Mysore
20
overcast clouds

Social Media

ಸೋಮವಾರ, 31 ಆಗಸ್ಟ್ 2026
Light
Dark

ಮಳೆ ಕೊರತೆ; ಹುಣಸೂರು ತಾಲ್ಲೂಕಿನಲ್ಲಿ ರೈತರಿಗೆ ಸಂಕಷ್ಟ

ಎಂ.ಯೋಗಾನಂದ

ಬಿತ್ತನೆ ಮಾಡಿದ ಬೆಳೆಗಳು ಕೈ ಸೇರದೆ ಆತಂಕ, ಸೂಕ್ತ ಬೆಳೆ ನಷ್ಟ ಪರಿಹಾರಕ್ಕೆ ಆಗ್ರಹ

ಹುಣಸೂರು: ತಾಲ್ಲೂಕಿನಲ್ಲಿ ಈ ಬಾರಿ ಶೇ.೫೩ರಷ್ಟು ಮಳೆ ಕೊರತೆಯಿಂದಾಗಿ ರೈತರು ತೀವ್ರ ಸಂಕಷ್ಟದಲ್ಲಿ ಬದುಕು ದೂಡಬೇಕಾದ ಪರಿಸ್ಥಿತಿ ಉಂಟಾಗಿದೆ.

ಮಳೆ ಕೊರತೆಯಾಗಿರುವುದರಿಂದ ಕೃಷಿ ಚಟುವಟಿಕೆಗಳ ಮೇಲೆ ಗಂಭೀರ ಪರಿಣಾಮ ಬೀರಿದೆ. ಮಳೆ ಆಶ್ರಿತ ಕೃಷಿಯನ್ನೇ ಅವಲಂಬಿಸಿರುವ ಸಾವಿರಾರು ರೈತರು ಬಿತ್ತನೆ ಮಾಡಿದ ಬೆಳೆಗಳು ಕೈ ಸೇರದೆ ಚಿಂತಾಕ್ರಾಂತರಾಗಿದ್ದಾರೆ.

ತಾಲ್ಲೂಕಿನಲ್ಲಿ ಜನವರಿಯಿಂದ ಆಗಸ್ಟ್‌ವರೆಗೆ ವಾಡಿಕೆ ಮಳೆ ೮೦೦ ಮಿ.ಮೀ. ಆಗಬೇಕಿತ್ತು. ಆದರೆ ಕೇವಲ ೪೧೩ ಮಿ.ಮೀ. ಮಳೆ ಮಾತ್ರ ಆಗಿದೆ. ಜೂನ್ ಮತ್ತು ಅಗಸ್ಟ್ ಎರಡು ತಿಂಗಳಲ್ಲಿ ವಾಡಿಕೆ ಮಳೆ ೨೩೮ ಮಿ.ಮೀ. ಬೀಳಬೇಕಿತ್ತು. ಆದರೆ ಮಳೆಯಾಗಿರುವುದು ೧೧೯ ಮಿ.ಮೀ. ಮಾತ್ರ. ತಾಲ್ಲೂಕಿನಲ್ಲಿ ಶೇ.೫೩ರಷ್ಟು ಮಳೆ ಕೊರತೆಯಿಂದಾಗಿ ರೈತರು ನಷ್ಟ ಅನುಭವಿಸುವಂತಾಗಿದೆ.

ಹುಣಸೂರು ತಾಲ್ಲೂಕಿನಲ್ಲಿ ೬೭,೩೫೭ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಬೇಕಾಗಿತ್ತು. ಆದರೆ ಈ ಬಾರಿ ಬಿತ್ತನೆ ಆಗಿರುವುದು ೩೧,೫೩೧ ಹೆಕ್ಟೇರ್‌ನಲ್ಲಿ ಮಾತ್ರ. ೭ ಸಾವಿರ ಹೆಕ್ಟೇರ್‌ನಲ್ಲಿ ಭತ್ತದ ನಾಟಿ ಆಗಬೇಕಾಗಿತ್ತು. ಆದರೆ, ಕೇವಲ ೧,೫೦೦ ಹೆಕ್ಟೇರ್ನಲ್ಲಿ ಮಾತ್ರ ಭತ್ತದ ನಾಟಿ ಕಾರ್ಯ ನಡೆಯುತ್ತಿದೆ. ಮಳೆಯ ಕೊರತೆಯಿಂದಾಗಿ ಭತ್ತದ ಬೆಳೆಯನ್ನು ರೈತರು ಬೆಳೆಯಬಾರದೆಂದು ಕೃಷಿ ಇಲಾಖೆ ಮನವಿ ಮಾಡಿದ್ದು, ಅದರ ಬದಲು ಕಡಿಮೆ ನೀರು ಉಪಯೋಗಿಸಿ ಪರ್ಯಾಯ ಬೆಳೆ ಬೆಳೆಯುವಂತೆ ಸಲಹೆ ನೀಡಿದೆ.

ಕಳೆದ ಬಾರಿ ಮುಸುಕಿನ ಜೋಳವನ್ನು ೧೩ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದು, ಈ ಬಾರಿ ಕೇವಲ ೮,೮೭೦ ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ. ಅಲ್ಲದೆ, ಮುಸುಕಿನಜೋಳಕ್ಕೆ ಬಿಳಿ ಸುಳಿ ರೋಗ ವ್ಯಾಪಕವಾಗಿ ಹರಡಿ ಈ ಬೆಳೆಯಲ್ಲೂ ಕೂಡ ಬಹುತೇಕ ರೈತರು ನಷ್ಟ ಅನುಭವಿಸುವಂತಾಗಿದೆ. ಒಟ್ಟಾರೆಯಾಗಿ ತಾಲ್ಲೂಕಿನಲ್ಲಿ ಮಳೆಯ ಭಾವದಿಂದ ಬರದ ಛಾಯೆ ಉಂಟಾಗಿದ್ದು, ರೈತರು ನಷ್ಟವನ್ನು ಅನುಭವಿಸುವಂತಾಗಿದ್ದು, ಸರ್ಕಾರ ರೈತರ ನೆರವಿಗೆ ಬರಬೇಕಿದೆ.

” ಹುಣಸೂರು ತಾಲ್ಲೂಕನ್ನು ಬರಪೀಡಿತ ತಾಲ್ಲೂಕು ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿರುವುದು ಸ್ವಾಗತಾರ್ಹ. ತಾಲ್ಲೂಕಿನಲ್ಲಿ ಶೇಕಡ ೬೦ರಷ್ಟು ಮಳೆ ಕೊರತೆಯಿಂದಾಗಿ ಪ್ರಮುಖ ವಾಣಿಜ್ಯ ಬೆಳೆ ತಂಬಾಕು ಸೇರಿದಂತೆ ಬಹುತೇಕ ಬೆಳೆಗಳು ನಷ್ಟವಾಗಿವೆ. ರಾಜ್ಯ ಸರ್ಕಾರ ತಂಬಾಕನ್ನು ವಾಣಿಜ್ಯ ಬೆಳೆ ಎಂದು ಪರಿಗಣಿಸುವುದನ್ನು ಮುಂದುವರಿಸದೆ ಈ ಸಾಲಿನಲ್ಲಿ ತಂಬಾಕು ರೈತರಿಗೆ ಆರ್ಥಿಕ ನೆರವು ನೀಡಬೇಕು.”

-ಹೊಸೂರು ಕುಮಾರ್, ರೈತ ಸಂಘದ ಜಿಲ್ಲಾಧ್ಯಕ್ಷ

” ಬೆಳೆ ನಷ್ಟ ಉಂಟಾಗಿರುವ ಪ್ರದೇಶಗಳನ್ನು ಗುರುತಿಸಿ ಪ್ರತಿ ಪಂಚಾಯಿತಿವಾರು ಸರ್ಕಾರಕ್ಕೆ ವರದಿ ನೀಡಲಾಗಿದೆ. ಬೆಳೆ ವಿಮೆ ಪ್ರಚಾರ ಕೈಗೊಂಡು ನಮ್ಮ ತಾಲ್ಲೂಕಿನಲ್ಲಿ ೨೦ ಸಾವಿರ ರೈತರಿಗೆ ಗ್ರೂಪ್ ಮಾಡಿ ದೂರವಾಣಿ ಮೂಲಕ ಬೆಳೆ ವಿಮೆ ಬಗ್ಗೆ ಪ್ರಚಾರ ಮಾಡಿದ್ದೇವೆ. ನಮ್ಮ ತಾಲ್ಲೂಕಿನಲ್ಲಿ ೪,೨೦೫ ರೈತರಿಗೆ ವಿಮೆ ಆಗಿದೆ.”

-ಕೆ.ಎಸ್.ಅನಿಲ್ ಕುಮಾರ್, ಸಹಾಯಕ ಕೃಷಿ ನಿರ್ದೇಶಕ

” ಮಳೆ ಕೊರತೆಯಿಂದ ರೈತರು ಬೆಳೆದಿರುವ ಮುಸುಕಿನಜೋಳ ಸೇರಿದಂತೆ ವಿವಿಧ ಬೆಳೆಗಳು ನಷ್ಟವಾ ಗಿದ್ದು, ಬಿಳಿ ಸುಳಿ ರೋಗ ಕೂಡ ಬಾಧಿಸಿದೆ. ಆದ್ದರಿಂದ ಸರ್ಕಾರ ಬೆಳೆ ನಷ್ಟ ಪರಿಹಾರ ನೀಡಬೇಕು.”

-ವಿ.ಅನಿಲ್, ರೈತ, ಗೋಕುಲ ಬಡಾವಣೆ

 

 

Tags:
error: Content is protected !!