Mysore
30
clear sky

Social Media

ಗುರುವಾರ, 13 ಫೆಬ್ರವರಿ 2025
Light
Dark

ಮೈಸೂರಿಗೆ ಕಸ ವಿಲೇವಾರಿಯೇ ಸವಾಲು

ಕೆ.ಪಿ.ಮದನ್

ಸಾರ್ವಜನಿಕರ ಸಹಕಾರದ ನಿರೀಕ್ಷೆಯಲ್ಲಿ ನಗರಪಾಲಿಕೆ

ಮೈಸೂರು: ಸತತ ಎರಡು ಬಾರಿ ದೇಶದ ಸ್ವಚ್ಛನಗರಗಳ ಪೈಕಿ ಪ್ರಥಮ ಸ್ಥಾನ ಪಡೆದಿದ್ದ ಪಾರಂಪರಿಕ ನಗರ ಮೈಸೂರು ಈಗ ಕಸದ ಅಸಮರ್ಪಕ ವಿಲೇವಾರಿಯಿಂದ ನಲುಗಿದೆ. ಪಾಲಿಕೆಯು ಕಸ ಸಂಗ್ರಹಣೆ, ವಿಲೇವಾರಿ ಸಂಬಂಧ ಹಲವು ಯೋಜನೆಗಳನ್ನು ರೂಪಿಸಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಸಿಕ್ಕಿಲ್ಲ.

ಯಾವುದೇ ನಗರ ಎಷ್ಟೇ ಪ್ರಗತಿ ಹೊಂದಿದ್ದರೂ ಅದು ಸುಂದರ ಅನಿಸಿಕೊಳ್ಳುವುದು ಸ್ವಚ್ಛತೆಯನ್ನು ಕಾಪಾಡಿಕೊಂಡಾಗ ಮಾತ್ರ. ಅನೇಕ ಪ್ರವಾಸಿ ತಾಣಗಳು ಇರುವುದರಿಂದ ಮೈಸೂರಿಗೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರುತ್ತದೆ. ಆದ್ದರಿಂದ ಹೋಟೆಲ್ ಮತ್ತು ಪ್ರವಾಸಿ ತಾಣಗಳಲ್ಲಿ ಪ್ಲಾಸ್ಟಿಕ್ ಮತ್ತು ಕಸದ ಉತ್ಪಾದನೆಯೂ ಅಧಿಕವಾಗಿ ರುತ್ತದೆ. ಸದ್ಯ ಕಸವನ್ನು ವಿಲೇವಾರಿ ಮಾಡುವುದು ನಗರ ಪಾಲಿಕೆಗೆ ದೊಡ್ಡ ಸವಾಲಾಗಿದೆ.

ಇದಕ್ಕೆ ಸಾಕ್ಷಿ ಎಂಬಂತೆ ಚಾಮುಂಡಿಬೆಟ್ಟದ ರಸ್ತೆ, ವಿಜಯನಗರ, ಅಗ್ರಹಾರ, ಕೆ.ಜಿ.ಕೊಪ್ಪಲು, ಸರಸ್ವತಿಪುರಂ, ಜಯನಗರ, ತೊಣಚಿಕೊಪ್ಪಲು, ಬೋಗಾದಿ ಮುಖ್ಯರಸ್ತೆ, ವಿಜಯನಗರ ೪ನೇ ಹಂತ, ಹೂಟಗಳ್ಳಿ ನಗರಸಭೆಗೆ ಸೇರಿದ ರಸ್ತೆ… ಹೀಗೆ ಹಲವು ಬಡಾವಣೆಗಳಲ್ಲಿ ನಿವಾಸಿಗಳು ರಸ್ತೆಯಲ್ಲಿಯೇ ಕಸ ಸುರಿಯುತ್ತಿದ್ದಾರೆ ಎಂಬ ದೂರು ಇದೆ.

ಅಲ್ಲದೆ, ಹಸಿ ಮತ್ತು ಒಣ ಕಸವನ್ನು ಒಂದೇ ಕಡೆ ಹಾಕುತ್ತಿರುವುದರಿಂದ ದುರ್ವಾಸನೆ ಬೀರುತ್ತಿದ್ದು, ಈ ರಸ್ತೆಗಳಲ್ಲಿ ಸಾರ್ವಜನಿಕರು ಸಂಚರಿಸುವುದು ದುಸ್ತರವಾಗಿದೆ. ಕಸ ಬಿದ್ದಿರುವ ಜಾಗಗಳು ಸೊಳ್ಳೆಗಳ ಉಗಮ ಸ್ಥಾನವಾಗಿ ಮಾರ್ಪಟ್ಟಿವೆ. ಹಾಗಾಗಿ ಸ್ಥಳೀಯರಿಗೆ ಹಲವು ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಕೆಲ ಬಡಾವಣೆಗಳಲ್ಲಿ ಜನರು ಖಾಲಿ ನಿವೇಶನಗಳನ್ನು ತಿಪ್ಪೆ ಎಂಬಂತೆ ಭಾವಿಸಿ,  ಕಸ ಸುರಿದು ಹೋಗುತ್ತಿದ್ದಾರೆ. ಹಸಿ ಹಾಗೂ ಒಣ ಕಸವನ್ನು ಮನೆಯಲ್ಲಿಯೇ ವಿಂಗಡಣೆ ಮಾಡಲು ನಗರ ಪಾಲಿಕೆಯಿಂದ ಪ್ರತಿ ಮನೆಗೂ ಪ್ರತ್ಯೇಕ ಕಸದ ಡಬ್ಬಿಗಳನ್ನು ನೀಡಲಾಗಿದೆ. ಆದರೂ ನಿಯಮ ಪಾಲಿಸುತ್ತಿಲ್ಲ.

ರಸ್ತೆಯಲ್ಲಿ ಯಾವುದೇ ಕಾರಣಕ್ಕೂ ಕಸ ಹಾಕಬಾರದು. ಪಾಲಿಕೆಯ ಕಸ ಸಂಗ್ರಹ ವಾಹನಗಳು ನಿತ್ಯ ಬೆಳಿಗ್ಗೆ ಮನೆ ಮುಂದೆ ಬರಲಿದ್ದು, ಅಲ್ಲಿಯೇ ಕಸವನ್ನು ಹಾಕಬೇಕು. ಸಾರ್ವಜನಿಕರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ನಗರಪಾಲಿಕೆ ಅಧಿಕಾರಿಗಳ ಮನವಿ ಮಾಡುತ್ತಿದ್ದರೂ ಅದು ಜನರನ್ನು ತಲುಪುತ್ತಿಲ್ಲ.ಹೀಗಾಗಿ ನಗರಪಾಲಿಕೆ ಮತ್ತಷ್ಟು ವಿಭಿನ್ನ ಕಾರ್ಯಕ್ರಮಗಳನ್ನು ರೂಪಿಸುವ ನಿಟ್ಟಿನಲ್ಲಿ ಚಿಂತಿಸಬೇಕಿದೆ.

” ಪ್ರತಿದಿನ ನಗರಪಾಲಿಕೆ ವತಿಯಿಂದ ನಗರದಾದ್ಯಂತೆ ಕಸ ತೆರವು ಕಾರ್ಯ ನಡೆಯುತ್ತದೆ. ಆದರೆ, ಸಾರ್ವಜನಿಕರು ರಾತ್ರಿ ಸಮಯದಲ್ಲಿ ಮತ್ತು ಮುಂಜಾನೆಯ ವೇಳೆ ರಸ್ತೆ ಬದಿ ಕಸವನ್ನು ಹಾಕುತ್ತಿದ್ದಾರೆ. ಮನೆ ಬಳಿಯೇ ಕಸ ಸಂಗ್ರಹಿಸಲು ಪಾಲಿಕೆಯವರು ಬ ಂದಾಗ ಕಸವನ್ನು ನೀಡದೆ, ನಂತರ ಕೆಲ ಸ್ಥಳಗಳಲ್ಲಿ ಎಸೆಯುತ್ತಿದ್ದಾರೆ. ಹೀಗಾಗಿ ಸಮಸ್ಯೆಯಾಗಿದೆ.”

ಡಾ.ವೆಂಕಟೇಶ್, ಆರೋಗ್ಯಾಧಿಕಾರಿ, ನಗರಪಾಲಿಕೆ.

” ನಗರಪಾಲಿಕೆ ಪೌರಕಾರ್ಮಿಕರು ನಿತ್ಯ ಬೆಳಿಗ್ಗೆ ಕಸ ವಿಲೇವಾರಿ ಮಾಡುತ್ತಾರೆ. ಆದರೆ, ಕೆಲವು ಕಡೆ ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಎಸೆದು ನೈರ್ಮಲ್ಯ ಹಾಳು ಮಾಡುತ್ತಿದ್ದಾರೆ.”

ಮಹದೇವ್ ಪ್ರಸಾದ್, ಮೈ.ವಿ.ವಿ. ವಿದ್ಯಾರ್ಥಿ

” ನಗರದ ಹೃದಯ ಭಾಗದ ಬಡಾವಣೆಗಳಲ್ಲಿಯೇ ಸ್ವಚ್ಛತೆ ಇಲ್ಲವಾಗಿದೆ. ನಗರಪಾಲಿಕೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡುತ್ತಿಲ್ಲ. ಕರೆ ಮಾಡಿ ಮಾಹಿತಿ ನೀಡಿದರೂ ಸರಿಯಾಗಿ ಸ್ಪಂದಿಸುವುದಿಲ್ಲ.”

ಶಿವಣ್ಣ , ಅಗ್ರಹಾರ.

Tags: