ಮೈಸೂರು : ಜಿಐ ಟ್ಯಾಗ್ ಹೊಂದಿರುವ ನಂಜನಗೂಡು ರಸಬಾಳೆ, ಮೈಸೂರು ವೀಳ್ಯದೆಲೆ ಪ್ರಸ್ತುತ ಜಪಾನ್, ಮಾಲ್ಡೀವ್ಸ್ ದೇಶಗಳಿಗೆ ರಫ್ತಾಗುತ್ತಿದ್ದು, ಬಾಂಗ್ಲಾದೇಶದಿಂದಲೂ ಬೇಡಿಕೆ ಬಂದಿದೆ.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್. ಸೆಲ್ವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮಂಜುನಾಥ್ ಅಂಗಡಿ ಈ ಮಾಹಿತಿ ಹಂಚಿ ಕೊಂಡರು.
ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದಾಗಿ 40 ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ಹಾನಿಗೀಡಾಗಿದ್ದು, 61 ರೈತರಿಗೆ 7.50 ಲಕ್ಷ ರೂಪಾಯಿ ಪರಿಹಾರಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.
ರೈತರಿಗೆ ಯಂತ್ರೋಪಕರಣಗಳು ಹಾಗೂ ಹನಿನೀರಾವರಿ ಉಪಕರಣಗಳನ್ನು ವಿತರಿಸಬೇಕಾಗಿತ್ತು. ಆದರೆ ಎರಡು ಕೋಟಿ ರೂ. ಅನುದಾನವನ್ನು ಈ ಬಾರಿ ಬಿಡುಗಡೆ ಮಾಡದ ಕಾರಣ ವಿತರಣೆ ಆಗಲಿಲ್ಲ ಎಂದು ತಿಳಿಸಿದರು.





