ಚಿರಂಜೀವಿ ಸಿ.ಹುಲ್ಲಹಳ್ಳಿ
ಕಟ್ಟಡ ನಿರ್ಮಾಣ ಮತ್ತಷ್ಟು ತುಟ್ಟಿಯಾಗುವ ಭೀತಿ
ಮೈಸೂರು: ಕಲ್ಲು ಗಣಿಗಾರಿಕೆಗೆ ಸಂಬಂಧಿಸಿದಂತೆ ಎರಡೂ ಕಡೆ ರಾಜಧನ ಸಂಗ್ರಹಿಸುವ ಕ್ರಮ ಕೈಬಿಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಲ್ಲು ಕ್ವಾರಿ, ಜಲ್ಲಿ ಕ್ರಷರ್ ಹಾಗೂ ಎಂ.ಸ್ಯಾಂಡ್ ಉತ್ಪಾದನಾ ಘಟಕಗಳು ರಾಜ್ಯಾದ್ಯಂತ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಕಟ್ಟಡ ನಿರ್ಮಾಣ ವಲಯದ ಮೇಲೆ ಅದರ ನೇರ ಪರಿಣಾಮ ಬೀರುವ ಆತಂಕ ಎದುರಾಗಿದೆ.
ಕಟ್ಟಡ ನಿರ್ಮಾಣಕ್ಕೆ ಅತ್ಯಗತ್ಯವಾಗಿರುವ ಜಲ್ಲಿ, ಎಂ.ಸ್ಯಾಂಡ್ ಹಾಗೂ ಇತರೆ ಕಲ್ಲು ಉತ್ಪನ್ನಗಳ ಪೂರೈಕೆ ಸ್ಥಗಿತಗೊಂಡರೆ, ಈಗಾಗಲೇ ಆರಂಭವಾಗಿರುವ ಕಾಮಗಾರಿಗಳು ವಿಳಂಬವಾಗುವ ಸಾಧ್ಯತೆ ಇದೆ. ಮನೆ, ಅಪಾರ್ಟ್ಮೆಂಟ್, ವಾಣಿಜ್ಯ ಕಟ್ಟಡ, ರಸ್ತೆ, ಚರಂಡಿ, ಸೇತುವೆ ಸೇರಿದಂತೆ ಬಹುತೇಕ ನಿರ್ಮಾಣ ಕಾಮಗಾರಿಗಳಿಗೆ ಜಲ್ಲಿ ಮತ್ತು ಎಂ.ಸ್ಯಾಂಡ್ ಪ್ರಮುಖ ಕಚ್ಚಾ ವಸ್ತು ಗಳಾಗಿವೆ. ಈ ಸಾಮಗ್ರಿಗಳ ಪೂರೈಕೆ ಕೆಲವೇ ದಿನಗಳು ಸ್ಥಗಿತಗೊಂಡರೂ ಕಾಮಗಾರಿಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ನಿರಂತರ ಪೂರೈಕೆಯನ್ನು ಅವಲಂಬಿಸಿರುವ ನಿರ್ಮಾಣ ಸಂಸ್ಥೆಗಳು ಪರ್ಯಾಯ ಮೂಲಗಳನ್ನು ಹುಡುಕಬೇಕಾದ ಪರಿಸ್ಥಿತಿ ಎದುರಾಗಬಹುದು. ಇದರಿಂದ ಸಾಗಣೆ ವೆಚ್ಚ ಹೆಚ್ಚುವುದರ ಜತೆಗೆ, ನಿರ್ಮಾಣ ವೆಚ್ಚವೂ ಏರಿಕೆಯಾಗುವ ಸಾಧ್ಯತೆ ಇದೆ. ರಾಜ್ಯಾದ್ಯಂತ ಕ್ವಾರಿ ಮತ್ತು ಕ್ರಷರ್ ಘಟಕಗಳು ಬಂದ್ ಆಗಿರುವುದರಿಂದ ಜಲ್ಲಿ, ಎಂ. ಸ್ಯಾಂಡ್ ಲಭ್ಯತೆ ಕಡಿಮೆಯಾಗುವ ಆತಂಕ ನಿರ್ಮಾಣವಾಗಿದೆ. ಈಗಾಗಲೇ ಕಟ್ಟಡ ನಿರ್ಮಾಣಕ್ಕೆ ಸಿಮೆಂಟ್, ಕಬ್ಬಿಣ, ಇಟ್ಟಿಗೆ ಸೇರಿದಂತೆ ಹಲವು ಸಾಮಗ್ರಿ ಗಳ ಬೆಲೆ ಮತ್ತು ಸಾಗಣೆ ವೆಚ್ಚವನ್ನು ಲೆಕ್ಕ ಹಾಕಿಕೊಂಡು]ಕಾಮಗಾರಿ ಕೈಗೆತ್ತಿಕೊಳ್ಳಲಾಗು ತ್ತದೆ. ಈ ಹಂತದಲ್ಲಿ ಜಲ್ಲಿ-ಎಂ.ಸ್ಯಾಂಡ್ ಪೂರೈಕೆ ಕಡಿಮೆಯಾದರೆ ಗುತ್ತಿಗೆದಾರರು ಹೆಚ್ಚುವರಿ ವೆಚ್ಚ ಭರಿಸಬೇಕಾಗಬಹುದು.
ನಿರ್ಮಾಣ ಕಾಮಗಾರಿಗಳಲ್ಲಿ ಸಾಮಗ್ರಿಗಳ ಪೂರೈಕೆ ಸರಪಳಿ ನಿರಂತರವಾಗಿರುವುದು ಅತ್ಯಗತ್ಯ. ಜಲ್ಲಿ ಅಥವಾ ಎಂ.ಸ್ಯಾಂಡ್ ಸಿಗದೆ ಕಾಮಗಾರಿ ನಿಂತರೆ ಕಾರ್ಮಿಕರು ಕೆಲಸವಿಲ್ಲದೆ ಕುಳಿತುಕೊಳ್ಳಬೇಕಾಗುತ್ತದೆ. ಕಾಮಗಾರಿ ಮುಂದೂಡಿದಂತೆ ಯಂತ್ರೋಪಕರಣಗಳ ಬಾಡಿಗೆ, ಕಾರ್ಮಿಕರ ವೇತನ, ಸ್ಥಳ ನಿರ್ವಹಣೆ ಸೇರಿದಂತೆ ಇತರೆ ವೆಚ್ಚಗಳು ಮುಂದುವರಿಯಲಿವೆ. ಹೀಗಾಗಿ ಸಮಸ್ಯೆ ಕೇವಲ ಜಲ್ಲಿ-ಎಂ.ಸ್ಯಾಂಡ್ ಕೊರತೆಯದ್ದಲ್ಲ. ನಿರ್ಮಾಣದ ಒಟ್ಟಾರೆ ವೆಚ್ಚ ಮತ್ತು ಅವಧಿಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಪ್ರಸ್ತುತ ಮನೆ ಅಥವಾ ಕಟ್ಟಡ ನಿರ್ಮಿಸುತ್ತಿರುವವರಿಗೂ ಬಂದ್ ಆತಂಕ ತಂದಿದೆ. ಜಲ್ಲಿ, ಎಂ.ಸ್ಯಾಂಡ್ ಪೂರೈಕೆ ಸ್ಥಗಿತಗೊಂಡರೆ ಕಾಂಕ್ರೀಟ್, ಅಡಿಪಾಯ, ಗೋಡೆ ನಿರ್ಮಾಣ ಸೇರಿದಂತೆ ಹಂತ ಹಂತವಾಗಿ ನಡೆಯಬೇಕಾದ ಕಾಮಗಾರಿಗಳು ಅಸ್ತವ್ಯಸ್ತವಾಗಬಹುದು.
ಕಾಮಗಾರಿ ನಿಂತರೆ ಕಾರ್ಮಿಕರು ಮತ್ತು ಗುತ್ತಿಗೆದಾರರ ನಡುವೆ ಸಮನ್ವಯದ ಕೊರತೆಯೂ ಉಂಟಾಗುವ ಸಾಧ್ಯತೆ ಇದೆ. ಸದ್ಯ ಈಗ ಮಳೆಗಾಲವಾಗಿರುವುದರಿಂದ ನಿರ್ಮಾಣ ಕಾರ್ಯಗಳು ಹೆಚ್ಚು ನಡೆಯುತ್ತಿಲ್ಲ. ಆದರೆ, ದೊಡ್ಡ ಬಿಲ್ಡರ್ಸ್ಗಳಿಗೆಪೆಟ್ಟು ಬೀಳಲಿದೆ. ಕ್ವಾರಿ ಮಾಲೀಕರು ತಮ್ಮ ಬೇಡಿಕೆ ಈಡೇರಿಕೆಗೆ ಮೂರು ದಿನಗಳ ಗಡವು ನೀಡಿದ್ದು, ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಬೇಕು. ಇಲ್ಲವಾದರೆ ಸಾರ್ವಜನಿಕರಿಂದ ಹಿಡಿದು ಬಿಲ್ಡರ್ಸ್ ಗಳಿಗೂ ದೊಡ್ಡ ಹೊಡೆತ ಬೀಳಲಿದೆ ಎಂದು ಬಿಲ್ಡರ್ ಸಿ.ಎನ್.ಮಂಜುನಾಥ್ ಮಾಹಿತಿ ನೀಡಿದರು.
” ಮಧ್ಯಮ ವರ್ಗದವರು ಮನೆ ನಿರ್ಮಾಣಕ್ಕೆ ಮುಂದಾದ ಸಂದರ್ಭದಲ್ಲಿ ನಿರ್ಮಾಣ ವೆಚ್ಚದಲ್ಲಿ ಸಣ್ಣ ಪ್ರಮಾಣದ ಏರಿಕೆಯೂ ಒಟ್ಟಾರೆ ಬಜೆಟ್ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆಯಿದೆ. ಹೀಗಾಗಿ ಸರ್ಕಾರ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು. ನಾವು ಕೂಡ ಮನೆ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿದ್ದೇವೆ. ಮುಂದೆ ಏರಿಕೆಯಾದರೆ ಸಾಲದ ಸುಳಿಗೆ ಸಿಲುಕುತ್ತೇವೆ.”
-ಮನೋಜ್
” ಕ್ವಾರಿ- ಕ್ರಷರ್ ಘಟಕಗಳ ಬಂದ್ ದೀರ್ಘಕಾಲ ಮುಂದುವರಿದರೆ ಲಭ್ಯವಿರುವ ಜಲ್ಲಿ ಮತ್ತು ಎಂ.ಸ್ಯಾಂಡ್ಗೆ ಬೇಡಿಕೆ ಹೆಚ್ಚಾಗಿ ಬೆಲೆ ಏರಿಕೆಯಾಗುವ ಸಾಧ್ಯತೆಯೂ ಇದೆ. ಪೂರೈಕೆ ಕಡಿಮೆಯಾದ ಸಂದರ್ಭದಲ್ಲಿ ದೂರದ ಪ್ರದೇಶಗಳಿಂದ ಸಾಮಗ್ರಿ ತರಿಸಿಕೊಳ್ಳಬೇಕಾದರೆ ಸಾಗಣೆ ವೆಚ್ಚ ಹೆಚ್ಚಾಗಲಿದೆ. ಅದರ ಹೊರೆ ಅಂತಿಮವಾಗಿ ನಿರ್ಮಾಣದಾರರು ಮತ್ತು ಕಟ್ಟಡ ಮಾಲೀಕರ ಮೇಲೆ ಬೀಳುವ ಸಾಧ್ಯತೆ ಇದೆ.”
– ಎ.ಪಿ.ನಾಗೇಶ್, ಉಪಾಧ್ಯಕ್ಷ, ನರೆಡ್ಕೋ




