Mysore
24
overcast clouds

Social Media

ಸೋಮವಾರ, 14 ಸೆಪ್ಟೆಂಬರ್ 2026
Light
Dark

ಕೋಟೆಯಲ್ಲಿ ಗೌರಿ-ಗಣೇಶ ಹಬ್ಬದ ಆಚರಣೆಗೆ ಸಜ್ಜು

ಮಂಜು ಕೋಟೆ

ಗಣೇಶ ಮೂರ್ತಿಗಳ ಮಾರಾಟದಲ್ಲಿ ಹೆಚ್ಚಳ; ಪೈಪೋಟಿಗೆ ಇಳಿದಿರುವ ಯುವ ಸಮುದಾಯ

ಎಚ್.ಡಿ.ಕೋಟೆ: ತಾಲ್ಲೂಕಿನಲ್ಲಿ ಹಿಂದೂ ಸಮುದಾಯದವರು ಗೌರಿ-ಗಣೇಶ ಹಬ್ಬವನ್ನು ಸಡಗರದಿಂದ ಆಚರಿಸಲು ಮುಂದಾಗಿದ್ದಾರೆ. ತಾಲ್ಲೂಕಿನಲ್ಲಿ ಕಳೆದ ಬಾರಿಗಿಂತ ಈ ಬಾರಿಯುವ ಸಮುದಾಯದವರು ಗೌರಿ ಗಣೇಶ ಹಬ್ಬವನ್ನು ಸಂಭ್ರಮದ ಮೂಲಕ ನಡೆಸಲು ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಸಕಲ ಸಿದ್ಧತೆ ಪೂರ್ಣಗೊಳಿಸಿದ್ದಾರೆ.

ಯುವ ಸಮುದಾಯದವರು ತಮ್ಮ ಗ್ರಾಮ ಮತ್ತು ವಾರ್ಡ್‌ಗಳಲ್ಲಿ ಮತ್ತು ಪ್ರಮುಖ ಸ್ಥಳಗಳಲ್ಲಿ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಲು ೨-೩ ದಿನಗಳಿಂದ ಚಪ್ಪರ, ತೋರಣ, ಬ್ಯಾನರ್ ಗಳನ್ನು ಅಳವಡಿಸಿ, ಗಣಪತಿಯ ವಿಗ್ರಹಗಳನ್ನು ಮತ್ತು ಹಣ್ಣು, ಹೂವು, ಇತರ ಪೂಜಾ ಸಾಮಗ್ರಿಗಳನ್ನು ದುಬಾರಿ ದರವನ್ನೂ ಲೆಕ್ಕಿಸದೆ ಸಾವಿರಾರು ರೂ. ಖರ್ಚು ಮಾಡಿ ಖರೀದಿಸುತ್ತಿರುವುದು ಕಂಡುಬಂದಿದೆ.

ಖರೀದಿಸಿದ ಬಳಿಕ ಟ್ರಾಕ್ಟರ್, ಟೆಂಪೋಗಳಲ್ಲಿ ಬೃಹತ್ ಗಣಪತಿ ವಿಗ್ರಹಗಳನ್ನು ಸಂಭ್ರಮದೊಂದಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಸರ್ಕಾರ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮತ್ತು ವಿಸರ್ಜನೆಗೆ ಅನೇಕ ನಿಯಮಗಳನ್ನು ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಯುವ ಸಮುದಾಯ ಪೊಲೀಸ್ ಇಲಾಖೆ, ಗ್ರಾಪಂ, ಪಪಂ, ಪುರಸಭೆಗಳಿಂದ ಅನುಮತಿ ಪಡೆದು ಹಬ್ಬ ಆಚರಿಸಲು ಮುಂದಾಗಿದ್ದಾರೆ.

ಕೋಟೆ, ಹ್ಯಾಂಡ್‌ಪೋಸ್ಟ್, ಸರಗೂರು, ಹಂಪಾಪುರ, ಇನ್ನಿತರ ಪ್ರದೇಶಗಳಲ್ಲಿ ಅನೇಕ ವ್ಯಾಪಾರಸ್ಥರು ಗಣಪತಿ ಮತ್ತು ಗೌರಿ ಮೂರ್ತಿಗಳ ಅಂಗಡಿಗಳನ್ನು ತೆರೆದು ಪೈಪೋಟಿಯ ಮೂಲಕ ಮಾರಾಟ ಮಾಡುತ್ತಿದ್ದಾರೆ. ಕಳೆದ ಬಾರಿ ಕಂಚಮಳ್ಳಿ ಮತ್ತು ಪಟ್ಟಣದ ಹನುಮಂತನಗರದಲ್ಲಿ ಅತಿ ಎತ್ತರವಾದ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದು ಗಮನ ಸೆಳೆದಿತ್ತು. ಈ ಬಾರಿಯೂ ತಾಲ್ಲೂಕು, ಪಟ್ಟಣದ ಅನೇಕ ಕಡೆಗಳಲ್ಲಿ ಬಹಳ ಎತ್ತರವಾದ ಗಣಪತಿ ಮೂರ್ತಿಗಳನ್ನು ಕೂರಿಸಲು ಸಂಘ ಸಂಸ್ಥೆಯವರು ಗ್ರಾಮಸ್ಥರು, ನಿವಾಸಿಗಳು ಪೈಪೋಟಿಯಲ್ಲಿ ಮುಂದಾಗಿದ್ದಾರೆ.

” ಸರ್ಕಾರ ಪಿಒಪಿ ಗಣೇಶ ಮೂರ್ತಿಗಳ ಮಾರಾಟವನ್ನು ಸಂಪೂರ್ಣವಾಗಿ ನಿಷೇಧ ಮಾಡಿರುವುದರಿಂದ ಮಣ್ಣಿನ ಗಣಪತಿ ಮೂರ್ತಿಗಳನ್ನು ಮಾರಾಟ ಮಾಡಲಾಗುತ್ತಿದೆ. ಕಳೆದ ಬಾರಿಗಿಂತ ಈ ಬಾರಿ ಮಾರಾಟಗಾರರ ಸಂಖ್ಯೆ ಮತ್ತು ಅಂಗಡಿಗಳು ಹೆಚ್ಚಾಗಿದ್ದು, ಖರೀದಿಯೂ ಹೆಚ್ಚಾಗಿದೆ. ಕಳೆದ ಬಾರಿಗಿಂತ ಈ ಬಾರಿ ಶೇ.೧೦ರಷ್ಟು ಬೆಲೆ ಹೆಚ್ಚಳವಾಗಿದೆ.”

-ವಿನಯ್ ಭಜರಂಗಿ, ಅಧ್ಯಕ್ಷರು, ವರ್ತಕರ ಸಂಘ

” ಸಂಘ ಸಂಸ್ಥೆಯವರು ಮತ್ತು ಜನಸಾಮಾನ್ಯರು ಸಾರ್ವಜನಿಕ ಸ್ಥಳಗಳಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕಾದರೆ ಸಂಬಂಧಪಟ್ಟ ಇಲಾಖೆಗಳಲ್ಲಿ ಅನುಮತಿ ಪಡೆಯುವುದು ಕಡ್ಡಾಯ. ಡಿಜೆಗೆ ಅನುಮತಿ ಇಲ್ಲ. ಸೂರ್ಯ ಮುಳುಗುವ ಮುಂಚೆ ಗಣಪತಿ ಮೂರ್ತಿಯನ್ನು ನದಿಗಳಲ್ಲಿ, ಕೆರೆಗಳಲ್ಲಿ ವಿಸರ್ಜನೆ ಮಾಡ ಬೇಕು ನಿಯಮಗಳನ್ನು ಉಲ್ಲಂಘಿಸಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ.”

-ಗಂಗಾಧರ್, ವೃತ್ತ ನಿರೀಕ್ಷಕ

 

 

Tags:
error: Content is protected !!