Mysore
25
overcast clouds
Light
Dark

ರಸ್ತೆಯಲ್ಲೇ ಹರಿಯುವ ಚರಂಡಿ ನೀರು: ಕೆ.ಆರ್.ನಗರದ ಪ್ರಮುಖ ರಸ್ತೆಯಲ್ಲೇ ಅವ್ಯವಸ್ಥೆ

ಕೆ.ಆರ್.ನಗರ: ರಸ್ತೆಯಲ್ಲಿ ಗಲೀಜು ನೀರು… ಮೂಗು ಮುಚ್ಚಿಕೊಂಡು ಜನರ ಓಡಾಟ… ಇದು ಕಳೆದ 4-5 ದಿನಗಳಿಂದ ಪಟ್ಟಣದ ಪ್ರಮುಖ ಪುರಸಭೆ ವೃತ್ತದಿಂದ ಮಧುವನಹಳ್ಳಿ, ಚೀರನಹಳ್ಳಿ ರಸ್ತೆಗೆ ಸಂಪರ್ಕಿಸುವ ರಸ್ತೆಯಲ್ಲಿ ಕಂಡುಬರುತ್ತಿರುವ ಅವ್ಯವಸ್ಥೆ. ಇದರಿಂದ ಅಕ್ಕಪಕ್ಕದ ಮನೆಯ ವಾಸಿಗಳು, ಜನರು, ತರಕಾರಿ ವ್ಯಾಪಾರಸ್ಥರು ಸಂಕಷ್ಟ ಅನುಭವಿಸುತ್ತಿದ್ದಾರೆ.

ಪಟ್ಟಣದ ಐದಾರು ಕಡೆಯ ಬಡಾವಣೆಗಳಲ್ಲಿ ಒಳಚರಂಡಿ ತುಂಬಿಕೊಂಡು ಮ್ಯಾನ್‌ಹೋಲ್ ಮುಚ್ಚಳ ತೆರೆದು ಕೊಳಚೆ ನೀರು ಹರಿಯುತ್ತಿದೆ. ಮಳೆಗಾಲದ ಆರಂಭಕ್ಕೂ ಮುನ್ನ ಒಳಚರಂಡಿಗಳನ್ನು ದುರಸ್ತಿ ಮಾಡದಿದ್ದರಿಂದ ಈ ರೀತಿಯಾಗಿದೆ ಎನ್ನುವುದು ಸಾರ್ವಜನಿಕರ ಆರೋಪ.

ಜನನಿಬಿಡ ಪ್ರದೇಶ ಹಾಗೂ ವಿಧಾನ ಪರಿಷತ್‌ ಸದಸ್ಯ ಅಡಗೂರು ಹೆಚ್.ವಿಶ್ವನಾಥ್ ಅವರ ಮನೆಗೆ ಅನತಿ ದೂರದಲ್ಲಿರುವ ರಸ್ತೆಗೆ ಹೊಂದಿಕೊಂಡಂತೆ ಇರುವ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಬಿಇಒ ಕಚೇರಿ ಎದುರು ರಸ್ತೆಯಲ್ಲಿ ಮ್ಯಾನ್ ಹೋಲ್‌ಗಳಲ್ಲಿ ತುಂಬಿ ಹರಿಯುತ್ತಿದ್ದರೂ ಪುರಸಭೆ ಅಧಿಕಾರಿಗಳು ಗಮನ ಹರಿಸಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜನರು ಅದೇ ಕೊಳಚೆ ನೀರಿನಲ್ಲಿ ಓಡಾಡುವ ಅನಿವಾರ್ಯತೆ ನಿರ್ಮಾಣವಾಗಿದೆ. ಕಳೆದ 4-5 ದಿನಗಳಿಂದ ಒಳ ಚರಂಡಿ ನೀರು ರಸ್ತೆಯಲ್ಲಿ ಹರಿಯುತ್ತಿದ್ದರೂ ಮ್ಯಾನ್‌ಹೋಲ್ ದುರಸ್ತಿಗೊಳಿಸುವ ಗೋಜಿಗೆ ಹೋಗದೇ ಪಟ್ಟಣದ ಪುರಸಭೆ ಕಣ್ಣುಚ್ಚಿ ಕುಳಿತಿದೆ ಎಂದು ಜನರು ದೂರಿದ್ದಾರೆ.

ಬೇಸಿಗೆಯಲ್ಲಿ ಮ್ಯಾನ್ ಹೋಲ್‌ಗಳನ್ನು ದುರಸ್ತಿ ಮಾಡಿದ್ದರೆ ಹೀಗಾಗುತ್ತಿರಲಿಲ್ಲ. ಈ ಪರಿಸ್ಥಿತಿ ಪುರಸಭೆ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಉಂಟಾಗಿದೆ. ರಸ್ತೆಯ ಮಧ್ಯಭಾಗದಲ್ಲಿ ಒಳಚರಂಡಿ ನೀರು ತುಂಬಿಹರಿಯುತ್ತಿದೆ. ಆದರೆ ಪುರಸಭೆಯ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಮಳೆಗಾಲಕ್ಕೂ ಮುನ್ನವೇ ಇಂತಹ ಮ್ಯಾನ್‌ಹೋಲ್‌ಗಳ ಪೈಪ್‌ಲೈನ್‌ ದುರಸ್ತಿ ಮಾಡಬೇಕಿತ್ತು. ಆಗ ಪುರಸಭೆ ಗಮನ ಹರಿಸಲಿಲ್ಲ. ಇತ್ತೀಚೆಗೆ ನಿರಂತರ ಮಳೆಯಾದ ಪರಿಣಾಮ ಪ್ರಮುಖ ಪ್ರದೇಶದಲ್ಲಿನ ಒಳಚರಂಡಿ ಮ್ಯಾನ್
ಹೋಲ್‌ಗಳು ತುಂಬಿಕೊಂಡಿವೆ.
-ಆಸಿಫ್ ಪಾಷ, ಬೈಕ್ ಮೆಕ್ಯಾನಿಕ್

ಪಟ್ಟಣದಲ್ಲಿ ಐದಾರು ಬಡಾವಣೆಗಳಲ್ಲಿ ಮಳೆ ಬಂದರೆ ಚರಂಡಿ ನೀರು ತುಂಬಿ ಮ್ಯಾನ್ ಹೋಲ್ ಮುಚ್ಚಳಗಳು ತೆರೆದು ರಸ್ತೆಯಲ್ಲಿ ನೀರು ಹರಿಯುತ್ತದೆ. ಪುರಸಭೆ ಸಿಬ್ಬಂದಿ ಇವುಗಳನ್ನು ಮುಚ್ಚಿ ಸರಿಪಡಿಸುವ ಕೆಲಸ ಮಾಡುತ್ತಿದ್ದು, ಕೆಲವು ಕಡೆಗಳಲ್ಲಿ ಪೈಪ್ ಲೈನ್ ಒಡೆದಿರುವುದರಿಂದ ಹೊಸದಾಗಿ ಪೈಪ್ ಲೈನ್ ಅಳವಡಿಸಲಾಗಿದೆ.
-ಹೇಮಂತ್‌ ಕುಮಾರ್ ಡೊಳ್ಳೆ, ಮುಖ್ಯಾಧಿಕಾರಿ, ಪುರಸಭೆ