ಪುನೀತ್ ಮಡಿಕೇರಿ
೪೫೭ ಕಾಮಗಾರಿಗಳ ಪೈಕಿ ೩೬೯ ಕಾಮಗಾರಿಗಳು ಪೂರ್ಣ
ಮಡಿಕೇರಿ: ಕುಡಿಯುವ ನೀರಿನ ಗೃಹ ನಳ ನೀರು ಸಂಪರ್ಕ ಯೋಜನೆ ಕೊಡಗು ಜಿಲ್ಲೆಯಲ್ಲಿ ಪ್ರಗತಿಯಲ್ಲಿದ್ದು, ಈಗಾಗಲೇ ೪೫೭ ಕಾಮಗಾರಿಗಳ ಪೈಕಿ ೩೬೯ ಕಾಮಗಾರಿಗಳು ಪೂರ್ಣಗೊಂಡಿವೆ, ೮೬ ಕಾಮಗಾರಿಗಳು ಪ್ರಗತಿಯಲ್ಲಿವೆ.
ದೇಶದ ಎಲ್ಲ ಗ್ರಾಮೀಣ ಜನವಸತಿ ಪ್ರದೇಶಗಳಲ್ಲಿ ಕಾರ್ಯಾತ್ಮಕ ಗೃಹ ನಳ ನೀರು ಸಂಪರ್ಕ(ಫಂಕ್ಷನಲ್ ಹೌಸ್ ಟ್ಯಾಪ್ ಕನೆಕ್ಷನ್) ಕಲ್ಪಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದ್ದು, ಇದಕ್ಕಾಗಿ ಜಲಜೀವನ್ ಮಿಷನ್ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ೧೫ನೇ ಹಣಕಾಸು ನಿಧಿಯಿಂದ ಸಮುದಾಯ ವಂತಿಕೆ ಮೂಲಕ ಯೋಜನೆಗೆ ಅನುದಾನ ಪಡೆದುಕೊಂಡು ಕಾರ್ಯಗತಗೊಳಿಸಲಾಗುತ್ತಿದೆ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಯೋಜನೆಯನ್ನು ಕೈಗೆತ್ತಿಕೊಂಡಿದ್ದು, ಯೋಜನೆ ಸಂಬಂಧ ನಿಗದಿತ ಗುರಿಯನ್ನು ಹೊಂದಲಾಗಿದೆ. ಇದಕ್ಕಾಗಿ ಜಿಲ್ಲೆಯಲ್ಲಿ ೪೫೭ ಜನವಸತಿ ಪ್ರದೇಶಗಳನ್ನು ಗುರುತಿಸಲಾಗಿದೆ. ಮೂರು ಹಂತಗಳಲ್ಲಿ ಕಾಮಗಾರಿಯನ್ನು ವಿಂಗಡಿಸಲಾಗಿದ್ದು ಅದರಂತೆ ಕೆಲಸಗಳು ನಡೆಯುತ್ತಿವೆ.
ಜಿಲ್ಲೆಯಲ್ಲಿ ೪೫೭ ಕಾಮಗಾರಿ: ಮೇ ತಿಂಗಳ ಅಂಕಿ-ಅಂಶಗಳ ಪ್ರಕಾರ ಜಿಯ ಮೂರು ಉಪವಿಭಾಗಗಳಲ್ಲಿ ಒಟ್ಟು ೪೫೭ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಮಡಿಕೇರಿ ತಾಲ್ಲೂಕಿನಲ್ಲಿ ೯೦ ಕಾಮಗಾರಿಗಳು, ವಿರಾಜಪೇಟೆಯಲ್ಲಿ ೧೨೨ ಕಾಮಗಾರಿಗಳು, ಸೋಮವಾರಪೇಟೆ ೨೪೫ ಕಾಮ ಗಾರಿಗಳು ನಡೆಯುತ್ತಿವೆ. ಜಿಯಲ್ಲಿ ಒಟ್ಟು ೩೫೪.೭೪ ಕೋಟಿ ರೂ. ಅಂದಾಜು ವೆಚ್ಚದ ೪೫೭ ಕಾಮಗಾರಿಗಳ ಪೈಕಿ ೩೬೯ ಕಾಮಗಾರಿಗಳು ಪೂರ್ಣಗೊಂಡಿದ್ದು, ೮೬ ಕಾಮಗಾರಿಗಳು ಪ್ರಗತಿಯಲ್ಲಿವೆ. ಈವರೆಗೆ ೨೪೫.೭೮ ಕೋಟಿ ರೂ. ವೆಚ್ಚವಾಗಿದ್ದು, ೨೩೨ ಕಾಮಗಾರಿಗಳನ್ನು ಈಗಾಗಲೇ ಹಸ್ತಾಂತರಿಸಲಾಗಿದೆ. ಸೋಮವಾರಪೇಟೆ ಉಪವಿಭಾಗದಲ್ಲಿ ಅತಿ ಹೆಚ್ಚು ಅಂದರೆ ೨೪೫ ಕಾಮಗಾರಿಗಳನ್ನು ಕೈಗೆತ್ತಿಕೊಂಡು ೨೨೯ ಕಾಮಗಾರಿಗಳನ್ನು ಪೂರ್ಣಗೊಳಿಸಿ ಯೋಜನೆ ಅನುಷ್ಠಾನದಲ್ಲಿ ಮುಂಚೂಣಿಯಲ್ಲಿದೆ. ವಿರಾಜಪೇಟೆಯಲ್ಲಿ ೨ ಕಾಮಗಾರಿಗಳನ್ನು ಕೈಬಿಡಲಾಗಿದೆ. ಉಳಿದ ಕಾಮಗಾರಿಗಳು ಹೆಚ್ಚುವರಿ ಪ್ರಸ್ತಾವನೆಗಳ ಅನುಮೋದನೆ ನಂತರ ಪೂರ್ಣಗೊಳ್ಳಲಿವೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ಆರ್ .ಭಾಸ್ಕರ್ ಮಾಹಿತಿ ನೀಡಿದ್ದಾರೆ.
ವಿವಿಧ ಜಲಮೂಲಗಳ ಬಳಕೆ: ನದಿ,ಬೋರ್ವೆಲ್ಗಳು, ಬಾವಿಗಳು ಸೇರಿದಂತೆ ವಿವಿಧ ಜಲಮೂಲಗಳನ್ನು ಬಳಸಿಕೊಂಡು ಗ್ರಾಮೀಣ ಪ್ರದೇಶಗಳಿಗೆ ನಲ್ಲಿ ನೀರಿನ ಸಂಪರ್ಕವನ್ನು ಜಲಜೀವನ್ ಮಿಷನ್ ಯೋಜನೆಯಡಿ ಕಲ್ಪಿಸಲು ಉದ್ದೇಶಿಸಲಾಗಿದೆ. ಜಲಮೂಲಗಳ ಮೂಲಕ ಓವರ್ ಹೆಡ್ ಟ್ಯಾಂಕ್ಗೆ ನೀರು ಹರಿಸಿ ಬಳಿಕ ಮನೆಮನೆಗೆ ನೀರು ಸರಬರಾಜು ಮಾಡಲಾಗುತ್ತದೆ.
ಪ್ರಗತಿಯಲ್ಲಿ ಕಾಮಗಾರಿ:
ನಿಗದಿತ ಅವಧಿಯಲ್ಲಿ ಯೋಜನೆಯ ಗುರಿ ಸಾಧಿಸುವ ನಿಟ್ಟಿನಲ್ಲಿ ಕಾಮಗಾರಿಗಳು ಕ್ಷಿಪ್ರಗತಿಯಲ್ಲಿ ಸಾಗಿವೆ. ಅಂಗನವಾಡಿ ಕೇಂದ್ರಗಳು, ಶಾಲೆಗಳಿಗೆ ಕೂಡ ಈ ಯೋಜನೆ ಮೂಲಕ ನಲ್ಲಿಯ ಸಂಪರ್ಕ ಕಲ್ಪಿಸಬಹುದಾಗಿದೆ. ಬೇರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಜಲಮೂಲಗಳಿಗೆ ಕೊಡಗು ಜಿಲ್ಲೆಯಲ್ಲಿ ಸಮಸ್ಯೆ ಇಲ್ಲ. ವರ್ಷದಲ್ಲಿ ೨ ತಿಂಗಳುಗಳು ಮಾತ್ರ ನೀರಿನ ಅಭಾವ ಸೃಷ್ಟಿಯಾಗುತ್ತದೆ. ಉಳಿದಂತೆ ಸಮರ್ಪಕವಾಗಿ ನೀರು ಪೂರೈಕೆ ಮಾಡಲು ಯಾವ ಸಮಸ್ಯೆಯೂ ಇಲ್ಲ ಎಂದು ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.
೧೨ ಕಾಮಗಾರಿಗಳಿಗೆ ಪ್ರಸ್ತಾವನೆ: ಕೊಡಗು ಜಿಲ್ಲೆಯಲ್ಲಿ ಎಂವಿಎಸ್ ಯೋಜನೆಯಡಿ ೮.೫೨ ಕೋಟಿ ರೂ. ವೆಚ್ಚದಲ್ಲಿ ಬಹು ಗ್ರಾಮ ಕುಡಿಯುವ ನೀರು ಪೂರೈಕೆಗೆ ಕುಶಾಲನಗರ ತಾಲ್ಲೂಕಿನ ೧೨ ಜನವಸತಿ ಪ್ರದೇಶಗಳಿಗೆ ಕುಡಿಯುವ ನೀರು ಒದಗಿಸಲಾಗುತ್ತಿದೆ. ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಹೊಸದಾಗಿ ಅನುಷ್ಠಾನ ಮಾಡಲು ಉದ್ದೇಶಿಸಿರುವ ಬಹುಗ್ರಾಮ ಕುಡಿಯುವ ನೀರು ಯೋಜನೆ ಸಂಬಂಧ ಮಡಿಕೇರಿ ಉಪವಿಭಾಗ, ಸೋಮವಾರಪೇಟೆ, ಕುಶಾಲನಗರ, ಸೋಮವಾರಪೇಟೆ ಉಪ ವಿಭಾಗ, ಪೊನ್ನಂಪೇಟೆ ಮತ್ತು ವಿರಾಜಪೇಟೆ ತಾಲ್ಲೂಕುಗಳನ್ನು ಗುರುತಿಸಲಾಗಿದ್ದು, ೫೩೩ ಜನ ವಸತಿ ಪ್ರದೇಶಗಳಲ್ಲಿ ೧೨ ಕಾಮಗಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ಭಾಸ್ಕರ್ ಮಾಹಿತಿ ನೀಡಿದ್ದಾರೆ.
” ಕೊಡಗು ಜಿಲ್ಲೆಯಲ್ಲಿ ಜಲಜೀವನ್ ಮಿಷನ್ ಯೋಜನೆ ಯಶಸ್ಸಿನ ಹಾದಿಯಲ್ಲಿ ಸಾಗಿದ್ದು, ಗ್ರಾಮೀಣ ಜನರಿಗೆ ವರದಾನವಾಗಿದೆ. ನಲ್ಲಿಗೆ ಮೀಟರ್ ಅಳವಡಿಸುವುದರಿಂದ ನೀರನ್ನು ಮಿತವಾಗಿ ಬಳಸಬೇಕೆನ್ನುವ ಜಾಗೃತಿ ಜನರಲ್ಲಿ ಮೂಡುತ್ತದೆ. ನಲ್ಲಿ ನೀರು ಸಂಪರ್ಕದಿಂದ ಕುಡಿಯುವ ನೀರು ಮನೆಗೆ ತಲುಪುತ್ತಿದೆ. ೨೦೨೬ರ ಒಳಗೆ ಯೋಜನೆಯ ಗುರಿಯನ್ನು ಶೇ.೧೦೦ ಸಾಧಿಸಲಾಗುವುದು.”
-ಆರ್.ಭಾಸ್ಕರ್, ಎಇಇ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ




