Mysore
20
overcast clouds
Light
Dark

ಜರ್ನೋತ್ರಿ-24 ಮಾನಸ ಮಾಧ್ಯಮ ಹಬ್ಬ: ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದಿಂದ ಆಯೋಜನೆ

• ಜಿ.ತಂಗಂ ಗೋಪಿನಾಥಂ

ಮೈಸೂರು: ದಿಕ್ಕು ತಪ್ಪುವ ಸರ್ಕಾರ ಅಥವಾ ಜನಪ್ರತಿನಿಧಿಗಳಿಗೆ ಅಕ್ಷರಗಳ ಚಾಟಿ ಮೂಲಕ ಎಚ್ಚರಿಕೆ ನೀಡುವ, ಪ್ರಜಾಪ್ರಭುತ್ವ ವ್ಯವಸ್ಥೆಯ ನಾಲ್ಕನೇ ಅಂಗವೆಂದೇ ಪರಿಗಣಿಸಲ್ಪಟ್ಟಿರುವ ಪತ್ರಿಕಾರಂಗವನ್ನು ಪ್ರವೇಶಿಸಲು ಬಯಸುವ ಯುವಜನಾಂಗಕ್ಕೆ ದಾರಿದೀಪವಾಗುವುದು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದ ಅಧ್ಯಯಮ. ಮೈಸೂರಿನಲ್ಲಿ ಇಂತಹ ಅಧ್ಯಯನ ವಿಭಾಗದಲ್ಲಿ ಮಾಧ್ಯಮ ಹಬ್ಬದ ಸಂಭ್ರಮ ಮನೆ ಮಾಡಿದೆ.

ರಾಜ್ಯದ ಮೊಟ್ಟ ಮೊದಲ ವಿಶ್ವ ವಿದ್ಯಾನಿಲಯವಾಗಿ ರುವ ಮೈಸೂರು ವಿವಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು 2ನೇ ಆವೃತ್ತಿಯ ಮಾಧ್ಯಮ ಹಬ್ಬದ ಆಚರಣೆಗೆ ಸಿದ್ಧವಾಗುತ್ತಿದೆ.

ಈ ಹಬ್ಬದಲ್ಲಿ ಪಾಲ್ಗೊಳ್ಳಲಿರುವ ಮೈಸೂರು, ಮಂಗಳೂರು, ಬೆಂಗಳೂರು, ಧಾರವಾಡ ಸೇರಿ ದಂತೆ ಇನ್ನಿತರ ವಿವಿಗಳಲ್ಲಿ ವ್ಯಾಸಂಗ ಮಾಡು ತಿರುವ ಪತ್ರಿಕೋದ್ಯಮ ವಿದ್ಯಾರ್ಥಿ ಗಳನ್ನು ಸ್ವಾಗತಿಸಲು ವಿವಿಯ ಮಾನಸಗಂಗೋತ್ರಿ ಅಂಗಳ ಸಜ್ಜಾಗಿದೆ. ಈಗಾಗಲೇ ಮಾಧ್ಯಮ ಹಬ್ಬದ ಪೋಸ್ಟರ್ ರಾಜ್ಯ ಮಟ್ಟದಲ್ಲಿ ಗಮನ ಸೆಳೆದು ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದೆ. ಪತ್ರಿಕೋದ್ಯಮ ವಿದ್ಯಾರ್ಥಿಗಳನ್ನು ಪಠ್ಯಕ್ಕೆ ಸೀಮಿತಗೊಳಿಸದೆ ಅವರಿಗೆ ವಿಷಯವನ್ನು ಪ್ರಾಯೋಗಿಕವಾಗಿಯೂ ತಿಳಿಸಿಕೊಡುವ ಉದ್ದೇಶದಿಂದ ಜು.24 ಮತ್ತು 25 ರಂದು ಎರಡು ದಿನಗಳು ರಾಜ್ಯ ಮಟ್ಟದ ಮಾನಸ ಮಾಧ್ಯಮ ಹಬ್ಬ ಜರ್ನೋತ್ರಿ-24 ನ್ನು ಆಯೋಜಿಸಲಾಗಿದೆ.

ಕಳೆದ ಬಾರಿ ಬಹುದೊಡ್ಡ ಮಟ್ಟದಲ್ಲಿ ಮಾಧ್ಯಮ ಹಬ್ಬ ನಡೆದಿತ್ತು. ಈ ಬಾರಿಯೂ ಅದೇ ರೀತಿ ಆಚರಣೆಯಾಗಲಿದೆ. ವಿದ್ಯಾರ್ಥಿಗಳ ನೋಂದಣಿಯೂ ಆರಂಭವಾಗಿದೆ.

ಜರ್ನೋತ್ರಿ-24 ರ ಪೋಸ್ಟರ್ ಫೇಸ್‌ಬುಕ್, ವ್ಯಾಟ್ಸಾಪ್, ಇನ್ಸಾಗ್ರಾಂಗಳಲ್ಲಿ ಸದ್ದು ಮಾಡುತ್ತಿದೆ. ಕಳೆದ 51 ವರ್ಷಗಳಿಂದ ವಿಭಾಗದಿಂದ ಉನ್ನತ ಶಿಕ್ಷಣ ಪಡೆದು ಹೊರಬಂದ ಹಳೆಯ ವಿದ್ಯಾರ್ಥಿಗಳು ಪೋಸ್ಟರ್ ನೋಡಿ ಲೈಕ್ ಕೊಟ್ಟು ಉತ್ತೇಜಿಸುತ್ತಿದ್ದಾರೆ.

ಕೋಟ್ಸ್‌))

ಕರ್ನಾಟಕದಲ್ಲೇ ಮೊಟ್ಟ ಮೊದಲ ಪತ್ರಿಕೋದ್ಯಮ ವಿಭಾಗ ಎಂದೇ ಹೆಸರುವಾಸಿಯಾದ ಮೈಸೂರು ವಿವಿಯ ಪತ್ರಿಕೋದ್ಯಮ ವಿಭಾಗವು ಹಲವಾರು ಪತ್ರಕರ್ತರನ್ನು ತಯಾರಿ ಮಾಡಿದೆ; ಇನ್ನೂ ಮಾಡುತ್ತಿದೆ. ನಾನು 35 ವರ್ಷಗಳ ಕಾಲ ಸೇವೆ ಸಲ್ಲಿಸಿದ ಈ ವಿಭಾಗದಲ್ಲಿ ಮಾಧ್ಯಮ ಹಬ್ಬವನ್ನು ಆಯೋಜನೆ ಮಾಡಿರುವುದು ಸಂತಸದ ಸಂಗತಿ.
-ಪ್ರೊ.ಎನ್.ಉಷಾರಾಣಿ, ನಿವೃತ್ತ ಪ್ರಾಧ್ಯಾಪಕರು, ಪತ್ರಿಕೋದ್ಯಮ ವಿಭಾಗ, ಮೈಸೂರು ವಿವಿ.

ಜರ್ನೋ ಮಾಧ್ಯಮ ಹಬ್ಬ ಎಂಬುದು ನಮ್ಮ ವಿಭಾಗದಲ್ಲಿ ಓದಿದ ಮತ್ತು ಓದುತ್ತಿರುವ ಅದೆಷ್ಟೋ ವಿದ್ಯಾರ್ಥಿಗಳ ಕನಸು. ಜು.24 ಮತ್ತು 25 ರಂದು ಎರಡು ದಿನಗಳ ಜರ್ನೋತ್ರಿ-24 ಮಾನಸ ಮಾಧ್ಯಮ ಹಬ್ಬವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ರೂವಾರಿಗಳು ವಿದ್ಯಾರ್ಥಿಗಳೇ ಆಗಿರುವುದರಿಂದ ಅವರ ಕಲಿಕೆಗೆ ಇದು ದಾರಿ ಮಾಡಿಕೊಡುತ್ತದೆ. ಅವರ ಪ್ರತಿಭೆಗೆ ನೀರೆರೆದು ಪೋಷಿಸುತ್ತದೆ.
-ಪ್ರೊ.ಎಂ.ಎಸ್.ಸಪ್ಪ, ಮುಖ್ಯಸ್ಥರು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಮಾನಸಗಂಗೋತ್ರಿ, ಮೈಸೂರು.

ಪತ್ರಿಕೊದ್ಯಮ ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಜರ್ನೋತ್ರಿ ಮಾಧ್ಯಮ ಸೂಕ್ತ ವೇದಿಕೆಯಾಗಿದ್ದು, ನಾವೂ ಇದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದೇವೆ.
-ಕೆ.ಎನ್.ವೈಷ್ಣವಿ, ಪತ್ರಿಕೋದ್ಯಮ ವಿದ್ಯಾರ್ಥಿನಿ.

ಯಾವೆಲ್ಲ ಸ್ಪರ್ಧೆಗಳಿವೆ?
ಮಾಧ್ಯಮ ಹಬ್ಬದ ಅಂಗವಾಗಿ ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ವರದಿಗಾರಿಕೆ, ಛಾಯಾಚಿತ್ರ, ಸೃಜನಶೀಲ ಬರವಣಿಗೆ, ಚರ್ಚಾ ಸ್ಪರ್ಧೆ, ಮೊಬೈಲ್ ಪತ್ರಿಕೋದ್ಯಮ, ಪಿಟಿಸಿ, ಕ್ವಿಜ್, ಪೋಸ್ಟರ್ ಡಿಸೈನ್, ಕಿರುಚಿತ್ರ, ರೀಲ್ಸ್… ಹೀಗೆ ವಿವಿಧ ಸ್ಪರ್ಧೆಗಳನ್ನು ಪದವಿ ಹಾಗೂ ಸ್ನಾತಕ ಪದವಿಯ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗಿದೆ. ರಾಜ್ಯದ ಹಲವಾರು ವಿವಿಗಳ 350ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧಿಸಲಿದ್ದಾರೆ.

ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ರಸಸಂಜೆ: ಜರ್ನೋ-24 ಹಬ್ಬದ ಮೊದಲನೇ ದಿನವಾದ ಜು.24 ರಂದು ಸಂಜೆ ಮೈಸೂರು ವಿವಿಯ ಮಾನಸಗಂಗೋತ್ರಿಯ ಕ್ಲಾಕ್ ಟವರ್ ಬಳಿಯ ಮೈದಾನದಲ್ಲಿ ನಡೆಯುವ ಸಾಂಸ್ಕೃತಿಕ ರಸಸಂಜೆ ಕಾರ್ಯಕ್ರಮದಲ್ಲಿ ಖ್ಯಾತ ಸಿನಿಮಾ ಕಲಾವಿದರು, ಮಿಮಿಕ್ರಿ ಕಲಾವಿದರು, ಗಾಯಕರು ಮತ್ತು ನೃತ್ಯ ಪಟುಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ.

24 ರಂದು ಉದ್ಘಾಟನೆ: ಜು.24 ರ ಬೆಳಿಗ್ಗೆ ಜರ್ನೋತ್ರಿ-24 ಎರಡು ದಿನಗಳ ಮಾನಸ ಮಾಧ್ಯಮ ಹಬ್ಬದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷರಾದ ಆಯೇಷಾ ಖಾನಂ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ. ಜು.25 ರಂದು ಸಂಜೆ ಬಹುಮಾನ ವಿತರಣೆ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ.