Mysore
22
clear sky

Social Media

ಬುಧವಾರ, 15 ಏಪ್ರಿಲ 2026
Light
Dark

ಕೋಟೆಯ ಜನಾರ್ಧನ್‌ ಈಗ ಮೀಸಲು ಪಡೆಯ ಡಿಐಜಿಪಿ

ಮಂಜು ಕೋಟೆ

ಎಚ್.ಡಿ.ಕೋಟೆ : ಕಠಿಣ ಶ್ರಮವಹಿಸಿ ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿದರೆ ಅತ್ಯುನ್ನತ ಹುದ್ದೆ ಪಡೆಯಬಹುದು ಎಂಬುದಕ್ಕೆ ಪಟ್ಟಣದ ನಿವಾಸಿ ಜನಾರ್ಧನ್ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ ಡಿಐಜಿಪಿ ಹುದ್ದೆ ಅಲಂಕರಿಸಿರುವುದು ಸಾಕ್ಷಿಯಾಗಿದೆ.

ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೋನಿಯ ಆರ್. ರಾಮಯ್ಯ ಮತ್ತು ಜಯಲಕ್ಷ್ಮಿ ದಂಪತಿಯ ಪುತ್ರ ಜನಾರ್ಧನ್ ಮೀಸಲು ಪೊಲೀಸ್ ಪಡೆಯ ಡಿಐಜಿಪಿ ಹುದ್ದೆ ಅಲಂಕರಿಸುವ ಮೂಲಕ ಅತ್ಯುನ್ನತ ಹುದ್ದೆಗೇರಿದ ತಾಲ್ಲೂಕಿನ ಮೊದಲನೇ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

ಪಟ್ಟಣದ ಸೇಂಟ್ ಮೇರಿಸ್ ಶಾಲೆಯಲ್ಲಿ ಒಂದರಿಂದ ಏಳನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದ ನಂತರ ಮೈಸೂರಿನಲ್ಲಿ ಬಿಎಸ್ಸಿ ವ್ಯಾಸಂಗ ಮಾಡಿ, ೨೦೦೨ರಲ್ಲಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯಲ್ಲಿ ಡಿವೈಎಸ್ಪಿ ಆಗಿ ಸೇರ್ಪಡೆಗೊಂಡು ಸೇವೆ ಸಲ್ಲಿಸಿ ನಂತರ ಎಸ್ಪಿ ಆಗಿ ಮುಂಬಡ್ತಿ ಪಡೆದು ಕೆಲಸ ನಿರ್ವಹಿಸಿದ್ದರು.

ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯಲ್ಲಿ ರಾಜ್ಯದ ನಾಲ್ಕು ಭಾಗಗಳಲ್ಲಿ ಹೊಸದಾಗಿ ಡಿಐಜಿಪಿ ಹುದ್ದೆಗಳನ್ನು ಸೃಷ್ಟಿಸಿದ್ದು, ಮೈಸೂರು, ಮಂಡ್ಯ, ಚಾಮರಾಜನಗರ, ತುಮಕೂರು,
ಮಂಗಳೂರು ಇನ್ನಿತರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಡಿಐಜಿಪಿ ಹುದ್ದೆಗೇರಲು ಭಾರೀ ಪೈಪೋಟಿ ಉಂಟಾಗಿತ್ತು. ಇದರ ನಡುವೆ ತಮ್ಮ ಕಾರ್ಯವೈಖರಿ ಮೂಲಕ ಜನಾರ್ಧನ್ ಅವರು ಹುದ್ದೆಗೆ ನೇಮಕಗೊಂಡಿದ್ದಾರೆ. ಡಿವೈಎಸ್ಪಿಯಾಗಿ ಮತ್ತು ಎಸ್‌ಪಿಯಾಗಿ ಜನಾರ್ಧನ್ ಅವರು ಉತ್ತಮವಾಗಿ ಸೇವೆ ಸಲ್ಲಿಸಿದ್ದನ್ನು ಗುರುತಿಸಿ ೨೦೧೬ರಲ್ಲಿ ಮತ್ತು ೨೦೨೨ ರಲ್ಲಿ ಮುಖ್ಯಮಂತ್ರಿಗಳ ಪದಕ ಮತ್ತು ರಾಷ್ಟ್ರಪತಿಗಳ ಪದಕವನ್ನು ನೀಡಿ ಗೌರವಿಸಲಾಗಿದೆ.

ಹಿಂದುಳಿದ ತಾಲ್ಲೂಕಿನಲ್ಲಿ ಶಿಕ್ಷಣದ ಪ್ರಾಮುಖ್ಯತೆ ಅರಿತಿದ್ದ, ಕಷ್ಟಪಟ್ಟು ಮುಂದೆ ಬಂದಿದ್ದ ಆರ್. ರಾಮಯ್ಯ ದಂಪತಿ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದ್ದರು. ಈ ಹಿನ್ನೆಲೆಯಲ್ಲಿ ಅವರ ಇನ್ನೊಬ್ಬ ಮಗ ರಾಜು ಸರ್ಕಾರಿ ವೈದ್ಯರಾಗಿ ತಾಲ್ಲೂಕಿನಲ್ಲೇ ಸೇವೆ ಸಲ್ಲಿಸುತ್ತಿದ್ದಾರೆ. ಜನಾರ್ಧನ್ ಈಗ ಡಿಐಜಿಪಿಯಾಗಿ ಜಿಲ್ಲೆಯ ಕೇಂದ್ರಸ್ಥಾನ ಮೈಸೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಛಲ ಮತ್ತು ಪ್ರೋತ್ಸಾಹ ಇದ್ದಲ್ಲಿ ಎಂಥ ಹುದ್ದೆಗಳನ್ನಾದರೂ ಪಡೆಯಬಹುದು ಎಂಬುದಕ್ಕೆ ಪಟ್ಟಣದ ನಿವಾಸಿ ಜನಾರ್ಧನ್ ಸಾಕ್ಷಿಯಾಗಿದ್ದು, ಇತರರಿಗೆ ಸ್ಥೂರ್ತಿಯಾಗಿದ್ದಾರೆ. ಅವರು ಉನ್ನತ ಹುದ್ದೇಗೇರಿರುವುದು ಜನತೆಯಲ್ಲಿ ಸಂತಸ ಮೂಡಿಸಿದೆ.

Tags:
error: Content is protected !!