Mysore
28
overcast clouds

Social Media

ಶನಿವಾರ, 20 ಜೂನ್ 2026
Light
Dark

ಅಕ್ರಮ ಮದ್ಯ ಮಾರಾಟ: ಕಡಿವಾಣ ಕಾರ್ಯಾಚರಣೆ

ದಿನೇಶ್ ಕುಮಾರ್ ಹೆಚ್.ಎಸ್.

ಅಗ್ನಿ ಅವಘಡದ ಬಳಿಕ ಎಚ್ಚೆತ್ತ ಅಧಿಕಾರಿಗಳು

ಮೈಸೂರು: ನಗರದ ದಟ್ಟಗಳ್ಳಿಯ ಮಾರಾ ರೆಸ್ಟೋ ಬಾರ್‌ನಲ್ಲಿ ನಡೆದ ಅಗ್ನಿ ಅನಾಹುತ ಘಟನೆ ನಂತರ ಅಬಕಾರಿ, ನಗರಪಾಲಿಕೆ, ಪೊಲೀಸ್ ಇಲಾಖೆ ಅಧಿಕಾರಿಗಳ ದಾಳಿಗೆ ಬಾರ್, ಡಾಬಾ ಹಾಗೂ ರೆಸ್ಟೋರೆಂಟ್ ಮಾಲೀಕರು ಅಕ್ಷರಶಃ ಬೆಚ್ಚಿಬಿದ್ದಿದ್ದಾರೆ.

ಸರ್ಕಾರದ ವಿವಿಧ ಇಲಾಖೆಗಳು ಸಮನ್ವಯತೆಯಿಂದ ಕೆಲಸ ಮಾಡಿದಲ್ಲಿ ಅಕ್ರಮಗಳನ್ನು ಹೇಗೆ ತಡೆಗಟ್ಟಬಹುದು ಎಂಬುದಕ್ಕೆ ಇದು ಉದಾಹರಣೆ ಆಗಬಲ್ಲದು. ದಟ್ಟಗಳ್ಳಿಯ ಮಾರಾ ರೆಸ್ಟೋ ಪಬ್‌ನಲ್ಲಿ ನಡೆದ ಘಟನೆಯ ನಂತರ ಮೂರೂ ಇಲಾಖೆಗಳು ಎಚ್ಚೆತ್ತು, ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲು ಕಾರ್ಯಾಚರಣೆ ಆರಂಭಿಸಿವೆ.

ಅಬಕಾರಿ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ಕೊರತೆ ನಡುವೆಯೂ ಇರುವ ಸೀಮಿತ ಸಂಖ್ಯೆಯ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಬಳಸಿಕೊಂಡು ಮೂರು ತಂಡಗಳನ್ನು ರಚನೆ ಮಾಡಿದ್ದಾರೆ. ಈ ಮೂಲಕ ನಗರದ ವಿವಿಧೆಡೆ ಕಾರ್ಯಾಚರಣೆ ನಡೆಸಿದ್ದಾರೆ.

ಬುಧವಾರ ರಾತ್ರಿಯಿಂದಲೇ ಕಾರ್ಯಾಚರಣೆ ಆರಂಭವಾಗಿದೆ. ನಗರ ವ್ಯಾಪ್ತಿಯಲ್ಲಿನ ಬಾರ್, ರೆಸ್ಟೋರೆಂಟ್, ಮಾಂಸಾಹಾರಿ ಹೋಟೆಲ್ ಹಾಗೂ ಡಾಬಾಗಳ ಮೇಲೆ ಮುಗಿಬಿದ್ದಿದ್ದಾರೆ. ಸುಮಾರು ೬೦ ಕಡೆಗಳಲ್ಲಿ ದಾಳಿ ನಡೆಸಿದ್ದಾರೆ. ಇಲಾಖೆಯ ಅನುಮತಿ ಇಲ್ಲದಿದ್ದರೂ ಮದ್ಯ ಸರಬರಾಜು ಮಾಡುತ್ತಿದ್ದ ೧೦ ಹೋಟೆಲ್ ಹಾಗೂ ಡಾಬಾ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಗುರುವಾರ ರಾತ್ರಿ ಕೂಡ ದಾಳಿಯನ್ನು ಮುಂದುವರಿಸಿದ್ದು, ೧೨ ಹೋಟೆಲ್‌ಗಳ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಟ್ರೇಡ್ ಲೈಸೆನ್ಸ್ ತಪಾಸಣೆ: ಇನ್ನು ನಗರಪಾಲಿಕೆ ಅಧಿಕಾರಿಗಳು ಬುಧವಾರ ಬೆಳಿಗ್ಗೆಯಿಂದಲೇ ಹೋಟೆಲ್, ಬಾರ್ ಹಾಗೂ ರೆಸ್ಟೋರೆಂಟ್‌ಗಳಿಗೆ ತೆರಳಿ ಟ್ರೇಡ್ ಲೈಸನ್ಸ್ ಇದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ರಹದಾರಿ ಇಲ್ಲದೆ ನಡೆಸಲಾಗುತ್ತಿದ್ದ ೧೫ಕ್ಕೂ ಹೆಚ್ಚು ಹೋಟೆಲ್‌ಗಳಿಗೆ ನೋಟಿಸ್ ನೀಡಿದ್ದಾರೆ.

ಮಾರಾಟ ಬಂದ್: ಎಂಆರ್‌ಪಿ ಹೆಸರಿನಲ್ಲಿ ಸಿಎಲ್-೨ ರಹದಾರಿ ಪಡೆದಿದ್ದರೂ ಮಳಿಗೆಯ ಪಕ್ಕದಲ್ಲಿ ಸಣ್ಣ ಸ್ಥಳ ನಿರ್ಮಿಸಿ ಅಲ್ಲಿಯೇ ಜನರಿಗೆ ಮದ್ಯ ಸೇವಿಸಲು ಅವಕಾಶ ಮಾಡಿಕೊಟ್ಟಿದ್ದ ಬಾರ್ ಮಾಲೀಕರು ಇದೀಗ ಅಂತಹ ಸ್ಥಳಗಳನ್ನು ಬಂದ್ ಮಾಡಿದ್ದಾರೆ. ಆದರೂ ಕೂಡ ಒಂದೆರಡು ಸ್ಥಳಗಳಲ್ಲಿ ಮಾಲೀಕರುಮದ್ಯ ಸೇವಿಸಲು ಅನುವು ಮಾಡಿಕೊಟ್ಟಿದ್ದುದು ಕಂಡುಬಂತು.

ಡಾಬಾಗಳ ಮೇಲೆ ಹದ್ದಿನ ಕಣ್ಣು: ನಗರದ ಹೊರವಲಯದಲ್ಲಿ ಇರುವ ಡಾಬಾಗಳ ಮೇಲೆ ಪೊಲೀಸ್ ಹಾಗೂ ಅಬಕಾರಿ ಇಲಾಖೆ ಸಿಬ್ಬಂದಿ ಹದ್ದಿನ ಕಣ್ಣಿರಿಸಿದ್ದಾರೆ. ಅಲ್ಲೀಗ ಕೇವಲ ಊಟಕ್ಕೆ ಮಾತ್ರ ಸೀಮಿತ ಎಂಬ ವಾತಾವರಣ ಸೃಷ್ಟಿಸಿದ್ದಾರೆ.

ಲಾಟಿ ಏಟು: ಈ ನಡುವೆ ಕುವೆಂಪುನಗರ, ರಾಜೀವ್‌ನಗರ, ಎನ್.ಆರ್. ಮೊಹಲ್ಲಾ,ಬೋಗಾದಿ ಸೇರಿದಂತೆ ವಿವಿಧ ಬಡಾವಣೆಗಳಿಗೆ ಹೊಂದಿಕೊಂಡಂತೆ ಇರುವ ವರ್ತುಲ ರಸ್ತೆಯಲ್ಲಿ ಪೊಲೀಸರು ಗಸ್ತು ಹೆಚ್ಚಿಸಿದ್ದಾರೆ. ಎಂಆರ್‌ಪಿ ಮಳಿಗೆಯಿಂದ ಮದ್ಯ ಖರೀದಿಸಿ ತಂದು ರಸ್ತೆ ಬದಿಯಲ್ಲಿ ರಾಜಾರೋಷವಾಗಿ ಮದ್ಯಸೇವನೆ ಮಾಡುತ್ತಿದ್ದವರ ಮೇಲೆ ಪೊಲೀಸರು ಮುಗಿಬಿದ್ದಿದ್ದು, ಅಂಥವರಿಗೆ ಲಾಠಿ ರುಚಿ ತೋರಿಸುತ್ತಿದ್ದಾರೆ.

ಈ ಕ್ರಮ ನಿರಂತರವಾಗಿ ನಡೆದಲ್ಲಿ ಅಕ್ರಮ ಮದ್ಯ ಸರಬರಾಜು ಹಾಗೂ ಮಾರಾಟದಂತವುಗಳಿಗೆ ಕಡಿವಾಣ ಹಾಕಬಹುದು. ಅಗ್ನಿ ಅನಾಹುತ ದುರ್ಘಟನೆ ಜನರ ಮನಸ್ಸಿನಿಂದ ಮಾಸಿದ ನಂತರ ಇವರುಗಳು ಮತ್ತೆ ಇದೇ ಚಾಳಿಮುಂದುವರಿಸಿದಲ್ಲಿ ಮೂರೂ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ತೆಗೆದುಕೊಂಡ ಕ್ರಮಗಳು ನಾಟಕೀಯವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂಬುದು ಜನರ ಅನಿಸಿಕೆ.

ಚುರುಕಾದ ಪೊಲೀಸರು: 

ಮೈಸೂರು ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಅವರು ನಗರ ವ್ಯಾಪ್ತಿಯ ಎಲ್ಲಾ ಠಾಣೆಗಳ ಇನ್‌ಸ್ಪೆಕ್ಟರ್‌ಗಳ ಸಭೆ ಕರೆದು ಸ್ಥಳೀಯವಾಗಿ ಬಾರ್ ಮತ್ತು ರೆಸ್ಟೋರೆಂಟ್‌ಗಳ ತಪಾಸಣೆ ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಅದರಂತೆ ಪೊಲೀಸರು, ನಿಗದಿತ ಸಮಯಕ್ಕೆ ಸರಿಯಾಗಿ ಬಾರ್‌ಗಳನ್ನು ಮುಚ್ಚಿಸುತ್ತಿದ್ದಾರೆ.

 

 

Tags:
error: Content is protected !!