ದಾ.ರಾ.ಮಹೇಶ್
ನಾಳೆಯಿಂದ ಶ್ರೀ ರಾಮಾಂಜನೇಯ ಮಹೋತ್ಸವ
ವೀರನಹೊಸಹಳ್ಳಿ: ಹುಣಸೂರು ತಾಲ್ಲೂಕಿನ ದೊಡ್ಡಹೆಜ್ಜೂರು ಗ್ರಾಮದಲ್ಲಿ ಜ.೧೪ರಿಂದ ಶ್ರೀ ರಾಮಾಂಜನೇಯ ಮಹೋತ್ಸವ ನಡೆಯಲಿದ್ದು, ಜಾತ್ರೆಗೆ ಇಡೀ ಗಾ ಮವೇ ಸಜ್ಜುಗೊಳ್ಳುತ್ತಿದ್ದು, ಜಾತ್ರಾ ಸಂಭ್ರಮ ಕಳೆಕಟ್ಟಿದೆ.
ಸಂಪ್ರದಾಯದಂತೆ ಸಂಕ್ರಾಂತಿ ಹಬ್ಬದ ಮಾರನೆಯ ದಿನ ರಥೋತ್ಸವ ನಡೆಯಲಿದ್ದು, ಚುಂಚನಕಟ್ಟೆಯಲ್ಲಿ ಶ್ರೀ ರಾಮ ದೇವರ ರಥೋತ್ಸವ ನಡೆಯುವ ದಿನದಂದೇ ಇಲ್ಲೂ ರಥೋತ್ಸವ ನಡೆಯುವುದು ವಿಶೇವಾಗಿದೆ. ಹಲವಾರು ವರ್ಷಗಳ ಹಿಂದೆಯೇ ಆಂಜನೇಯಸ್ವಾಮಿ ದೇಗುಲ ಸ್ಥಾಪಿಸಲಾಗಿದ್ದರೂ ಸುಮಾರು ೬೫ ವರ್ಷಗಳ ಹಿಂದೆ ರಾಮ, ಸೀತೆ, ಲಕ್ಷ್ಮಣರ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಯಿತು. ನಂತರದ ವರ್ಷಗಳಲ್ಲಿ ರಥೋತ್ಸವ ಆರಂಭವಾ ಯಿತು ಎಂದು ಗ್ರಾಮದ ಹಿರಿಯರು ಮಾಹಿತಿ ನೀಡುತ್ತಾರೆ.
ಜಾತ್ರೆಯಲ್ಲಿ ದೇವಾಲಯದ ಸುತ್ತಮುತ್ತಲಿನ ೧೬ ಹಳ್ಳಿಗಳ ಜನತೆ ಪಾಲ್ಗೊಳ್ಳುತ್ತಾರೆ. ಜಾತ್ರೆ ನಡೆಸಲು ಗ್ರಾಮಗಳು ಒಂದೊಂದು ಜವಾಬ್ದಾರಿ ಹೊರುವುದು ವಿಶೇಷ.
ಜಾತ್ರೆ ಪ್ರಯುಕ್ತ ಗ್ರಾಮದ ಶ್ರೀ ರಾಮಾಂಜನೇಯ ದೇವಾಲಯವನ್ನು ಸುಣ್ಣ ಬಣ್ಣ ಬಳಿದು ಸಿಂಗರಿಸಲಾಗಿದೆ. ವೀರತಯ್ಯನ ಭರತವಾಡಿ ಯವರು ದೇವಾಲಯಕ್ಕೆ ಸುಣ್ಣ ಬಣ್ಣ ಬಳಿದರೆ, ಹಿಂಡಗೂಡ್ಲುನವರು ರಥ ಎಳೆಯುವ ಹಗ್ಗ ತರುತ್ತಾರೆ. ದಾಸನಪುರದವರು ಹೂವಿನ ಚಪ್ಪರ ಹಾಕುತ್ತಾರೆ.
ಮುದಗನೂರಿ ನವರು ರಥ ನಿಯಂತ್ರಣಕ್ಕೆಮರದ ಗೊದ್ದ ತಯಾರು ಮಾಡುತ್ತಾರೆ. ಶಿಂಡೇನಹಳ್ಳಿ, ನೇಗತ್ತೂರಿನವರು ತೆಪ್ಪೋತ್ಸವ ನಡೆಸಲು ತಯಾರಿ ಮಾಡುತ್ತಾರೆ. ಹನಗೋಡು, ಕಿರಂಗೂರು, ಹರಳಹಳ್ಳಿ, ಚಿಕ್ಕಹೆದ್ದೂರು, ಅಟ್ಟೂರು, ಕೊಳವಿಗೆ, ಕೋಣನ ಹೊಸಹಳ್ಳಿ, ವೀರನಹೊಸಹಳ್ಳಿ ಸೇರಿದಂತೆ ಹತ್ತಾರು ಗ್ರಾಮ ದವರು ಜಾತ್ರೆಗೆ ಇನ್ನುಳಿದ ಎಲ್ಲ ರೀತಿಯ ಸಹಕಾರ ನೀಡುತ್ತಾರೆ.
ಜಾತ್ರೆಗೆ ಬರುವ ಬಹುತೇಕ ಭಕ್ತರು ಲಕ್ಷ್ಮಣ ತೀರ್ಥ ನದಿ ದಂಡೆಯಲ್ಲಿ ಪ್ರಸಾದ ವಿನಿಯೋಗ ಮಾಡುತ್ತಾರೆ. ಸುತ್ತಮುತ್ತಲಿನ ರೈತರ ದನಗಳು ರೋಗ ರುಜಿನಗಳಿಂದ ಬಳಲುತ್ತಿದ್ದರೆ ಹರಕೆ ಹೊತ್ತು ಅಂತಹ ರಾಸುಗಳನ್ನು ರಥೋತ್ಸವ ನಡೆದ ಮಾರನೇ ದಿನ ದೇವಾಲಯದ ಸುತ್ತ ಮೆರವಣಿಗೆ ಮಾಡಿಸುತ್ತಾರೆ. ಹರಕೆ ಹೊತ್ತರೆ ಕಾಯಿಲೆ ವಾಸಿಯಾಗುತ್ತದೆ ಎಂಬ ನಂಬಿಕೆ ಇದೆ. ಜಾತ್ರೆ ಮಾಳಕ್ಕೆ ಹೊಂದಿಕೊಂಡಿರುವ ಕೆರೆ ಅಂಗಳದಲ್ಲಿ ಸಾಮೂಹಿಕ ಭೋಜನ ಮಾಡುವುದು ವಿಶೇಷ.
ಈಗಾಗಲೇ ಜಾತ್ರೆ ಮಾಳದಲ್ಲಿ ಸಿಹಿತಿಂಡಿ ಅಂಗಡಿಗಳ ಮಾಲೀಕರು ತಿನಿಸುಗಳನ್ನು ತಯಾರಿಸುವಲ್ಲಿ ನಿರತರಾಗಿದ್ದಾರೆ. ಈ ಜಾತ್ರೆ ಯಲ್ಲಿ ಸಿಹಿ ತಿಂಡಿಗಳ ಅಂಗಡಿಗಳು, ಮಕ್ಕಳ ಆಟಿಕೆ ಅಂಗಡಿಗಳು, ಮಹಿಳೆಯರ ಅಲಂಕಾರಿಕ ವಸ್ತುಗಳ ಅಂಗಡಿಗಳು ಆಕರ್ಷಿಸುತ್ತವೆ.
ಗಿರಿಜನರ ಉತ್ಸವ: ಇಲ್ಲಿ ಗಿರಿಜನರು ಹೆಚ್ಚಿರುವುದರಿಂದ ಗಿರಿಜನರ ಜಾತ್ರೆಯೆಂದೇ ಕರೆಯಲಾಗುತ್ತಿದೆ. ಜ.೧೪ರ ಮಕರ ಸಂಕ್ರಾಂತಿ ದಿನದಂದು ಸಂಜೆ ೪.೩೦ಕ್ಕೆ ಕಳಸ ಪೂಜೆ ಹೂವಿನ ಚಪ್ಪರ, ರಾತ್ರಿ ೮ಕ್ಕೆ ಗರುಡ ಪೂಜೆ, ಜ.೧೫ರ ಬುಧವಾರ ಮಧ್ಯಾಹ್ನ ೧೨.೪೫ರಿಂದ ೧.೩೦ ರೊಳಗೆ ರಥೋತ್ಸವ ಹಾಗೂ ವಿಶೇಷ ಪೂಜೆ, ಜ.೧೬ರ ಬುಧವಾರ ಪಂಜಿನ ಮೆರವಣಿಗೆ, ಸಂಜೆ ಪಾರುಪಟ್ಟಿ ಉತ್ಸವ ನಡೆಯಲಿದೆ. ಸಂಜೆ ೭.೩೦ಕ್ಕೆ ಲಕ್ಷ್ಮಣತೀರ್ಥ ನದಿಯಲ್ಲಿ ತೆಪ್ಪೋತ್ಸವ ನಡೆಯಲಿದೆ.
” ರಥೋತ್ಸವಕ್ಕೆ ಸಾವಿರಾರು ಭಕ್ತರು ಬರುವುದರಿಂದ ಮೂಲಸೌಕರ್ಯಗಳನ್ನು ಒದಗಿಸಲಾಗುತ್ತದೆ. ಈಗಾಗಲೇ ಜಾತ್ರಾ ಆವರಣವನ್ನು ಸ್ವಚ್ಛಗೊಳಿಸಿ, ಸಿಂಗಾರಗೊಳಿಸುತ್ತಿದ್ದು, ದೇವಾಲಯದೊಳಗೆ ಬ್ಯಾರಿಕೇಡ್ ನಿರ್ಮಿಸಿ ಜನಸಂದಣಿಯನ್ನು ನಿಯಂತ್ರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.”
-ಶೇಖರಗೌಡ, ಆಂಜನೇಯ ಸ್ವಾಮಿ ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ





