ಮಹದೇವ ಶಂಕನಪುರ
ಎಚ್.ಎಸ್.ಶಿವಪ್ರಕಾಶ್ ಅವರ ನಾಟಕ ‘ಮಾದಾರಿ ಮಾದಯ್ಯ’ ಕಳೆದ ೩೫ ವರ್ಷಗಳಿಂದಲೂ ಕನ್ನಡ ನೆಲದಲ್ಲಿ ಅಭಿನಯಿಸಲ್ಪಡುತ್ತಿದೆ. ಮೊದಲಿಗೆ ೧೯೯೦ರಲ್ಲಿ ಇದರ ರಂಗ ಪ್ರಯೋಗವಾಯಿತು. ಇದರ ವಸ್ತು ಮತ್ತು ಆಶಯಗಳಂತೂ ಇಂದಿಗೂ ಪ್ರಸ್ತುತವೆ. ಇತ್ತೀಚೆಗೆ(೩೦-೧೧-೨೦೨೫) ಈ ನಾಟಕ ಚಾಮರಾಜನಗರದಲ್ಲಿ ಪ್ರದರ್ಶನಗೊಂಡಿತು. ಮಲೆ ಮಾದೇಶ್ವರ ಜನಪದ ಕಾವ್ಯದ ಪ್ರಸಂಗ ಮತ್ತು ಪಾತ್ರಗಳನ್ನು ಶಿವಪ್ರಕಾಶರು ವರ್ತಮಾನದ ಸವಾಲುಗಳಿಗೆ ತಕ್ಕಂತೆ ಕಟ್ಟಿದ್ದಾರೆ. ಇಂದಿಗೂ ಪ್ರಸ್ತುತವಾಗುವ ಹಾಗೆ ಸೃಜನಶೀಲವಾಗಿ ಮರು ಸೃಷ್ಟಿಸಿದ್ದಾರೆ.
ಚಾಮರಾಜನಗರದ ಯುವ ರಂಗಕರ್ಮಿ ಕಿರಣ್ ಗಿರ್ಗಿಯವರ ಸಂಗೀತ ಮತ್ತು ರಂಗ ನಿರ್ದೇಶನದಲ್ಲಿ ಅಭ್ಯಾಸಿ ಟ್ರಸ್ಟ್ ಕಲಾವಿದರ ತಂಡ ‘ಮಾದಾರಿ ಮಾದಯ್ಯ’ನನ್ನು ರಂಗದ ಮೇಲೆ ಅಭಿನಯಿಸಿತು. ಬೆಳಕು ಮತ್ತು ಪ್ರಸಾದನ ಮಂಜುನಾಥ್ ಕಾಚಕ್ಕಿ, ರಂಗನಾಥ್ ವಸ್ತ್ರಾಲಂಕಾರ, ಮಧುಸೂದನ್ ಹೊಸೂರು ರಂಗಸಜ್ಜಿಕೆ, ಪರಿಕರ ಒದಗಿಸಿದ್ದರು. ಪಾತ್ರ ಪೋಷಣೆ ಮಾಡಿದ್ದ ನಟ-ನಟಿಯರು ಬಹುತೇಕ ಸ್ಥಳೀಯರೇ ಆಗಿದ್ದರು. ‘ನಿರ್ದೇಶಕ ಮತ್ತು ನಟರ ಕೂಡು ಪ್ರಯತ್ನ ಮತ್ತು ಚರ್ಚೆಗಳಿಂದ ಈ ನಾಟಕ ಆಗುತ್ತದೆ’ ಎಂಬ ಶಿವಪ್ರಕಾಶರ ಮಾತನ್ನು ಈ ಪ್ರಯೋಗದ ನಿರ್ದೇಶಕ ಮತ್ತು ನಟರು ರಂಗದ ಮೇಲೆ ಆಗು ಮಾಡಿದಂತಿತ್ತು.
ಮಲೆ ಮಾದೇಶ್ವರ ವನ್ಯಜೀವಿಧಾಮದಲ್ಲಿ ಮನುಷ್ಯ, ತಾಯಿ ಮತ್ತು ಮರಿ ಹುಲಿಗಳಿಗೆ ವಿಷ ಹಾಕಿ ಕೊಂದ ಘಟನೆ ಇನ್ನೂ ಮಾಸಿಲ್ಲ. ಈ ರೀತಿ ಪ್ರಾಣಿಗಳ ಹತ್ಯೆ, ಮನುಷ್ಯ-ವನ್ಯಜೀವಿಗಳ ಸಂಘರ್ಷ, ಕಾಡು, ಬೆಟ್ಟಗುಡ್ಡಗಳ ಮೇಲಿನ ದಾಳಿ, ಗಣಿಗಾರಿಕೆ ಲೂಟಿಗಳಿಂದ ಎಪ್ಪತ್ತೇಳು ಮಲೆ ಪ್ರದೇಶ ಮಾತ್ರವಲ್ಲ, ಇಡೀ ನಾಡೇ ಇಂತಹ ಕೃತ್ಯಗಳಿಂದ ನಲುಗಿದೆ. ಇಂತಹ ಆಘಾತಕಾರಿ ಪರಿಸ್ಥಿತಿಗಳಿಗೆ ಪರಿಹಾರವೇನು? ಈ ಪ್ರಶ್ನೆಗಳೊಂದಿಗೆ ಏಳು ಜನ ಗುಡ್ಡಪ್ಪನವರು ‘ಕಳೆದುಕೊಂಡಿರುವ ದಾರಿ ಹುಡುಕುವ’ ಮಾತುಗಳ ಮೂಲಕ ನಾಟಕ ಆರಂಭಿಸುವುದು ಮಹತ್ವದ ಸಂದೇಶವಾಗಿದೆ. ನಾವುವಾಸಿಸುವ ಭೂತಾಯಿಗೆ ನಮ್ಮಿಂದಲೇ ದೊಡ್ಡ ಗಂಡಾಂತರ ಒದಗಿದೆ.
ಸೂರ್ಯ, ಚಂದ್ರ, ದೇವಾನುದೇವತೆಗಳನ್ನು ಸೆರೆಯಲ್ಲಿಟ್ಟು, ನೆಲತಾಯಿಯನ್ನು ವಶಪಡಿಸಿಕೊಂಡು ವರಿಸುವ ನಾಟಕದ ಶ್ರವಣದೊರೆ ನಮ್ಮ ನಡುವೆಯೆ ಇದ್ದಾನೆ ಎನಿಸುವಂತೆ ನಾಟಕ ವರ್ತಮಾನಕ್ಕೆ ಕನ್ನಡಿ ಹಿಡಿಯುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯ,ಸಮಾನತೆಯನ್ನು ಹತ್ತಿಕ್ಕಿ, ಪ್ರಜಾಪ್ರಭುತ್ವದೊಳಗಿನ ಪುರುಷೋತ್ತಮನೆಂಬ ಸರ್ವಾಧಿಕಾರಿಯನ್ನು ಶ್ರವಣದೊರೆ ಪ್ರತಿನಿಧಿಸುತ್ತಾನೆ. ಇವನ ಸಂಹಾರಕ್ಕೆ ಮಾದಾರಿ ಮಾದಯ್ಯ ರೂಪಿಸುವ ರಣತಂತ್ರ ಹರಳಯ್ಯನ ಉರಿಚಮ್ಮಾವುಗೆಯ ಅಸ್ತ್ರ. ಅಸ್ಪ್ತ್ಯೃಶ್ಯ ಅಸ್ಮಿತೆ ಮತ್ತು ಅಪಮಾನಗಳ ರಕ್ತ ಮತ್ತು ಬೆವರಿನ ಪ್ರತೀಕ ಉರಿ ಚಮ್ಮಾವುಗೆ. ಶ್ರವಣನನ್ನು ಇನ್ನಿಲ್ಲದಂತೆ ಸುಟ್ಟು ಹಾಕುವ ಈ ಅಸ್ತ್ರ ಬಾಬಾ ಸಾಹೇಬರ ಸಂವಿಧಾನದ ಶಕ್ತಿಯ ಪ್ರತೀಕವಾಗಿ ಭಾಸವಾಗುತ್ತದೆ. ಈ ನಾಟಕದಲ್ಲಿನ ಬಸವಣ್ಣ ಪ್ರಜಾಪ್ರಭುತ್ವದ ಮೌಲ್ಯಗಳ ಮರುಸ್ಥಾಪನೆ ಮತ್ತು ಬಿಡುಗಡೆಯ ಸಂಕೇತ.
ನನ್ನ ಮೇಲೆ ನಿರಂತರ ಅತ್ಯಾಚಾರವಾಗಿದೆ, ನನ್ನನ್ನು ಕಲ್ಲು ಮೂರ್ತಿ ಮಾಡಿ ನನ್ನ ಮಾತನ್ನು, ಜೀವವನ್ನು, ಆತ್ಮವನ್ನು ಕಿತ್ತುಕೊಂಡಿದ್ದಾರೆಂಬ ಬಸವಣ್ಣನ ಮಾತು ಇಂದಿನ ಬುದ್ಧ ,ಬಸವ, ಕನಕ, ಅಂಬೇಡ್ಕರರ ಪ್ರತಿಮೆಗಳ ಸ್ಥಿತಿಯನ್ನು ಒಳಗೊಂಡು ಮೂರ್ತಿ ಪೂಜೆ, ದೇವರು-ಧರ್ಮಗಳ ದುರುಪಯೋಗಗಳನ್ನು ಪ್ರಶ್ನಿಸುವ, ಮರು ಅವಲೋಕಿಸಿಕೊಳ್ಳುವಂತೆ ಇದೆ. ಬಸವಣ್ಣನ ಮಾತುಗಳು ಇಂದಿನ ಸ್ಥಾವರ ಸಂಸ್ಕೃತಿಯ ವಿಡಂಬನೆಯಂತೆ ಕೇಳಿಸುತ್ತವೆ. ಬಸವಣ್ಣನ ವಾರಸುದಾರಿಕೆಗಾಗಿ ಕತ್ತಿವೀರರು, ಕಠಾರಿವೀರರು ಮಾಡುವ ಕಿತ್ತಾಟ ಇಂದಿನ ಬಸವ ಅನುಯಾಯಿಗಳನ್ನು, ಹಿಂದೂ -ಮುಸ್ಲಿಂ ಮತೀಯವಾದಿಗಳನ್ನು ಅಣಕಿಸುವಂತಿದೆ. ತನ್ನ ತಲೆಯ ಮೇಲೆ ಹೊತ್ತ ಬಟ್ಟೆಯ ಹೊರೆಯನ್ನು ಇಳಿಸಿಕೊಳ್ಳಲಾಗದೇ, ಅದರಲ್ಲಿರುವ ಜೀವರಾಶಿಗಳಿಗೆ ಹಿಂಸೆಯಾಗದಂತೆ ಮಡಿ ಮಾಡಲಾಗದೇ ಪರಿತಪಿಸುವ ಮಡಿವಾಳ ಮಾಚಿದೇವ, ಇಂದಿನ ಪ್ರಾಮಾಣಿಕ ಮನುಷ್ಯರನ್ನು ಪ್ರತಿನಿಧಿಸುತ್ತಾನೆ. ಹಾಗೇ ಅನಗತ್ಯವಾದ ಮನುಷ್ಯ ವಿರೋಧಿ ಭಾರದ ಮೂಟೆಗಳನ್ನು ಇಳಿಸಬೇಕಾಗಿರುವುದನ್ನು ಈತ ಸೂಚಿಸುತ್ತಾನೆ.
ಇದನ್ನೂ ಓದಿ:-ಅಯೋಧ್ಯೆಯಲ್ಲಿ ಗಣಪತಿ ಆಶ್ರಮ ಶಾಖೆ ಉದ್ಘಾಟನಾ ಕಾರ್ಯಕ್ರಮ
ಮಾದಯ್ಯ ವಾಹನ ಮಾಡಿಕೊಂಡಿರುವ ಹುಲಿಯನ್ನು ನಾಟಕದ ಕರ್ತೃ ಇಲ್ಲಿ ವಿಶಿಷ್ಟವಾಗಿ ಚಿತ್ರಿಸಿದ್ದಾರೆ. ಜೋಳಿಗೆ ಒಳಗಿನ ‘ಬೆಕ್ಕು’ ಬಡವರು ಬಗಲಲಿಕಟ್ಟಿಕೊಂಡಿರುವ ಹಸಿವಾಗಿದೆ. ಅದು ಸಾಮಾನ್ಯ ಹಸಿವಲ್ಲ. ಹೆಬ್ಬುಲಿಯಂತಹ ಹಸಿವು. ಅಂತಹ ಹೆಬ್ಬುಲಿ ರೂಪದ ಹಸಿವನ್ನು ಮಾದಯ್ಯ ಬೆಕ್ಕಿನ ರೂಪದಲ್ಲಿ ಸಾಕಿಕೊಂಡು ಸಹ ಜೀವನ ನಡೆಸುತ್ತಿರುವುದು ಬಡವರ, ಹಸಿದವರ ಗೆಲುವಿನಸಂಕೇತ. ಇದೇ ಹಸಿವು ನೀಗಲು ಅನ್ನ ಸಿಗದಾಗ ಮಾದಯ್ಯ ಕುಡಿದುಮ ಬದುಕುವುದು ಹುಲಿಯ ಹಾಲನ್ನೆ. ಹುಲಿಯ ಈ ಪ್ರತಿಮೆ ಮಾದಯ್ಯ ಗಳಿಸಿದ ಅರಿವನ್ನು, ಧರಿಸಿದ ಧರತ್ವವನ್ನು, ಕ್ರೌರ್ಯದ ಮೇಲಿನ ವಿಜಯವನ್ನು ಸಂಕೇತಿಸುತ್ತದೆ. ವಿಷವಿಕ್ಕಿ ಹುಲಿಗಳನ್ನು ಕೊಲ್ಲುವವರ ಮುಂದೆ ಹುಲಿಯಹಾಲುಂಡು ಹುಲಿಯಾಗಿ, ಹುಲಿಗಿಂತಲೂ ಕ್ರೂರಿಯಾದ ಮನುಷ್ಯನನ್ನು ಮೆಟ್ಟಿನಿಲ್ಲುವ ಮಾದಯ್ಯನೆ ಮಾದರಿಯಾಗಿ ನಿಲ್ಲುತ್ತಾನೆ.ಮ ಕಿರಣ್ಗಿರ್ಗಿ, ಮಾದಾರಿ ಮಾದಯ್ಯ ಪಾತ್ರಧಾರಿಯಾಗಿ ನಾಟಕವನ್ನು ದಡ ಮುಟ್ಟಿಸುವಲ್ಲಿ ನಿರ್ಣಾಯಕವಾಗಿ ಕಂಡರು. ಏಳುಮಲೆಗಳೇ ಏಳು ಜನ ಗುಡ್ಡರಾಗಿ ಆಡುವ ಮಾತು ಇಡೀ ಒಕ್ಕಲುಗಳ ಧ್ವನಿಯಾಗಿ ಕೇಳುತ್ತದೆ. ಮೋಚಿಮಲೆ ಯಕ್ಕಡ ಹೊಲೆಯುವ ಮೋಚಿಯಾಗಿ, ಅವನೇ ಮಾದಾರಿ ಮಾದಯ್ಯನೂ ಆಗಿ ಪರಿವರ್ತನೆಗೊಳ್ಳುವುದು ದಲಿತ ಅಸ್ಮಿತೆಯ ಜಾಗೃತ ಪ್ರಜ್ಞೆಯ ಪ್ರತೀಕ.
ಶ್ರವಣನ ಸಂಹಾರಕ್ಕೆ ಮಾಯ ಜಾಲದ ಬಲೆ ಬೀಸುವ ಜೀತದಾಳಾಗಿ, ಮಠಾಧಿಪತಿಗೆ ಪವಾಡ ಪುರುಷನಾಗಿ, ಕಲ್ಲುಮೂರ್ತಿ ಬಸವಣ್ಣನಿಗೆ ಮಾತು ಕೊಟ್ಟವನಾಗಿ, ಸರ್ವಾಧಿಕಾರಿ ಶ್ರವಣ ಸಂಹಾರಕನಾಗಿ ಮಾದಯ್ಯನ ಪಾತ್ರದಲ್ಲಿ ಕಿರಣ್ ಗಿರ್ಗಿ ನಾಟಕವನ್ನು ಆವರಿಸಿಕೊಳ್ಳುತ್ತಾರೆ. ಶ್ರವಣ, ನೆಲತಾಯಿ, ಶನಿ ಮಹಾತ್ಮ, ವಿನಾಯಕ, ದಂಡನಾಯಕ ಪಾತ್ರಧಾರಿಗಳು ತಮ್ಮ ಗಡಸು ಏರುಧ್ವನಿ ಸಂಭಾಷಣೆಗಳ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಾರೆ.
ಶ್ರವಣ ಪಾತ್ರಧಾರಿ ಕಲೆ ನಟರಾಜು ಪಕ್ಕಾ ಗ್ರಾಮೀಣ ರಂಗ ಕಲಾವಿದರ ಮಾದರಿಯಲ್ಲಿ ಕಂಗೊಳಿಸಿದರು. ಸೂರ್ಯ ಚಂದ್ರ,ನೆಲತಾಯಿ ಮೇಲಿನ ದಿಗ್ವಿಜಯದಿಂದಿಡಿದು ಉರಿ ಚಮ್ಮಾವುಗೆ ಉರಿಗೆ ಉರಿದು ಹೋಗುವ ಶ್ರವಣನ ಅಭಿನಯ ಆಕರ್ಷಕವಾಗಿ ಮೂಡಿ ಬಂತು. ನೆಲತಾಯಿ ಮತ್ತು ಕಲ್ಯಾಣಮ್ಮ ಆಗಿ ನಟಿಸಿದ ನಂದಿನಿ ರವಿಕುಮಾರ್, ಹರಳಯ್ಯನಾಗಿದ್ದ ಮಹೇಶಪ್ಪ ಕಟ್ನವಾಡಿ, ತಮ್ಮ ಪಾತ್ರಗಳಿಗೆ ಜೀವ ತುಂಬಿದರು. ಮಠಾಧಿಪತಿ ಮತ್ತು ಬಸವಣ್ಣನ ಪಾತ್ರಧಾರಿಗಳು ತಮ್ಮ ಸಂಭಾಷಣೆಗಳ ಮೂಲಕ ನಾಟಕದ ಸಂದೇಶಗಳನ್ನು ನೋಡುಗರಿಗೆ ದಾಟಿಸಿದರು. ಏಳು ಜನ ಗುಡ್ಡರು ಇಡೀ ನಾಟಕದ ಸೂತ್ರಧಾರರು. ಶಾಂತರಾಜು ಮೊದಲ ಗುಡ್ಡನಾಗಿ ಉಳಿದ ಆರು ಜನರನ್ನು ಹುರಿದುಂಬಿಸುತ್ತಾ, ಪ್ರೇಕ್ಷಕರನ್ನು ತಲುಪುತ್ತಾ ಸೆಳೆಯುತ್ತಿದ್ದರು. ವೃತ್ತಿ ಗಾಯಕರ ಹಾಡುಗಾರಿಕೆಯ ಪರಿಣತಿ, ರಂಗನಟನ ಸೂಕ್ಷ್ಮಗಳು ಗುಡ್ಡರಿಗೆ ಇದ್ದರೆ ಇನ್ನೂ ಚೆನ್ನಾಗಿರುತ್ತದೆ. ಈ ನಾಟಕದ ಮುಖ್ಯ ಭಾಗಗಳಲ್ಲಿ ಒಂದಾದ ಸಂಕಮ್ಮನ ಪ್ರಸಂಗ ಬಿಟ್ಟಿದ್ದು ಈ ಪ್ರಯೋಗದಲ್ಲಿ ಎದ್ದು ಕಾಣಿಸಿದ ಲೋಪವೆನಿಸಿತು.
ಸಿದ್ಧ ವೇದಿಕೆಯಲ್ಲಿ ರಂಗ ಸಜ್ಜಿಕೆ ಮತ್ತು ಪರಿಕರಗಳು ಆಕರ್ಷಕವಾಗಿದ್ದವು. ರಾಗಿ ಬೀಸುವ ಮಾರಮ್ಮಗಳ ಮುಖವಾಡಗಳು, ಪ್ರಾಣಿಯಾಗುವ ಮಠಾಧಿಶ, ಕೊಂಡ ಮಾವಿನಮರದ ಹರಳಯ್ಯನ ಮಠ, ಬಸವಣ್ಣನ ಗುಡಿ, ಮಾದಯ್ಯನ ನಾಗದಂಡ ಕ್ರಿಯೇಟಿವ್ ಆಗಿದ್ದು, ನಾಟಕ ಪರಿಣಾಮಕಾರಿಯಾಗಲು ಒಳ್ಳೆಯ ಇದು ಕೊಡುಗೆಯಾಗಿತ್ತು. ವಸ್ತ್ರಾಲಂಕಾರ ಪಾರಂಪರಿಕ ಮತ್ತು ಐತಿಹಾಸಿಕ ಚಹರೆಗಳನ್ನು ಬಿಂಬಿಸಿದವು. ಬಣ್ಣ ಬಣ್ಣದ ಬೆಳಕು ಚಿತ್ತಾಕರ್ಷಕ ಎನಿಸಿತ್ತಾದರೂ ಆಗಾಗ ಕೆಲವೊಮ್ಮೆ ಅನಪೇಕ್ಷಿತ ಬೆಳಕು ಸಂಯೋಜನೆಯನ್ನು ನಿಯಂತ್ರಿಸುವ ಕಡೆ ಗಮನ ಕೊಡಬೇಕಿತ್ತು. ಚಂಡೆ, ತಮಟೆ, ತಬಲ, ದಮಡಿ, ಕಂಸಾಳೆ, ಹಾರ್ಮೋನಿಯಂನಂತಹ ಸರಳಮ ಸಂಗೀತ ಪರಿಕರಗಳ ಪರಿಣಾಮಕಾರಿ ಬಳಕೆ ಗಮನ ಸೆಳೆಯಿತು. ಹಲವು ಸವಾಲುಗಳ ನಡುವೆ ಲಭ್ಯವಿರುವ ಸವಲತ್ತುಗಳನ್ನು ಬಳಸಿಕೊಂಡು ನಿರ್ದೇಶಕರು ಮತ್ತು ತಂಡ ನಾಟಕವನ್ನು ರಂಗ ಪ್ರಯೋಗವಾಗಿಸುವಲ್ಲಿ ಯಶಸ್ವಿ ಪ್ರಯತ್ನ ಮಾಡಿದ್ದಾರೆ.
” ಮಾದಯ್ಯ ವಾಹನ ಮಾಡಿಕೊಂಡಿರುವ ಹುಲಿಯನ್ನು ನಾಟಕದ ಕರ್ತೃ ಇಲ್ಲಿ ವಿಶಿಷ್ಟವಾಗಿ ಚಿತ್ರಿಸಿದ್ದಾರೆ. ಜೋಳಿಗೆ ಒಳಗಿನ ‘ಬೆಕ್ಕು’ ಬಡವರು ಬಗಲಲಿ ಕಟ್ಟಿಕೊಂಡಿರುವ ಹಸಿವಾಗಿದೆ. ಅದು ಸಾಮಾನ್ಯ ಹಸಿವಲ್ಲ. ಹೆಬ್ಬುಲಿಯಂತಹ ಹಸಿವು. ಅಂತಹ ಹೆಬ್ಬುಲಿ ರೂಪದ ಹಸಿವನ್ನು ಮಾದಯ್ಯ ಬೆಕ್ಕಿನ ರೂಪದಲ್ಲಿ ಸಾಕಿಕೊಂಡು ಸಹ ಜೀವನ ನಡೆಸುತ್ತಿರುವುದು ಬಡವರ,ಹಸಿದವರ ಗೆಲುವಿನ ಸಂಕೇತ. ಇದೇ ಹಸಿವು ನೀಗಲು ಅನ್ನ ಸಿಗದಾಗ ಮಾದಯ್ಯ ಕುಡಿದು ಬದುಕುವುದು ಹುಲಿಯ ಹಾಲನ್ನೆ. ಹುಲಿಯ ಈ ಪ್ರತಿಮೆ ಮಾದಯ್ಯ ಗಳಿಸಿದ ಅರಿವನ್ನು,ಧರಿಸಿದ ಧೀರತ್ವವನ್ನು, ಕ್ರೌರ್ಯದ ಮೇಲಿನ ವಿಜಯವನ್ನು ಸಂಕೇತಿಸುತ್ತದೆ.”





