಾಸ. ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳನ್ನುಖಾಸಗಿ ಶಿಕ್ಷಣ ಸಂಸ್ಥೆಗಳು ನಿರ್ಲಕ್ಷಿಸುವ ಪ್ರಕರಣಗಳು ಕಂಡು ಬಂದರೂ ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲಾ ಅಧಿಕಾರಿಗಳು , ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಸಂಬಂಧಪಟ್ಟ ಇಲಾಖೆಯವರು ಮೌನ ವಹಿಸುತ್ತಿರುವುದೇಕೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.ವಿದ್ಯಾರ್ಥಿಗಳನ್ನು ಶಿಕ್ಷಣದ ಮಾನದಂಡದಿಂದಲೇ ಅಳೆಯುವುದು ತಪ್ಪು. ಯಾವುದೇ ವಿದ್ಯಾರ್ಥಿ ಕಲಿಕೆಯಲ್ಲಿ ಹಿಂದುಳಿದಿದ್ದರೂ, ಚಿತ್ರಕಲೆ, ಸಂಗೀತ, ಕರ ಕುಶಲ ಕಲೆ, ಅಭಿನಯ ಮೊದಲಾದ ವಿಷಯಗಳಲ್ಲಿ ಆಸಕ್ತಿ ಹೊಂದಿರಬಹುದು. ಆದರೆ ಇದಕ್ಕೆ ಪ್ರೋತ್ಸಾಹಿಸಬೇಕಾದವರೇ ತಾತ್ಸಾರ ಮಾಡಿದರೆ ಹೇಗೆ? ಶಿಕ್ಷಣ ಇಲಾಖೆ ಅಧಿಕಾರಿಗಳು ಇನ್ನು ಮುಂದಾದರೂ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ನಿರ್ಲಕ್ಷಿಸುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಪರಿಹಾರ ಬೋಧನೆಗೆವ್ಯವಸ್ಥೆ ಮಾಡುವ ಮೂಲಕ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಲು ಆಸಕ್ತಿ ವಹಿಸಬೇಕಿದೆ.
ಎಸ್. ಶರತ್, ಮೈಸೂರು





