ಮೈಸೂರು: ಜೀವವೈವಿಧ್ಯ ತಾಣವಾಗಿರುವn ಹಾಗೂ ಪ್ರಕೃತಿಯ ಸೊಬಗಿನ ವಾತಾವರಣದಿಂದ ಕೂಡಿರುವ ಕಾರಂಜಿ ಕೆರೆ ಉದ್ಯಾನದಲ್ಲಿ ‘ಪರಿಸರ ಅನುಭವ ವಲಯ’ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಇದು ದೇಶ- ವಿದೇಶಗಳಿಂದ ಬರುವ ಪ್ರವಾಸಿಗರಿಗೆ ವಿಶೇಷ ಆಕರ್ಷಣೆಯಾಗಲಿದೆ.
ಇದು ಸಿದ್ಧವಾದ ನಂತರ ಪರಿಸರ ವೀಕ್ಷಣಾ ಗೋಪುರ(ಇಕೋ ಟವರ್) ಏರಿ, ಜಿಪ್ಲೈನ್ನಲ್ಲಿ ಸಂಚರಿಸಿ, ಲೇಕ್ವಾಕ್ ಮತ್ತು ಕೆನೋಪಿ ವಾಕ್ನಲ್ಲಿ ತಿರುಗಾಡಿ ಕಾರಂಜಿ ಕೆರೆಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದಾಗಿದೆ.
ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಸ್ವದೇಶಿ ದರ್ಶನ್ ೨.೦ ಯೋಜನೆ ಯಡಿ ೧೮ ಕೋಟಿ ರೂ. ವೆಚ್ಚದಲ್ಲಿ ‘ಎಕಾಲಾ ಜಿಕಲ್ ಎಕ್ಸ್ಪೀರಿಯೆನ್ಸ್ ಝೋನ್(ಇಇ ಝಡ್)’ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಕರ್ನಾಟಕ ಪ್ರವಾಸೋದ್ಯಮ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಮೂಲಕ ಈ ಯೋಜನೆ ಯನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ.
ಪ್ರಸಿದ್ಧ ಪ್ರವಾಸಿ ಆಕರ್ಷಣಾ ತಾಣವಾಗಿರುವ ಕಾರಂಜಿಕೆರೆ ೯೦ ಹೆಕ್ಟೇರ್ ವಿಸ್ತೀರ್ಣ ಹೊಂದಿದ್ದು, ಸುಂದರವಾದ ಪ್ರಕೃತಿ ಉದ್ಯಾನ, ಚಿಟ್ಟೆ ಉದ್ಯಾನವನ್ನು ಒಳಗೊಂಡಿದೆ. ಪ್ರವಾಸಿಗರು ಇವುಗಳ ನಡುವೆ ನಡೆದಾಡುವ ಅನುಭವವೇ ಭಿನ್ನವಾಗಿರುತ್ತದೆ. ನಗರದ ಶ್ರೀ ಚಾಮರಾಜೇಂದ್ರ ಮೃಗಾಲಯದ ಅಧೀನದಲ್ಲಿರುವ ಕಾರಂಜಿಕೆರೆ ವಲಸೆ ಹಕ್ಕಿಗಳಿಗೆ ನೆಚ್ಚಿನ ತಾಣವೂ ಆಗಿದೆ.
ಪ್ರಮುಖ ಆಕರ್ಷಣೆ ಇಕೋ ಟವರ್: ಕಾರಂಜಿಕೆರೆ ಆವರಣದಲ್ಲಿ ಥಂಡಿ ಸಡಕ್ ರಸ್ತೆಗೆ ಹೊಂದಿಕೊಂಡಂತೆ ಇಕೋ ಟವರ್ ನಿರ್ಮಾಣವಾಗುತ್ತಿದ್ದು, ದಕ್ಷಿಣ ಕರ್ನಾಟಕದಲ್ಲಿ ಇದು ಮೊದಲ ಇಕೋ ಟವರ್ ಎಂಬ ಹಿರಿಮೆಗೆ ಪಾತ್ರವಾಗಲಿದೆ. ೨೧ ಮೀಟರ್ ಎತ್ತರದಲ್ಲಿ ೭ ಅಂತಸ್ತಿನ ಪರಿಸರ ವೀಕ್ಷಣಾ ಗೋಪುರ ಇದಾಗಿದ್ದು, ಇದನ್ನು ಏರಲು ವೃತ್ತಕಾರದಲ್ಲಿ ರ್ಯಾಂಪ್ ವ್ಯವಸ್ಥೆ ಮಾಡಲಾಗುತ್ತದೆ. ಟವರ್ನ ನಿರ್ಮಾಣಕ್ಕೆ ೨೪ ಮೀಟರ್ ಅಗಲದ ಅಡಿಪಾಯ ಹಾಕಲಾಗುತ್ತಿದ್ದು, ಅದರ ಅಗಲ ೧೭.೨೫ ಮೀಟರ್ ಇರುತ್ತದೆ.
ಇದರಿಂದ ಏಕಕಾಲಕ್ಕೆ ನೂರಾರು ಜನರು ಟವರ್ ಮೇಲೆ ನಿಂತುಕೊಂಡು ಮೈಸೂರಿನ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಇದು ಪಕ್ಷಿ ವೀಕ್ಷಣೆಗೂ ಸಹಕಾರಿಯಾಗಲಿದೆ. ಹೀಗಾಗಿ ಪರಿಸರ ವೀಕ್ಷಣಾ ಗೋಪುರವೇ ಪ್ರಮುಖ ಆಕರ್ಷಣೆಯಾಗಲಿದೆ.
ನಡಿಗೆ ಪಥದ ಮೆರುಗು: ಕಾರಂಜಿ ಕೆರೆಯಲ್ಲಿ ಮುಖ್ಯದ್ವಾರ ಟಿಕೆಟ್ ಕೌಂಟರ್ನಿಂದ ಎಕೋ ಟವರ್ವರೆಗೆ ೩ ಕಿ.ಮೀ. ನಡಿಗೆ ಪಥ(ವಾಕಿಂಗ್ ಪಾಥ್) ನಿರ್ಮಿಸಲಾಗುತ್ತದೆ. ಈಗಾಗಲೇ ಪ್ರವಾಸಿಗರಿಗೆ ವಾಕಿಂಗ್ ಪಾಥ್ ಇದ್ದು, ಅದನ್ನು ಸ್ವದೇಶಿ ದರ್ಶನ್ ೨.೦ ಯೋಜನೆಯಡಿ ಇನ್ನಷ್ಟು ಅಭಿವೃದ್ಧಿಪಡಿಸಲಾಗುತ್ತದೆ.
ಕಾರಂಜಿಕೆರೆ ಆವರಣದಲ್ಲಿ ಥಂಡಿ ಸಡಕ್ ರಸ್ತೆಗೆ ಹೊಂದಿಕೊಂಡಂತೆ ೪೫೦ ಮೀಟರ್ ಉದ್ದ ಜಿಪ್ ಲೈನ್ ನಿರ್ಮಾಣವಾಗಲಿದೆ. ಇಕೋ ಟವರ್ ಬಳಿಯಿಂದ ಜಿಪ್ಲೈನ್ನಲ್ಲಿ ಬಂದು, ಲಲಿತ ಮಹಲ್ ಮುಖ್ಯ ರಸ್ತೆ ಕಾರಂಜಿ ಕರೆ ಪ್ರವೇಶದ್ವಾರದ ಸಮೀಪ ಇಳಿಯಬಹುದಾಗಿದೆ. ಕೆರೆ ಮೇಲೆ ಜಿಪ್ಲೈನ್ ಪ್ರಯಾಣಿಸುವುದರಿಂದ ಕೆರೆ ಪರಿಸರ ವೀಕ್ಷಣೆಗೆ ಅವಕಾಶ ಸಿಗಲಿದೆ. ಜಿಪ್ಲೈನ್ ನಿರ್ಮಾಣಕ್ಕಾಗಿ ಪಿಲ್ಲರ್ ಹಾಕಲಾಗುತ್ತಿದ್ದು, ಜಿಪ್ ಲೈನ್ ಕಾರಂಜಿಕೆರೆಯ ಚಿಟ್ಟೆ ಪಾರ್ಕ್ಗೆ ಹೊಂದಿಕೊಂಡಂತೆ ನಿರ್ಮಾಣವಾಗಲಿದೆ. ಕೆರೆ ನೀರಿನ ಮೇಲೆ ೧೮ ಮೀಟರ್ ಎತ್ತರದಲ್ಲಿ ರೋಪ್ ಅಳವಡಿಸಲಾಗುತ್ತದೆ. ಇದರಿಂದ ಜಿಪ್ಲೈನ್ ಸಾಹಸ ಮಾಡುವ ಪ್ರವಾಸಿಗರಿಗೆ ಉತ್ತಮ ಅನುಭವ ಕಲ್ಪಿಸಿಕೊಡಲು ಉದ್ದೇಶಿಸಲಾಗಿದೆ.
ಲೇಕ್, ಕೆನೋಪಿ ವಾಕ್ನಲ್ಲಿ ನಡಿಗೆ: ಈ ಕೆರೆಯಲ್ಲಿ ಇಕೋ ಟವರ್ ಬಳಿಯಿಂದ ಲೇಕ್ ಮತ್ತು ಕೆನೋಪಿ ವಾಕ್ ಮಾಡುವ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ. ೩೫೦ ಮೀಟರ್ ಉದ್ದ ಇರುವ ಈ ಲೇಕ್ ಮತ್ತು ಕೆನೋಪಿ ವಾಕ್ ಹೊಸ ಅನುಭವನೀಡಲಿದೆ. ಟವರ್ಗೆ ಹೊಂದಿಕೊಂಡಂತೆ ಕೆಳಗೆಲೇಕ್ವಾಕ್ಗೆ ಸೇತುವೆ ಮಾದರಿಯಲ್ಲಿ ವ್ಯವಸ್ಥೆಕಲ್ಪಿಸಿದರೆ, ಅದರ ಮೇಲೆ ಕೆನೋಪಿ ವಾಕ್ಗೆ ಮತ್ತೊಂದು ಸೇತುವೆ ಮಾದರಿಯಲ್ಲಿ ವ್ಯವಸ್ಥೆ ಮಾಡಲಾಗುತ್ತದೆ. ಇದರಿಂದ ನೀರಿನ ಮೇಲೆ ನಡಿಗೆ ಮಾಡಿದಂತಾಗಲಿದ್ದು, ಕೆರೆ ಪರಿಸರ ವೀಕ್ಷಿಸುವ ಅನುಭವ ದೊರೆಯಲಿದೆ.
ರೋಪ್ ಬ್ರಿಡ್ಜ್: ಮಕ್ಕಳಿಗಾಗಿ ೩೦ ಮೀಟರ್ ಉದ್ದದ ರೋಪ್ ಬ್ರಿಡ್ಜ್ ನಿರ್ಮಿಸಲಾಗುತ್ತದೆ. ಹಗ್ಗದಿಂದ ನಿರ್ಮಿಸಲಾಗುವ ಇದು ತೂಗುವ ಸೇತುವೆಯಂತೆ ಮಕ್ಕಳಿಗೆ ಅನುಭವ ನೀಡಲಿದೆ. ಕಾರಂಜಿಕೆರೆಗೆ ಬರುವ ಪ್ರವಾಸಿಗರಿಗೆ ತಿಂಡಿ, ತಿನಿಸು ಸಿಗುತ್ತಿಲ್ಲ. ೩ ಕಿ.ಮೀ. ನಡೆದುಕೊಂಡು ಬರುವ ಪ್ರವಾಸಿಗರು ತಿನ್ನಲು ತಿಂಡಿ ಹಾಗೂ ಕುಡಿಯಲು ನೀರಿನ ಬಾಟಲಿ ದೊರೆಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ಫುಡ್ ಕಿಯಾಸ್ಕ್ ನಿರ್ಮಾಣ ಮಾಡಿ,ಅದರಲ್ಲಿ ಎರಡು ಕಂಟೇನರ್ ಇಡಲಾಗುತ್ತದೆ. ಇದರಲ್ಲಿ ನೀರು, ಪಾನೀಯ, ಚಾಟ್ಸ್, ತಿಂಡಿಮಾರಾಟದ ಚಿಕ್ಕಿ ಮಳಿಗೆ ಇರಲಿದ್ದು, ಅವುಗಳನ್ನು ಮೃಗಾಲಯದಿಂದ ನಿರ್ವಹಿಸಲಾಗುತ್ತದೆ.
೯ ತಿಂಗಳ ಗಡುವು: ಈಗಾಗಲೇ ಇಕೋ ಟವರ್ಗೆ ಬೃಹತ್ ಆಕಾರದ ಪಿಲ್ಲರ್ ಕಾಮಗಾರಿ ಬಿರುಸಾಗಿ ನಡೆಯುತ್ತಿದೆ. ಎಲ್ಲ ಕಾಮಗಾರಿಗಳನ್ನು ೯ ತಿಂಗಳೊಳಗೆ ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿದೆ. ಆದರೆ ವಿವಿಧ ಕಾರಣಗಳಿಂದ ಎರಡು ತಿಂಗಳು ತಡವಾಗಿದ್ದು, ಇದರಿಂದಾಗಿವರ್ಷದೊಳಗೆ ಕಾರಂಜಿಕೆರೆಯಲ್ಲಿ ಇಕೋ ಟವರ್, ಜಿಪ್ಲೈನ್, ರೋಪ್ ಬ್ರಿಡ್ಜ್, ಕೆನೋಪಿ, ಲೇಕ್ ವಾಕ್ ನಿರ್ಮಾಣಗೊಂಡು ಪ್ರವಾಸಿಗರ ಸೇವೆಗೆ ಲಭ್ಯವಾಗುವ ನಿರೀಕ್ಷೆ ಇದೆ.
” ಕಾರಂಜಿಕೆರೆಯಲ್ಲಿ ೧೮ ಕೋಟಿ ರೂ. ವೆಚ್ಚದಲ್ಲಿ ಪ್ರವಾಸೋದ್ಯಮಕ್ಕೆ ಸಂಬಂಽಸಿದ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಇಕೋ ಟವರ್, ಜಿಪ್ಲೈನ್ ಮುಂತಾದ ಕೆಲಸಗಳನ್ನು ನಿಗದಿತ ಅವಽಯೊಳಗೆ ಪೂರ್ಣಗೊಳಿಸಲಾಗುವುದು. ಗುಣಮಟ್ಟವನ್ನು ನಿರಂತರವಾಗಿ ಪರಿಶೀಲಿಸಲಾಗುತ್ತಿದೆ.”
-ಡಾ.ವಿ.ಎಂ.ಪ್ರಭುಸ್ವಾಮಿ, ಉಪನಿರ್ದೇಶಕ, ಪ್ರವಾಸೋದ್ಯಮ ಇಲಾಖೆ




