ಸುಪ್ರೀಂ ಕೋರ್ಟ್ ಮತ್ತು ಮದ್ರಾಸ್ ಹೈಕೋರ್ಟ್ನಲ್ಲಿ ತಮಿಳು ಭಾಷೆಯಲ್ಲಿ ವಾದ ಮಂಡಿಸಲು ಅವಕಾಶ ನೀಡಬೇಕೆಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಬೇಡಿಕೆಗೆ ಕೇಂದ್ರ ಸರ್ಕಾರ ಒಪ್ಪುವ ಸಾಧ್ಯತೆ ತೀರಾ ಕಡಿಮೆ. ಆದರೆ, ತಮಿಳುನಾಡಿನ ಈ ಬೇಡಿಕೆ ಇತರ ರಾಜ್ಯದವರನ್ನೂ ಇಂತಹ ಬೇಡಿಕೆಗೆ ಪ್ರಚೋದಿಸುವುದನ್ನು ಅಲ್ಲಗಳೆಯಲಾಗದು. ಹಾಗೆಯೇ ತಮಿಳರೂ ಕೂಡ ತಮ್ಮ ಈ ಅಸ್ಮಿತೆಯ ಬೇಡಿಕೆಯನ್ನು ಅಷ್ಟು ಸುಲಭವಾಗಿ ಕೈಬಿಡುವ ಸಾಧ್ಯತೆ ಕಡಿಮೆ. ಮದ್ರಾಸ್ಅನ್ನು ಚೆನ್ನೈ ಎಂದು ಮತ್ತು ತಮಿಳುನಾಡಿನ ಬಾನುಲಿ ಕೇಂದ್ರಗಳನ್ನು ವಾನೊಲಿ ನಿಲಯಂ ಎಂದು ಬದಲಾಯಿಸಿರುವ ಅವರಿಗೆ ಹೋರಾಟ ಹೊಸದಲ್ಲ ಮತ್ತು ಅದನ್ನು ಸಾಧಿಸಿಕೊಳ್ಳುತ್ತಾರೆ. ಇದು ಇನ್ನೊಂದು ಸುತ್ತಿನ ಕೇಂದ್ರ ಮತ್ತು ರಾಜ್ಯಗಳ ಮಧ್ಯೆ ತಿಕ್ಕಾಟಕ್ಕೆ ನಾಂದಿಯಾಗಬಹುದೇನೋ ಎನ್ನುವ ಸಂಶಯ ಕಾಡುತ್ತಿದೆ.
–ರಮಾನಂದ ಶರ್ಮಾ, ಬೆಂಗಳೂರು





