ಮೈಸೂರಿನ ವಿಜಯನಗರದ ೪ನೇ ಹಂತದಲ್ಲಿರುವ ಮುಕ್ತಿಧಾಮದಲ್ಲಿ ಶವಸಂಸ್ಕಾರ ಮಾಡುವವರ ಬವಣೆ ಹೇಳತೀರದಾಗಿದೆ. ಮೈಸೂರು ಅಭಿ ವೃದ್ಧಿ ಪ್ರಾಧಿಕಾರದಿಂದ ನಿರ್ವಹಿಸಲ್ಪಡುವ ಅತ್ಯಾಧುನಿಕ ಚಿತಾಗಾರವಿರುವ ಈ ಮುಕ್ತಿಧಾಮದಲ್ಲಿ ಅನಿಲ ಚಿತಾಗಾರ ಕೆಟ್ಟಿದ್ದು, ಇರುವ ವಿದ್ಯುತ್ ಚಿತಾಗಾರದ ಕಾರ್ಯಕ್ಷಮತೆಯೂ ಸಮರ್ಪಕವಾಗಿಲ್ಲ.
ಒಂದು ಮೃತ ದೇಹವನ್ನು ದಹಿಸಲು ಒಂದೂವರೆ ಗಂಟೆ ತೆಗೆದುಕೊಳ್ಳುತ್ತದೆ.ನಂತರ ಯಂತ್ರ ತಣಿಯಲು ೨ ಗಂಟೆಗಳ ಸಮಯ ಬೇಕಾಗುತ್ತದೆ. ಮೃತ ಶರೀರದ ಅಂತಿಮ ಯಾತ್ರೆಯೂ ಸರಿಯಾದ ಸಮಯಕ್ಕೆ ನೆರವೇರದ ಕಾರಣ ಶವ ಸಂಸ್ಕಾರ ಮಾಡುವವರ ಸ್ಥಿತಿ ಅತಂತ್ರವಾಗಿದೆ. ಕೆಲವು ಬಾರಿ ಸಿಬಂದಿಯೇ ಲಭ್ಯವಿರುವುದಿಲ್ಲ. ಆದ ಕಾರಣ ಶವಸಂಸ್ಕಾರಕ್ಕೆ ಗಂಟೆಗಟ್ಟಲೇ ಕಾಯ ಬೇಕಾದ ಪರಿಸ್ಥಿತಿ ಇದೆ ಎನ್ನುತ್ತಾರೆ ಈ ಭಾಗದ ಜನರು. ಸಂಬಂಧ ಪಟ್ಟವರು ಇತ್ತ ಗಮನಹರಿಸಿ ವಿದ್ಯುತ್ ಚಿತಾಗಾರವು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಮಾಡಿ, ಶವ ಸಂಸ್ಕಾರ ನಡೆಸುವವರ ಬವಣೆಗೆ ಸ್ಪಂದಿಸಲಿ.
-ಬೆಸಗರಹಳ್ಳಿ ರವಿಪ್ರಸಾದ್, ಮೈಸೂರು





