Mysore
22
broken clouds

Social Media

ಬುಧವಾರ, 18 ಫೆಬ್ರವರಿ 2026
Light
Dark

ಗಣೇಶ್ ಪ್ರಸಾದ್‌ಗೆ ಒಲಿಯುವುದೇ ಮಂತ್ರಿ ಭಾಗ್ಯ? 

ಹಳೇ ಮೈಸೂರು ಭಾಗದ ಏಕೈಕ ಲಿಂಗಾಯತ ಶಾಸಕನಿಗೆ ಸಚಿವ ಸ್ಥಾನದ ನಿರೀಕ್ಷೆ 

ಗುಂಡ್ಲುಪೇಟೆ: ರಾಜ್ಯ ಸರ್ಕಾರದ ಸಚಿವ ಸಂಪುಟ ಪುನರ್ ರಚನೆಯಾದಲ್ಲಿ ಹಳೇ ಮೈಸೂರು ಭಾಗದ ಏಕೈಕ ವೀರಶೈವ ಲಿಂಗಾಯತ ಸಮುದಾಯದವರಾದ, ಗುಂಡ್ಲುಪೇಟೆ ವಿಧಾನಸಭೆ ಕ್ಷೇತ್ರದ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂಬ ಒತ್ತಾಯ ಹಳೇ ಮೈಸೂರು ಭಾಗದ ವೀರಶೈವ ಲಿಂಗಾಯತ ಸಮುದಾಯದಿಂದ ಕೇಳಿಬಂದಿದೆ.

ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಗಣೇಶ್ ಪ್ರಸಾದ್ 36,675 ಮತಗಳ ಅಂತರದಿಂದ ಗೆದ್ದಿದ್ದಾರೆ. ಗುಂಡ್ಲುಪೇಟೆ ಕ್ಷೇತ್ರದ ಶಾಸಕರಾಗಿ, ಅಭಿವೃದ್ಧಿ ಕಾಮಗಾರಿಗಳ ಜೊತೆಗೆ ವೈಯಕ್ತಿಕವಾಗಿ ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುತ್ತಿರುವ ಗಣೇಶ್ ಪ್ರಭಾವಿ ನಾಯಕನಾಗಿ ಗುರುತಿಸಿಕೊಳ್ಳುತ್ತಿದ್ದು, ವೀರಶೈವ ಲಿಂಗಾಯತ ಸಮುದಾಯಕ್ಕೆ ಪ್ರಾಧಾನ್ಯತೆ ನೀಡಿ ಸಚಿವ ಸ್ಥಾನ ನೀಡಬೇಕೆಂದು ಸಮುದಾಯದವರು ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.

ಇದನ್ನು ಓದಿ: ಬಿಹಾರ ಫಲಿತಾಂಶವು ನಿತೀಶ್ ಕುಮಾರ್ ಚಾಣಾಕ್ಷತೆಯ ಕೊಡುಗೆ

ಶಾಸಕ ಗಣೇಶ್ ಪ್ರಸಾದ್ ತಂದೆ ಎಚ್.ಎಸ್. ಮಹದೇವ ಪ್ರಸಾದ್ ಅವರು ಐದು ಬಾರಿ ಶಾಸಕರಾಗಿ, ಎರಡು ಬಾರಿ ಸಚಿವರಾಗಿ, ಸಿದ್ದರಾಮಯ್ಯನವರ ಪರಮಾಪ್ತರಾಗಿದ್ದರು. ತಾಯಿ ಡಾ.ಗೀತಾ ಮಹದೇವಪ್ರಸಾದ್ ಪತಿಯ ನಿಧನದ ನಂತರ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಸಚಿವರಾಗಿದ್ದರು. ಗಣೇಶ್ ಪ್ರಸಾದ್ ಈಗ ಸಹಕಾರ ಕ್ಷೇತ್ರಕ್ಕೂ ಕಾಲಿರಿಸಿದ್ದು, ಮೈಸೂರು- ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಚುನಾವಣೆಯಲ್ಲಿ ಮತ ಪಡೆದು ಗೆಲುವು ಸಾಧಿಸಿದ್ದಾರೆ.

ಇಂತಹ ಸಂದರ್ಭದಲ್ಲಿ ಅವರಿಗೆ ಸಚಿವ ಸ್ಥಾನ ಸಿಕ್ಕರೆ ತಾಲ್ಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎನ್ನುವುದು ಮುಖಂಡರ ಅನಿಸಿಕೆಯಾಗಿದೆ.

” ಜನರ ಪ್ರೀತಿ ಸಂಪಾದಿಸಿ, ಅಭಿವೃದ್ಧಿಪರಚಿಂತನೆ ಮಾಡುವ ಗಣೇಶ್ ಪ್ರಸಾದ್‌ಗೆ ಕಾಂಗ್ರೆಸ್ ಹೈಕಮಾಂಡ್‌ನವರು, ರಾಜ್ಯ ನಾಯಕರು ಸಚಿವ ಸ್ಥಾನ ನೀಡಬೇಕೆಂದು ಅವರ ಅಭಿಮಾನಿಗಳು ಮನವಿ ಮಾಡಿದ್ದಾರೆ. ಸಿದ್ದರಾಮಯ್ಯ ಪಾಳೆಯದಲ್ಲಿ ಗುರುತಿಸಿ ಕೊಂಡು ಅವರಿಗೆ ಆತ್ಮೀಯರಾಗಿದ್ದ ದಿ.ಎಚ್. ಎಂ.ಮಹದೇವಪ್ರಸಾದ್ ಕುಟುಂಬದ ಮೇಲೆ ಜನರ ಅಭಿಮಾನ, ಪ್ರೀತಿ ಈಗಲೂ ಇದೆ. ಆದ್ದರಿಂದ ಮಹದೇವ ಪ್ರಸಾದ್ ಮಗನಿಗೂ ಮಂತ್ರಿ ಸ್ಥಾನ ನೀಡಬೇಕು. ಸಿದ್ದರಾಮಯ್ಯನವರು ಹಳೇ ಮೈಸೂರು ಭಾಗದ ವೀರಶೈವ ಲಿಂಗಾಯತ ಶಾಸಕನ ಕೈ ಹಿಡಿದು ಮಂತ್ರಿಸ್ಥಾನ ನೀಡಬೇಕು ಎಂಬುದು ತಾಲ್ಲೂಕಿನ ಜನರ ಆಶಯವೂ ಆಗಿದೆ.”

ಮಹೇಂದ್ರ ಹಸಗೂಲಿ

Tags:
error: Content is protected !!