ಈಜಲು ಹೋಗಿ ಒಂದೇ ವರ್ಷದಲ್ಲಿ ೧೦ಕ್ಕೂ ಹೆಚ್ಚು ಮಕ್ಕಳು, ಯುವಕರು ಸಾವು; ಪೋಷಕರಲ್ಲಿ ಆತಂಕ
ಕೆ.ಆರ್.ನಗರ: ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ಕೆರೆಕಟ್ಟೆಗಳು ತುಂಬಿ ಕೋಡಿ ಬಿದ್ದಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ರೈತರಲ್ಲಿ ಹರ್ಷ ಮೂಡಿದ್ದರೆ, ಪೋಷಕರಲ್ಲಿ ಆತಂಕ ಎದುರಾಗಿದೆ.
ಮಳೆಯಿಂದಾಗಿ ಒಣಗಿದ್ದ ಕೆರೆಕಟ್ಟೆಗಳು ತುಂಬಿದ್ದು, ಕಾವೇರಿ ನದಿ ಮೈದುಂಬಿ ಹರಿಯುತ್ತಿರುವುದು ಕಣ್ಮನ ಸೆಳೆಯುವ ಜತೆಗೆ ಕೆಲ ಅನಾಹುತಗಳಿಗೂ ಆಹ್ವಾನ ನೀಡುತ್ತಿದೆ. ತಾಲ್ಲೂಕಿನ ಎಲ್ಲ ನಾಲೆಗಳಲ್ಲೂ ರಭಸವಾಗಿ ನೀರು ಹರಿಯುತ್ತಿದೆ. ಇಷ್ಟಾದರೂ ಬಾಲಕರು, ಯುವಕರು ಇದನ್ನು ಲೆಕ್ಕಿಸದೆ ಈಜಲು ಹೋಗಿ ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅವರನ್ನು ಕಾಪಾಡಲು ಹೋದ ಪೋಷಕರು ಹಾಗೂ ಅಲ್ಲಿದ್ದ ಸ್ಥಳೀಯರು ಕೂಡ ಪ್ರಾಣ ಕಳೆದು ಕೊಂಡಿರುವ ಘಟನೆಗಳು ಘಟಿಸುತ್ತಿವೆ.
ತುಂಬಿ ತುಳುಕುತ್ತಿರುವ ಕೆರೆ-ಕಟ್ಟೆ ಹಾಗೂ ನಾಲೆಗಳು ಯುವಕರು, ಮಕ್ಕಳನ್ನು ಆಕರ್ಷಿಸುತ್ತಿವೆ. ಗ್ರಾಮೀಣ ಪ್ರದೇಶದ ಮಕ್ಕಳು ಈಜುಕಲಿಯಲು ತೆರಳುತ್ತಿದ್ದು, ಈಜು ಬಾರದವರು ಅಪಾಯವನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. ಮರಳು ಮತ್ತು ಮಣ್ಣು ದಂಧೆಯಲ್ಲಿ ತೊಡಗಿರುವವರು ಕೆರೆಗಳ ಮಧ್ಯದಲ್ಲಿ ಮಣ್ಣು ಹಾಗೂ ನದಿಗಳಲ್ಲಿ ಮರಳು ತೋಡಿದ್ದು, ಅಲ್ಲಲ್ಲಿಗುಂಡಿಗಳು ನಿರ್ಮಾಣವಾಗಿವೆ. ಈಜಿ ಕೆರೆಯ ಮಧ್ಯ ಭಾಗ ತಲುಪಿದ ಬಳಿಕ ಆಯಾಸದಿಂದ ದಣಿವಾರಿಸಿ ಕೊಳ್ಳಲು ಕೆರೆಯಲ್ಲಿ ಕಾಲು ಬಿಟ್ಟರೆ ಕೆಲವೆಡೆ ಮಣ್ಣಿನ ಗುಂಡಿ ಸಿಗುತ್ತದೆ. ಮತ್ತೆ ಕೆಲವೆಡೆ ಕೆಸರು ಗುಂಡಿ ಸಿಗುತ್ತಿವೆ. ಹಾಗಾಗಿ ಈಜು ತಿಳಿದವರೂ ಕೆಸರಿನಲ್ಲಿ ಕಾಲು ಹೂತು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ.
ಇದನ್ನು ಓದಿ: ಹೆಬ್ಬಾಳು ಕೆರೆ ಕಲುಷಿತ; ಒಡಲ ತುಂಬ ತ್ಯಾಜ್ಯದ ರಾಶಿ
ತಾಲ್ಲೂಕಿನಲ್ಲಿ ಕೆಲವು ವಿದ್ಯಾರ್ಥಿಗಳು ಕೆರೆಗಳಲ್ಲಿ ಈಜಲು ಹೋಗಿ ಮುಳುಗಿ ಮೃತಪಟ್ಟಿರುವ ಘಟನೆಗಳು ಈಗಾಗಲೇ ಸಂಭವಿಸಿರುವ ಘಟನೆ ನಮ್ಮ ಕಣ್ಮುಂದೆ ಇದೆ. ೨೦೨೪-೨೫ನೇ ಸಾಲಿನಿಂದ ಇಲ್ಲಿಯವರೆಗೆ ಕೆ.ಆರ್.ನಗರ ಮತ್ತು ಸಾಲಿಗ್ರಾಮ ಅವಳಿ ತಾಲ್ಲೂಕುಗಳಲ್ಲಿ ಕೆರೆ ಕಟ್ಟೆಗಳಲ್ಲಿ ಈಜಲು ಹೋಗಿ ಹಾಗೂ ಕಾಲುಜಾರಿ ಅಂದಾಜು ೧೦ಕ್ಕೂ ಹೆಚ್ಚು ಮಕ್ಕಳು, ಯುವಕರು, ಪೋಷಕರು ಸಾವನ್ನಪ್ಪಿರುವ ಪ್ರಕರಣಗಳು ನಡೆದಿವೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪೋಷಕರು ತಮ್ಮ ಮಕ್ಕಳನ್ನು ಕೆರೆ-ಕಟ್ಟೆಗಳಿಗೆ, ನಾಲೆ ಹಾಗೂ ನದಿಪಾತ್ರಗಳಿಗೆ ಈಜಲು ಹೋಗದಂತೆ ಎಚ್ಚರಿಕೆಯ ತಿಳಿವಳಿಕೆ ಹೇಳಬೇಕಿದೆ. ಜೊತೆಗೆ ಶಾಲಾ ಹಂತದಲ್ಲಿ ಶಿಕ್ಷಕರು ಕೂಡ ಅಪ್ರಾಪ್ತಮಕ್ಕಳಿಗೆ ಕೆರೆ ಕಟ್ಟೆಗಳಲ್ಲಿ ಈಜಲು ಹೋಗದಂತೆ ಅರಿವು ಮೂಡಿಸ ಬೇಕಾಗಿದೆ.
” ಕೆರೆಕಟ್ಟೆಗಳಲ್ಲಿ ಹಣದಾಸೆಗೆ ಅಲ್ಲಲ್ಲಿ ಮಣ್ಣು ತೆಗೆದು ಗುಂಡಿಗಳು ಬಿದ್ದಿವೆ. ನದಿಯಲ್ಲಿ ಮರಳು ತೆಗೆದು ಹೊಂಡಗಳಾಗಿವೆ. ಕಾವೇರಿ ನದಿಯಲ್ಲಿ ನೀರು ಹೆಚ್ಚಾಗಿ ಹರಿಯುತ್ತಿದೆ. ಯುವಕರು, ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಕೆರೆಕಟ್ಟೆಗಳು, ನಾಲೆ ಸೇರಿದಂತೆ ನದಿಗಳಿಗೆ ಈಜಲು ಇಳಿಯಬಾರದು.”
-ಗಂಧನಹಳ್ಳಿ ಹೇಮಂತ್, ಅಧ್ಯಕ್ಷರು, ತಾಲ್ಲೂಕು ಹಿಂದುಳಿದ ವರ್ಗಗಳ ವೇದಿಕೆ
” ತಾಲ್ಲೂಕಿನಲ್ಲಿ ಉತ್ತಮವಾಗಿ ಮಳೆಯಾಗಿ ಕೆರೆ-ಕಟ್ಟೆಗಳು ಮೈದುಂಬಿವೆ. ಪೋಷಕರು ತಮ್ಮ ಮಕ್ಕಳನ್ನು ಕೆರೆಕಟ್ಟೆಗಳ ಬಳಿ ಹೋಗದಂತೆ ಎಚ್ಚರಿಕೆ ವಹಿಸಿ ಸ್ನೇಹಿತರ ಜೊತೆಗೆ ಈಜಲು ಹೋಗದಂತೆ ತಡೆಯಬೇಕು. ಈಜಲು ಹೋದರೆ ಅಪಾಯ ಕಟ್ಟಿಟ್ಟ ಬುತ್ತಿ. ಕೆಲ ದಿನಗಳ ಹಿಂದೆ ಸಾಲಿಗ್ರಾಮದಲ್ಲಿ ಮೂವರು ವಿದ್ಯಾರ್ಥಿಗಳು ಕೆರೆಯಲ್ಲಿ ಮುಳುಗಿ ಮೃತಪಟ್ಟಿರುವ ದುರ್ಘಟನೆಯೇ ಇದಕ್ಕೆ ಸಾಕ್ಷಿ.”
-ಅರ್ಜುನಹಳ್ಳಿ ರಾಮ್ಪ್ರಸಾದ್, ಅಧ್ಯಕ್ಷರು, ತಾಲ್ಲೂಕು ಯುವ ರೈತ ವೇದಿಕೆ
-ಭೇರ್ಯ ಮಹೇಶ್





