Mysore
35
scattered clouds

Social Media

ಸೋಮವಾರ, 11 ಮೇ 2026
Light
Dark

ಎಚ್.ಡಿ.ಕೋಟೆ | ಉತ್ತಮ ಮಳೆ ; ಕೃಷಿ ಚಟುವಟಿಕೆ ಚುರುಕುಗೊಳಿಸಿದ ರೈತರು

ಎಚ್.ಡಿ.ಕೋಟೆ: ಅರೆ ಮಲೆನಾಡು ಎಂದೇ ಹೆಸರಾದ ತಾಲ್ಲೂಕಿನಲ್ಲಿ ತಡವಾಗಿ ಮಳೆ ಪ್ರಾರಂಭವಾದರೂ ಕಳೆದ ಒಂದು ವಾರದಿಂದ ಬೀಳುತ್ತಿರುವ ಉತ್ತಮ ಮಳೆಯಿಂದ ಹರ್ಷಗೊಂಡಿರುವ ರೈತರು ತಮ್ಮ ಜಮೀನಿನಲ್ಲಿ ಬಿತ್ತನೆ ಕಾರ್ಯವನ್ನು ಚುರುಕುಗೊಳಿಸಿದ್ದಾರೆ.

ತಲ್ಲೂಕಿನಲ್ಲಿ ಕಬಿನಿ, ತಾರಕ, ನುಗು, ಹೆಬ್ಬಾಳ ಈ ನಾಲ್ಕು ಜಲಾಶಯಗಳಿದ್ದರೂ ನೀರಾವರಿ ಪ್ರದೇಶಕ್ಕಿಂತ ಮಳೆ ಆಶ್ರಿತ ಪ್ರದೇಶವೇ ಹೆಚ್ಚಾಗಿರುವುದರಿಂದ ರೈತರು ಮಳೆಯನ್ನೇ ಅವಲಂಬಿಸಿದ್ದಾರೆ.

ಈ ಬಾರಿ ಬಿಸಿಲಿನ ತಾಪಮಾನ ಅತಿಯಾಗಿ ಮತ್ತು ಒಂದು ತಿಂಗಳು ತಡವಾಗಿ ಮಳೆ ಪ್ರಾರಂಭ ಗೊಂಡರೂ ಒಂದು ವಾರದಿಂದ ತಾಲ್ಲೂಕಿನ ಬಹುತೇಕ ಕಡೆಗಳಲ್ಲಿ ೪-೫ ಬಾರಿ ಉತ್ತಮ ಮಳೆ ಯಾಗಿದ್ದು, ರೈತರ ಮುಖದಲ್ಲಿ ಮತ್ತು ಕುಟುಂಬದವರಲ್ಲಿ ಮಂದಹಾಸ ಮೂಡಿದೆ.

ಬಿಸಿಲು, ಮಳೆ ಲೆಕ್ಕಿಸದೆ ರೈತರು ಮತ್ತು ಅವರ ಕುಟುಂಬದವರು ತಮ್ಮ ಜಮೀನುಗಳಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡು ಬಿತ್ತನೆ ಕಾರ್ಯ ಪ್ರಾರಂಭ ಮಾಡಿದ್ದಾರೆ. ಕಳೆದ ಸಾಲಿನಂತೆ ಈ ಸಾಲಿನಲ್ಲೂ ಅತಿ ಹೆಚ್ಚು ರೈತರು ಮುಸುಕಿನ ಜೋಳದ ಬೆಳೆಗೆ ಆಸಕ್ತಿ ತೋರಿದ್ದು, ಜಮೀನುಗಳಲ್ಲಿ ಬಿತ್ತನೆ ಕಾರ್ಯ ನಡೆಸುತ್ತಿದ್ದಾರೆ. ಹಿಂದೆ ರೈತರ ಆರ್ಥಿಕ ಬೆಳೆಯಾಗಿದ್ದ ಹತ್ತಿ ಬೆಳೆಯನ್ನು ಬಹುಪಾಲು ರೈತರು ಅನೇಕ ಕಾರಣಗಳಿಂದ ದೂರ ಮಾಡಿದ್ದು, ಪರ್ಯಾಯ ಬೆಳೆಗಳಾದ ಮುಸುಕಿನ ಜೋಳ, ಹೊಗೆಸೊಪ್ಪು, ಅಲಸಂದೆ, ರಾಗಿ, ಇನ್ನಿತರ ಬೆಳೆಗಳ ಬಿತ್ತನೆ ಪ್ರಾರಂಭಿಸಿದ್ದಾರೆ. ೬೦,೦೦೦ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ನಡೆಸಬೇಕಾಗಿದ್ದು, ಈಗಾಗಲೇ ೧೦,೦೦೦ ಹೆಕ್ಟೇರ್ ಪ್ರದೇಶಗಳಲ್ಲಿ ರೈತರು ಬಿತ್ತನೆ ಕಾರ್ಯ ನಡೆಸುತ್ತಿದ್ದಾರೆ. ಇದೇ ರೀತಿ ಮಳೆ ಮುಂದುವರಿದರೆ ಇನ್ನೊಂದು ವಾರದೊಳಗೆ ತಾಲ್ಲೂಕಿನಲ್ಲಿ ಬಹುತೇಕ ಕಡೆ ಬಿತ್ತನೆ ಕಾರ್ಯ ಪೂರ್ಣಗೊಳ್ಳಲಿದೆ.

ಇಲ್ಲಿಯವರೆಗೆ ೧೧೦ ಮಿ. ಮೀ. ವಾಡಿಕೆ ಮಳೆಯಾಗಬೇಕಿದ್ದ ಈ ಪ್ರದೇಶಗಳಲ್ಲಿ ೬೫ ಮಿ. ಮೀ. ಮಳೆ ಮಾತ್ರ ಆಗಿದೆ. ಬಿ. ಮಟಕೆರೆ ಮತ್ತು ಹಂಪಾಪುರ ಭಾಗದಲ್ಲಿ ಉತ್ತಮವಾಗಿ ಮಳೆಯಾಗಿದೆ. ಉಳಿದ ಹೋಬಳಿಗಳಲ್ಲಿ ಬಿತ್ತನೆಗೆ ಅನುಕೂಲವಾಗುವ ರೀತಿಯಲ್ಲಿ ಮಳೆಯಾಗಿದೆ. ಕಳೆದ ಬಾರಿ ರೈತರು ತಮ್ಮ ಜಮೀನುಗಳಲ್ಲಿ ಬೆಳೆದ ಬೆಳೆಗಳಿಗೆ ರೋಗ ಕೀಟಬಾಧೆ ತಗುಲಿ ದ್ದರಿಂದ ಮತ್ತು ಬೆಳೆದ ಬೆಳೆಗೂ ಉತ್ತಮ ಬೆಲೆ ಸಿಗದೆ ಕಂಗಾಲಾಗಿ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದರು.

ಈ ಬಾರಿಯಾದರೂ ಬೆಳೆ ತಮ್ಮ ಕೈಹಿಡಿಯಲಿದೆ ಎಂಬ ಆಶಾಭಾವನೆಯಲ್ಲಿ ರೈತರ ಮತ್ತು ರೈತ ಕುಟುಂಬದವರು ಕೃಷಿ ಚಟುವಟಿಕೆ ಗಳಲ್ಲಿ ಸಡಗರದಿಂದ ತೊಡಗಿಕೊಂಡಿದ್ದಾರೆ.

Tags:
error: Content is protected !!