Mysore
21
overcast clouds

Social Media

ಗುರುವಾರ, 20 ಆಗಸ್ಟ್ 2026
Light
Dark

ನೀರಿಲ್ಲದಿದ್ದರೂ ಭರ್ತಿಯಾಗುತ್ತಿದೆ ಕಸುವಿನಹಳ್ಳಿ ಕೆರೆ!  

ಎಸ್.ಎಸ್.ಭಟ್

ಸುತ್ತಲಿನ ಕ್ರಷರ್‌ನಿಂದ ತಂದು ಹಾಕುತ್ತಿರುವ ರಾಶಿ ದೂಳಿನಿಂದ ತುಂಬುತ್ತಿದೆ ಕೆರೆ; ಗ್ರಾಮಸ್ಥರ ಆಕ್ರೋಶ

ನಂಜನಗೂಡು: ಮಳೆ ಬಂದರೆ ನೀರಿನಿಂದ ಭರ್ತಿಯಾಗುತ್ತಿದ್ದ ತಾಲ್ಲೂಕಿನ ಕಸುವಿನಹಳ್ಳಿಯ ಕೆರೆ ನೀರಿಲ್ಲದೆಯೂ ಭರ್ತಿಯಾಗುತ್ತಿದೆ! ಕೆರೆ ನೀರಿನಿಂದ ಭರ್ತಿಯಾಗಬೇಕು ಅಥವಾ ಹೂಳಿನಿಂದ ಭರ್ತಿಯಾಗಬೇಕು. ಆದರೆ, ಈ ಕೆರೆಯಲ್ಲಿ ನೀರೂ ಇಲ್ಲ, ಹೂಳೂ ಇಲ್ಲ. ಆದರೂ ಕೆರೆ ಮಾತ್ರ ಭರ್ತಿಯಾಗುತ್ತಲೇ ಇದೆ.

ಮಳೆ ಇಲ್ಲದೆ ಬರಗಾಲ ತಾಲ್ಲೂಕನ್ನು ಆವರಿಸಿಕೊಂಡಿದ್ದರೂ ಕಸುವಿನಹಳ್ಳಿಯ ಈ ಕೆರೆಯನ್ನು ಭರ್ತಿ ಮಾಡುತ್ತಿರುವುದು ಕ್ರಷರ್‌ನ ದೂಳಿನಿಂದ ಎಂಬುದು ಅಚ್ಚರಿಯಾದರೂ ಸತ್ಯ. ೧೮ ಎಕರೆ ೭ ಗುಂಟೆ ವಿಸ್ತೀರ್ಣದ ಸರ್ಕಾರಿ ಶಾಲಾ, ಕಾಲೇಜು, ವಸತಿ ನಿಲಯಗಳಿಗೆ ತಾಗಿದಂತಿರುವ ಈ ಸರ್ಕಾರಿ ಕೆರೆಯನ್ನು ಭರ್ತಿ ಮಾಡುತ್ತಿರುವವರು ಸುತ್ತಲಿನ ಕ್ರಷರ್ ಮಾಲೀಕರು ಹಾಗೂ ಕ್ರಷರ್‌ನಿಂದ ಎದ್ದ ದೂಳು.

ತಮ್ಮ ಕ್ರಷರ್‌ನಿಂದ ಉತ್ಪಾದನೆಯಾಗುವ ನೂರಾರು ಟನ್ ದೂಳನ್ನು ಅದರ ಮಾಲೀಕರು ತಂದು ಸುರಿಯುತ್ತಿರುವ ಪರಿಣಾಮ ನೀರಿನಿಂದ ಭರ್ತಿ ಯಾಗಬೇಕಿದ್ದ ಕೆರೆ ದೂಳಿನಿಂದ ಭರ್ತಿಯಾಗುತ್ತಿದೆ.

ಮತ್ತೊಂದೆಡೆ ಇಲ್ಲಿನ ಸರ್ಕಾರಿ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು, ವಸತಿನಿಲಯದಮಕ್ಕಳು ಈ ದೂಳಿನಿಂದಾಗಿ ಪರದಾಡುವಂತಾಗಿದೆ. ಈ ದೂಳನ್ನು ಜನ ರಹಿತ ಪ್ರದೇಶಕ್ಕೆ ಕೊಂಡೊಯ್ದು ಹಾಕಬೇಕಾದ ಕ್ರಷರ್ ಮಾಲೀಕರು, ಅದನ್ನು ಹೊರಸಾಗಿಸುವ ಖರ್ಚನ್ನು ಉಳಿಸುವ ದುರಾಸೆಯಿಂದ ಈ ಕೆರೆಗೆ ತುಂಬುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಕೆರೆ ಉಳಿಸಿ ದೂಳಿನಿಂದ ನಮ್ಮನ್ನು ಪಾರು ಮಾಡಿ ಎನ್ನುವ ಕಸುವಿಹಳ್ಳಿ ಗ್ರಾಮದ ಹಲವರ ದೂರು ಗ್ರಾಪಂ, ತಾಪಂ, ತಾಲ್ಲೂಕು ಕಚೇರಿಗಳಿಗೆ ತಲುಪಿ, ಅಲ್ಲಿ ಪರಿಹಾರ ಸಿಗದೆ, ಈಗ ಲೋಕಾಯುಕ್ತಕ್ಕೂ ತಲುಪಿದ್ದು, ಸಮಸ್ಯೆ ಪರಿಹಾರಕ್ಕಾಗಿ ಎದುರು ನೋಡುತ್ತಿದ್ದಾರೆ.

” ಕ್ರಷರ್ ದೂಳನ್ನು ತಂದು ಕೆರೆ ಜಾಗಕ್ಕೆ ಸುರಿಯುತ್ತಿರುವ ಮಾಲೀಕರಿಗೆ ನೋಟಿಸ್ ನೀಡಲಾಗಿದ್ದು, ಕೆರೆಗೆ ತಂದುಹಾಕಿರುವ ದೂಳನ್ನು ಹೊರಸಾಗಿಸಲು ಸೂಚಿಸಲಾಗಿದೆ.”

-ಮಹದೇವಸ್ವಾಮಿ, ಪಿಡಿಒ, ಕಸುವಿನಹಳ್ಳಿ ಗ್ರಾಪಂ

” ಗ್ರಾಮ ಪಂಚಾಯಿತಿ, ಪರಿಸರ ಇಲಾಖೆ, ತಾಲ್ಲೂಕು ಕಚೇರಿ, ಈಗ ಲೋಕಾಯುಕ್ತಕ್ಕೆ ಕೆರೆ ಉಳಿಸಿ ದೂಳಿನಿಂದ ಗ್ರಾಮ ರಕ್ಷಿಸಿ ಎಂದು ದೂರು ನೀಡಲಾಗಿದ್ದು, ಅವರು ಬರುವುದರೊಳಗೆ ಕೆರೆಯೇ ಕಾಣೆಯಾದರೂ ಆಶ್ಚರ್ಯವಿಲ್ಲ.”

-ಆರ್.ಮಹದೇವಸ್ವಾಮಿ, ಗ್ರಾಮಸ್ಥರು

 

 

Tags:
error: Content is protected !!