ಮೈಸೂರು: ಚಾಮರಾಜನಗರ ಜಿಲ್ಲೆ ಮಹದೇಶ್ವರ ಬೆಟ್ಟದ ಬಳಿಯ ಇಂಡಿಗನತ್ತ ಗ್ರಾಮದಲ್ಲಿನ ಮತಗಟ್ಟೆ ಧ್ವಂಸ ಪ್ರಕರಣದಲ್ಲಿ ವಿಚಾರಣೆಯ ನೆಪದಲ್ಲಿ ಪೊಲೀಸರು ಅಲ್ಲಿನ ಮಹಿಳೆಯರು, ವೃದ್ಧರು, ಮಕ್ಕಳ ಮೇಲೆ ದೌರ್ಜನ್ಯವೆಸಗಿದ್ದು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ವಕೀಲ ಎನ್.ಪುನೀತ್ ಅವರು ರಾಜ್ಯ ಮಾನವ ಹಕ್ಕುಗಳ ಆಯೋಗ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ‘ಪುಟ್ಟಮ್ಮನಿಗೆ ಬೇಕಿದೆ ಚಿಕಿತ್ಸೆ, ಆಸ್ಪತ್ರೆಗೆ ಸೇರಿಸುವವರಿಲ್ಲ’, ‘ಮಿತಿ ಮೀರಿ ನಡೆದುಕೊಂಡರೇ ಪೊಲೀಸರು?’ ಸೇರಿದಂತೆ ವಿವಿಧ ಶೀರ್ಷಿಕೆಗಳಡಿ ‘ಆಂದೋಲನ’ ದಿನ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯನ್ನು ಉಲ್ಲೇಖಿಸಿರುವ ಅವರು ಚಾಮರಾಜನಗರ ಜಿಲ್ಲಾ ಪೊಲೀಸರು ಕಾನೂನಾತ್ಮಕವಾಗಿ ಹಾಗೂ ಪೊಲೀಸ್ ಕಾಯ್ದೆ ಅನ್ವಯ ಕರ್ತವ್ಯ ನಿರ್ವಹಿಸದೇ ಮಾನವ ಹಕ್ಕುಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಅಜ್ಜ, ಅಜ್ಜಿಯೊಂದಿಗೆ ಅವರ ಜತೆಗಿದ್ದ ಮೂರೂವರೆ ವರ್ಷದ ಮಗುವನ್ನು ಕರೆದೊಯ್ದು 3 ದಿನಗಳ ಕಾಲ ಜೈಲಿನಲ್ಲಿರಿಸಿಕೊಂಡ ದೂರು ಕೇಳಿ ಬಂದಿದೆ. ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶದ ನಿರೀಕ್ಷೆಯಲ್ಲಿದ್ದ ಬಾಲಕಿಯ ಮೇಲೆ ಕೈ ಮಾಡಿರುವ ಆರೋಪವೂ ಕೇಳಿ ಬಂದಿದೆ. ಇವು ಸಂವಿಧಾನದ ಕಲಂ 20 (ಅಪರಾಧಗಳ ಬಗ್ಗೆ ಅಪರಾಧಿಯೆಂದು ನಿರ್ಣಯಿಸುವ ಸಂಬಂಧದಲ್ಲಿ ಸಂರಕ್ಷಣೆ) ಮತ್ತು ಕಲಂ 21 (ಜೀವನ
ಮತ್ತು ವ್ಯಕ್ತಿ ಸ್ವಾತಂತ್ರ್ಯದ ಸಂರಕ್ಷಣೆ)ರ ತತ್ವಗಳಿಗೆ ವಿರುದ್ಧ ಎಂದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರಿಂದ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಆಯೋಗವು ಖುದ್ದು ಭೇಟಿ ನೀಡಿ ದೌರ್ಜನ್ಯಕ್ಕೊಳಗಾದ ಜನರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಅವರು ಮನವಿ ಮಾಡಿದ್ದಾರೆ.



