Mysore
21
overcast clouds

Social Media

ಮಂಗಳವಾರ, 25 ಆಗಸ್ಟ್ 2026
Light
Dark

ಮೇವಿನ ಕೊರತೆ; ಹಸಿರು ಮೇವು ಖರೀದಿಗೆ ಮುಂದಾದ ರೈತರು

ಭೇರ್ಯ ಮಹೇಶ್

ಅವಳಿ ತಾಲ್ಲೂಕುಗಳಲ್ಲಿ ಮೇವಿಗೆ ಭರ್ಜರಿ ಬೇಡಿಕೆ; ಹಾಲು ಉತ್ಪಾದಕರಿಗೆ ಹೊಡೆತ

ಕೆ.ಆರ್.ನಗರ: ಮಳೆ ಕೊರತೆಯಿಂದ ಬರಗಾಲ ಆವರಿಸಿದ್ದು, ಜಾನುವಾರುಗಳಿಗೆ ಎದುರಾಗಿರುವ ಮೇವಿನ ಕೊರತೆ ನೀಗಿಸಲು ರೈತರು ಹಸಿರು ಮೇವು ಖರೀದಿಗೆ ಮುಂದಾಗಿದ್ದಾರೆ. ಇದರಿಂದಾಗಿ ಕೆ.ಆರ್.ನಗರ ಮತ್ತು ಸಾಲಿಗ್ರಾಮ ಅವಳಿ ತಾಲ್ಲೂಕುಗಳಲ್ಲಿ ಮೇವಿಗೆ ಭರ್ಜರಿ ಬೇಡಿಕೆ ಕಂಡು ಬಂದಿದೆ.

ಕೆ.ಆರ್.ನಗರ, ಸಾಲಿಗ್ರಾಮ ತಾಲ್ಲೂಕುಗಳಲ್ಲಿ ಮಳೆ ಇಲ್ಲದೆ ಸುಡು ಬಿಸಿಲಿನ ತಾಪಕ್ಕೆ ಫಸಲು ಸಂಪೂರ್ಣ ಒಣಗುತ್ತಿದೆ. ಮೇವಿನ ಬರದಿಂದಾಗಿ ರೈತರಿಗೆ ಜಾನುವಾರುಗಳ ಪೋಷಣೆ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಕೆಲ ರೈತರು ಜಾನುವಾರುಗಳ ಮಾರಾಟಕ್ಕೆ ಮುಂದಾಗಿದ್ದಾರೆ. ಇನ್ನೂ ಕೆಲವರು ಬರುವ ದಿನಗಳಲ್ಲಿ ಎದುರಾಗ ಬಹುದಾದ ಭೀಕರ ದಿನಗಳನ್ನು ನೆನೆದು ಈಗಲೇ ಮೇವು ಖರೀದಿಗೆ ಮುಂದಾಗಿದ್ದಾರೆ.

ಕೆಲ ರೈತರು ಕೃಷಿ ಪಂಪ್‌ಸೆಟ್ ನೀರಾವರಿ ಪ್ರದೇಶದಲ್ಲಿ ಮೆಕ್ಕೆ ಜೋಳ, ಬಿಳಿ ಜೋಳ ಬೆಳೆದು ತಾಲ್ಲೂಕಿಗೆ ತಂದು ಮಾರಾಟ ಮಾಡುತ್ತಿದ್ದಾರೆ. ಪ್ರತಿ ನಿತ್ಯ ೩೦ಕ್ಕೂ ಹೆಚ್ಚು ಟ್ರಾಕ್ಟರ್ ಲೋಡ್ ಮೇವನ್ನು (ಮೆಕ್ಕೆಜೋಳ) ಅವಳಿ ತಾಲ್ಲೂಕುಗಳಿಗೆ ಹಸಿರು ವಿವಿಧೆಡೆಯಿಂದ ರೈತರು ತರುತ್ತಿದ್ದು, ಹೈನುಗಾರಿಕೆ ನಡೆಸುವವರು ಖರೀದಿ ಮಾಡುತ್ತಿದ್ದಾರೆ.

ಪ್ರತಿ ಟನ್ ಮೆಕ್ಕೆಜೋಳ, ಜೋಳದ ಹಸಿರು ಮೇವನ್ನು ನಾಲ್ಕೂವರೆ ಸಾವಿರ ರೂ.ಗೆ ಮಾರಾಟ ಮಾಡಲಾಗುತ್ತಿದೆ. ರೈತರು ಮೇವು ಖರೀದಿಗೆ ಮುಗಿ ಬೀಳುತ್ತಿದ್ದಾರೆ. ಒಂದು ಟನ್ ಮೆಕ್ಕೆಜೋಳದ ಸೈಲೇಜ್ ಬೆಲೆ ಏಳು ಸಾವಿರ ರೂ. ದಾಟಿದೆ. ಇದೇ ರೀತಿ ಆದರೆ, ಹೈನುಗಾರಿಕೆ ನಂಬಿ ಜೀವನ ನಡೆಸುತ್ತಿರುವ ಹಾಲು ಉತ್ಪಾದ ಕರಿಗೆ ಭಾರೀ ಹೊಡೆತ ಬೀಳಲಿದೆ. ಏಕೆಂದರೆ ಪಶು ಆಹಾರ ಕೂಡ ೩೦೦ ರೂ.ನಿಂದ ೪೫೦ ರೂಗಳಷ್ಟು ಹೆಚ್ಚಾಗಿದೆ. ಕೆಎಂಎಫ್ ಕೂಡ ಪಶು ಆಹಾರ ಬೆಲೆಯನ್ನು ೪೦೦ ರೂ. ಹೆಚ್ಚಿಸಿದ್ದರಿಂದ ಹಸಿರು ಮೇವಿಗೆ ಈಗ ಭಾರೀ ಬೇಡಿಕೆ ಹೆಚ್ಚಾಗಿದೆ.

ತಾಲ್ಲೂಕಿನಲ್ಲಿ ಅಂದಾಜು ೭೫ ಸಾವಿರಕ್ಕೂ ಅಧಿಕ ಹೆಚ್ಚಿನ ಜಾನುವಾರುಗಳು ಇವೆ. ೫೦ರಿಂದ ೬೦ ಸಾವಿರ ಕುರಿ, ಮೇಕೆಗಳು ಇವೆ. ಸಾಕಲು ಮನೆಯಲ್ಲಿ ಮೇವಿನ ಸಂಗ್ರಹವಿಲ್ಲ. ಹೊರಗಡೆ ಹೋದರೂ ಮೇವಿಲ್ಲ. ದನ- ಕರುಗಳನ್ನು ದಿನವಿಡೀ ಕೆರೆ ಕಟ್ಟೆ, ಗೋಮಾಳ ಸುತ್ತಿಸಿದರೂ ಅರೆ ಹೊಟ್ಟೆಯಾಗುತ್ತಿದೆ. ಆದರೆ, ಬರ ಪರಿಹಾರದ ಬಗ್ಗೆ ಯಾರೊಂದಿಗೂ ತಹಸಿಲ್ದಾರ್ ಸಭೆ ನಡೆಸಿಲ್ಲ. ಮೇವು ಬ್ಯಾಂಕ್ ತೆರೆಯಲು ಯಾವುದೇ ಕ್ರಮ ವಹಿಸಿಲ್ಲ ಎಂಬೆಲ್ಲ ಆರೋಪಗಳು ರೈತ ಮುಖಂಡರಿಂದ ಕೇಳಿ ಬರುತ್ತಿದೆ.

” ಹೈನುಗಾರಿಕೆಯನ್ನೇ ನಂಬಿ ನಾವು ಜೀವನ ಸಾಗಿಸುತ್ತಿದ್ದೇವೆ. ಜರ್ಸಿ, ಹೆಚ್.ಎಫ್. ತಳಿಯ ಹಸುಗಳಿಗೆ ಹಸಿರು ಮೇವು ಬೇಕಾಗಿದೆ. ಮಳೆಯಾಗದೇ ಕೆ.ಆರ್.ನಗರ, ಸಾಲಿಗ್ರಾಮ ಅವಳಿ ತಾಲ್ಲೂಕುಗಳಲ್ಲಿ ಎಲ್ಲಿಯೂ ಮೆಕ್ಕೆಜೋಳ ಬೆಳೆದಿಲ್ಲ. ಹಾಗಾಗಿ ಹೆಚ್.ಡಿ.ಕೋಟೆ, ಹುಣಸೂರು, ಪಿರಿಯಾಪಟ್ಟಣ ಸೇರಿದಂತೆ ನಾನಾ ಭಾಗಗಳಿಂದ ದುಪ್ಪಟ್ಟು ಹಣ ನೀಡಿ ಮೆಕ್ಕೆಜೋಳ ಮತ್ತು ಸೈಲೇಜ್ ಟನ್ ಗಟ್ಟಲೇ ತರುತ್ತಿದ್ದೇವೆ. ಈಗಲಾದರೂ ಸರ್ಕಾರ ಹಾಲಿನ ದರ ಹೆಚ್ಚಿಸಬೇಕು.”

-ಗಂಧನಹಳ್ಳಿ ಜಲೇಂದ್ರ, ಹೈನುಗಾರಿಕೆ ಉದ್ಯಮಿ

” ಮುಂಗಾರು ಮಳೆ ಕೈಕೊಟ್ಟಿದೆ. ದ್ವಿದಳ ಧಾನ್ಯಗಳು ಸೇರಿದಂತೆ ಯಾವುದೇ ಬೆಳೆಯನ್ನು ರೈತರು ಬೆಳೆಯಲು ಸಾಧ್ಯವಾಗಿಲ್ಲ, ಇನ್ನೂ ಹಾಲು ಉತ್ಪಾದಕರು, ರೈತರು ಹಸಿರು ಮೇವಿಗಾಗಿ ಕಿ.ಮೀ. ಗಟ್ಟಲೇ ಮತ್ತು ಹೊರ ತಾಲ್ಲೂಕಿನಿಂದ ದುಪ್ಪಟ್ಟು ಹಣ ನೀಡಿ ಹಸಿರು ಮೇವು ಖರೀದಿಸಿ ತರುತ್ತಿದ್ದಾರೆ. ಈ ಕೂಡಲೇ ಹಾಲಿನ ದರ ಮತ್ತು ಪ್ರೋತ್ಸಾಹಧನ ಹೆಚ್ಚಿಸಬೇಕು. ತಾಲ್ಲೂಕು ಆಡಳಿತ ಮೇವು ಬ್ಯಾಂಕ್ ತೆರೆಯಬೇಕು. ಬರಪೀಡಿತ ತಾಲ್ಲೂಕು ಎಂದು ಘೋಷಿಸಬೇಕು.”

-ಜೆ.ಎಂ.ಕುಮಾರ್, ಗೌರವಾಧ್ಯಕ್ಷ, ರಾಜ್ಯ ರೈತ ಪರ್ವ ಸಂಘ, ಕೆ.ಆರ್.ನಗರ ತಾ.

” ಈ ಸರ್ಕಾರಕ್ಕೆ ರೈತರ ಕೂಗು ಕೇಳಿಸುತ್ತಿಲ್ಲ. ಮಳೆಯಾಗದೆ ಅವಳಿ ತಾಲ್ಲೂಕುಗಳ ರೈತರು ತತ್ತರಿಸಿ ಹೋಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ತಾಲ್ಲೂಕಿಗೆ ಭೇಟಿ ನೀಡಿದ್ದಾರೆ. ಆದರೆ ಯಾವುದೇ ಸಂಕಷ್ಟಗಳಿಗೆ ಇನ್ನೂ ಪರಿಹಾರ ಒದಗಿಸಿಲ್ಲ, ರೈತರ ಜಮೀನಿಗೆ ಬಂದು ಬೆಳೆ ಸಮೀಕ್ಷೆ ಮಾಡಿ ಹೋಗಿದ್ದು, ಇದರ ವರದಿ ಇನ್ನೂ ಸರ್ಕಾರಕ್ಕೆ ನೀಡಿಲ್ಲ. ಅಽವೇಶನದಲ್ಲಿ ಬರದ ಬಗ್ಗೆ ಚರ್ಚೆ ಆಗಿಲ್ಲ, ಸದನದಲ್ಲಿ ಬರ ಪರಿಸ್ಥಿತಿಯ ಗಂಭೀರವಾಗಿ ಚರ್ಚೆ ಮಾಡಲಿ.”

-ಅರ್ಜುನಹಳ್ಳಿ ರಾಮ್ ಪ್ರಸಾದ್, ಅಧ್ಯಕ್ಷ, ತಾಲ್ಲೂಕು ಯುವ ರೈತ ವೇದಿಕೆ

 

 

Tags:
error: Content is protected !!