ಏ.೨ರಿಂದ ೨೮ ದಿನಗಳ ಕಾಲ ನಡೆಯಲಿರುವ ಪಂದ್ಯಾವಳಿ; ೩೦೦ಕ್ಕೂ ಅಧಿಕ ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ
ಮಡಿಕೇರಿ:ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ಕೊಡವ ಕುಟುಂಬಗಳ ನಡುವಿನ ೨೪ನೇ ವರ್ಷದ ಕೌಟುಂಬಿಕ ಕ್ರಿಕೆಟ್ ಉತ್ಸವಕ್ಕೆ ಬೇತ್ರಿ ಮುಕ್ಕಾಟಿರ ಕುಟುಂಬಸ್ಥರು ಸಿದ್ಧತೆ ಆರಂಭಿಸಿದ್ದು, ಏ.೨ರಿಂದ ಪಂದ್ಯಾವಳಿ ನಡೆಯಲಿದೆ.
೨೦೨೬ರ ಕ್ರಿಕೆಟ್ ಉತ್ಸವದ ಜವಾಬ್ದಾರಿಯನ್ನು ಬೇತ್ರಿ ಮುಕ್ಕಾಟಿರ ಕುಟುಂಬಸ್ಥರು ವಹಿಸಿಕೊಂಡಿದ್ದು, ಕ್ರಿಕೆಟ್ ಉತ್ಸವ ಏ.೨ರಿಂದ ೨೮ ದಿನಗಳ ಕಾಲ ನಡೆಯಲಿದೆ. ಬೇತ್ರಿ ಗ್ರಾಮದಲ್ಲಿರುವ ಮುಕ್ಕಾಟಿರ ಒಕ್ಕ ಕಳೆದ ವರ್ಷ ಕೊಡವ ಕೌಟುಂಬಿಕ ಫೈಸೈಡ್ ಫುಟ್ಬಾಲ್ ಆಯೋಜನೆ ಮೂಲಕ ಕ್ರೀಡೆಗೆ ಒತ್ತು ನೀಡಿತ್ತು. ಪ್ರಸ್ತುತ ಕ್ರಿಕೆಟ್ ಆಯೋಜನೆಗೆ ಸಿದ್ಧತೆ ನಡೆಸಿದೆ. ಈಗಾಗಲೇ ಕ್ರಿಕೆಟ್ ಉತ್ಸವ ಸಮಿತಿಯನ್ನು ರಚಿಸಲಾಗಿದ್ದು,ಹಲವು ಸಭೆ ಗಳನ್ನು ನಡೆಸಲಾಗಿದೆ.
ಈ ಬಾರಿ ೩ ಮೈದಾನಗಳಲ್ಲಿ ಕ್ರಿಕೆಟ್ ಪಂದ್ಯಾವಳಿಗಳು ನಡೆಯಲಿವೆ. ಆರಂಭಿಕ ಸುತ್ತಿನ ಪಂದ್ಯಗಳಿಗೆ ಅರಮೇರಿ ಕಳಂಚೇರಿಯ ಎಸ್ಎಂಎಸ್ ವಿದ್ಯಾಪೀಠದ ಮೈದಾನ ಮತ್ತು ಮುಖ್ಯ ಮೈದಾನವಾಗಿ ಮೂರ್ನಾಡಿನ ಬಾಚೆಟ್ಟಿರ ಲಾಲೂ ಮುದ್ದಯ್ಯ ಕ್ರೀಡಾಂಗಣವನ್ನು ಬಳಸಿಕೊಳ್ಳಲಾಗುತ್ತಿದೆ. ಲಾಲೂ ಮುದ್ದಯ್ಯ ಮೈದಾನದಲ್ಲಿ ಉದ್ಘಾಟನೆ ಮತ್ತು ಅಂತಿಮ ಪಂದ್ಯ ನಡೆಯಲಿದೆ.
ಪಂದ್ಯಾವಳಿಯ ಕ್ವಾರ್ಟರ್ ಫೈನಲ್ವರೆಗೆ ೬ ಓವರ್ಗಳ ಪಂದ್ಯಾವಳಿಗಳು ನಡೆಯಲಿದ್ದು, ನಂತರದ ವಿಭಾಗಕ್ಕೆ ೮ ಓವರ್ ಪಂದ್ಯಾವಳಿಗಳು ನಡೆಯಲಿವೆ. ಕ್ರಿಕೆಟ್ ಉತ್ಸವದ ಸಂದರ್ಭದಲ್ಲಿ ವಿವಿಧ ಕಾರ್ಯಕ್ರಮಗಳ ಜತೆಗೆ ಸಾಂಸ್ಕ ತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲು ಚಿಂತನೆ ನಡೆಸಲಾಗಿದೆ. ವಿಜೇತ ತಂಡಕ್ಕೆ ಆಕರ್ಷಕ ಟ್ರೋಫಿ ಮತ್ತು ನಗದು ಬಹುಮಾನ ನೀಡಲಾಗುವುದು ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ.
ಇದನ್ನು ಓದಿ: ಹೊರವಲಯದ ನಿವೇಶನಗಳಿಗೆ ಹೆಚ್ಚಾಗಲಿದೆ ಮತ್ತಷ್ಟು ಬೇಡಿಕೆ
ಕಳೆದ ವರ್ಷ ನಡೆದ ಚೆಕ್ಕೆರ ಕ್ರಿಕೆಟ್ ನಮ್ಮೆಯಲ್ಲಿ ಪುರುಷರ ವಿಭಾಗದಲ್ಲಿ೨೮೦ ತಂಡಗಳು ಪಾಲ್ಗೊಂಡಿದ್ದವು. ಈ ಬಾರಿ೩೦೦ ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಕಳೆದ ಬಾರಿ ಮಹಿಳೆಯರ ವಿಭಾಗದಲ್ಲಿ ೫೮ ತಂಡಗಳು ಪಾಲ್ಗೊಂಡಿದ್ದವು. ಈ ಬಾರಿ ೧೦೦ ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಬಾಳೆಲೆಯಲ್ಲಿ ನಡೆದ ಅರಮಣಮಾಡ ಕಪ್ ಪಂದ್ಯಾವಳಿಯಲ್ಲಿ ಮೊದಲ ಬಾರಿಗೆಮಹಿಳೆಯರಿಗೆ ತಂಡವಾಗಿ ಆಟವಾಡಲು ಅವಕಾಶ ಕಲ್ಪಿಸಲಾಗಿತ್ತು. ನಂತರ ಆಯೋಜನೆ ಮಾಡಿದ ಚೆಕ್ಕೇರ ಒಕ್ಕ ಮತ್ತಷ್ಟು ಕೊಡವ ಕುಟುಂಬಗಳ ಮಹಿಳೆಯರಿಗೆ ಪಾಲ್ಗೊಳ್ಳಲು ಉತ್ತೇಜನ ನೀಡಿತ್ತು. ಇದೀಗ ಮುಕ್ಕಾಟಿರ ಒಕ್ಕ ಹೆಚ್ಚು ಮಹಿಳಾ ತಂಡಗಳು ಪಾಲ್ಗೊಳ್ಳಲು ಅವಕಾಶ ನೀಡಲು ನಿರ್ಧರಿಸಿದೆ.
” ೨೪ನೇ ವರ್ಷದ ಕೌಟುಂಬಿಕ ಕ್ರಿಕೆಟ್ ಉತ್ಸವಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ಲೋಗೋ ಬಿಡುಗಡೆಗೊಳಿಸಲಾಗಿದೆ. ಏ.೨ರಿಂದ ೨೮ ದಿನಗಳ ಕಾಲ ೩ ಮೈದಾನಗಳಲ್ಲಿ ಪಂದ್ಯಾವಳಿಗಳು ನಡೆಯಲಿವೆ. ೩೦೦ಕ್ಕೂ ಹೆಚ್ಚು ಪುರುಷರ ತಂಡಗಳು ಮತ್ತು ೧೦೦ಕ್ಕೂ ಹೆಚ್ಚು ಮಹಿಳೆಯರ ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ.”
-ಎಂ.ಸುರೇಶ್, ಅಧ್ಯಕ್ಷರು, ಮುಕ್ಕಾಟಿರ ಕಪ್ ಕ್ರಿಕೆಟ್ ಉತ್ಸವ ಸಮಿತಿ
ಸಮಿತಿ ರಚನೆ: ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ ಯಶಸ್ಸಿಗಾಗಿ ಸಮಿತಿ ರಚಿಸಲಾಗಿದ್ದು, ಅಧ್ಯಕ್ಷರಾಗಿ ಮುಕ್ಕಾಟಿರ ಸುರೇಶ್ ಪೆಮ್ಮಯ್ಯ, ಕಾರ್ಯದರ್ಶಿಯಾಗಿ ಪೊನ್ನಣ್ಣ, ಜಂಟಿ ಕಾರ್ಯದರ್ಶಿಯಾಗಿ ಸಂಜು ಸೋಮಣ್ಣ, ಉಪಾಧ್ಯಕ್ಷರಾಗಿ ಕಿಟ್ಟು ಮುತ್ತಣ್ಣ ಮತ್ತು ರವಿ ಕುಮಾರ್, ವಕ್ತಾರರಾಗಿ ರವಿ ಚೀಯಣ್ಣ, ಖಜಾಂಚಿಯಾಗಿ ಪ್ರಿಯಾ ಗಣಪತಿ, ಜಂಟಿಖಜಾಂಚಿಯಾಗಿ ಮುಖೇಶ್ ಅಯ್ಯಪ್ಪ,ಸಂಚಾಲಕರಾಗಿ ಕ್ಯಾರಿ ಕರುಂಬಯ್ಯ,ಸಾಮಾಜಿಕ ಜಾಲತಾಣದ ಮುಖ್ಯಸ್ಥರಾಗಿ ಉತ್ತಮ್ ಬೋಪಣ್ಣ, ಕುಟುಂಬದ ಅಧ್ಯಕ್ಷರಾದ ಮಧು ದೇವಯ್ಯ, ಕಾರ್ಯದರ್ಶಿ ಭಜನ್ ಬೋಪಣ್ಣ ಹಾಗೂ ಸದಸ್ಯರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ





