Mysore
35
overcast clouds

Social Media

ಭಾನುವಾರ, 03 ಮೇ 2026
Light
Dark

ಅವ್ಯವಸ್ಥೆಯಿಂದ ಕೂಡಿದ ಚರಂಡಿ ಕಾಮಗಾರಿ: ಆರೋಪ

ಮಂಜು ಕೋಟೆ

ಕೋಟೆ: ಅಧಿಕಾರಿಗಳು, ಗುತ್ತಿಗೆದಾರರ ವಿರುದ್ಧ ಸಾರ್ವಜನಿಕರ ಆಕ್ರೋಶ

ಎಚ್.ಡಿ.ಕೋಟೆ: ಅಧಿಕಾರಿಗಳ ಬೇಜವಾಬ್ದಾರಿ, ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಲಕ್ಷಾಂತರ ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿದ್ದ ಕೆರೆ ವಸ್ತಿ ನೀರು ಹೋಗುವ ಚರಂಡಿ ಕಾಮಗಾರಿ ಅವ್ಯವಸ್ಥೆಯಿಂದ ಕೂಡಿದೆ ಎಂದು ಸಾರ್ವಜನಿಕರುಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪಟ್ಟಣದ ಪುರಸಭೆ ವ್ಯಾಪ್ತಿಗೆ ಸೇರಿದ ವಿಶ್ವನಾಥ ಕಾಲೋನಿಯ ಕೆಂಕೆರೆ ನೀರು ಹೋಗುವ ಬೃಹತ್ ಚರಂಡಿ ನಿರ್ಮಾಣ ಕಾಮಗಾರಿಯನ್ನು ಲೋಕೋಪ ಯೋಗಿ ಇಲಾಖೆಯವರು ೮೫ ಲಕ್ಷ ರೂ. ವೆಚ್ಚದಲ್ಲಿ ಗುತ್ತಿಗೆದಾರ ಕೃಷ್ಣರೆಡ್ಡಿ ಅವರ ಮೂಲಕ ನಡೆಸುತ್ತಿದ್ದಾರೆ. ಮಳೆಗಾಲ ಪ್ರಾರಂಭವಾದರೆ ಪ್ರತಿ ಸಾಲಿನಲ್ಲೂ ಏಳೆಂಟು ತಿಂಗಳುಗಳ ಕಾಲ ಕೆಂಕೆರೆಯ ವಸ್ತಿ ನೀರು ಜಲಾವೃತಗೊಳ್ಳುತ್ತಿದ್ದರಿಂದ ಈ ಭಾಗದ ನಿವಾಸಿಗಳು ನರಕಯಾತನೆ ಪಡುತ್ತಿದ್ದರು.

ಇದನ್ನೆಲ್ಲ ಗಮನಿಸಿದ್ದ ಶಾಸಕ ಅನಿಲ್ ಚಿಕ್ಕಮಾದು ನಿವಾಸಿಗಳಿಗೆ ಅನುಕೂಲವಾಗಲೆಂದು ೮೫ ಲಕ್ಷ ರೂ. ವಿಶೇಷ ಅನುದಾನವನ್ನು ಕೊಡಿಸಿದ್ದರು. ಆದರೆ ಲೋಕೋಪಯೋಗಿ ಇಲಾಖೆಯವರು ಮತ್ತು ಗುತ್ತಿಗೆದಾರರು ನೀಡಿರುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಈ ಭಾಗದ ಜನರಿಗೆ ಅನುಕೂಲವಾಗುವಂತೆ ಶಾಶ್ವತ ಕಾಮಗಾರಿಯನ್ನು ನಡೆಸದೆ ಬೇಕಾಬಿಟ್ಟಿ ಕಾಮಗಾರಿ ನಡೆಯುತ್ತಿದೆ.

ಸರ್ವೆ ಮಾಡಿಸಿ ಬೌಂಡರಿ ಗುರುತು ಮಾಡಿಕೊಂಡು ಆದಷ್ಟು ನೇರವಾಗಿ ಮತ್ತು ಕೆಸರುಗದ್ದೆ ಆಗಿರುವುದನ್ನು ಸರಿಪಡಿಸಿಕೊಂಡು ಕಾಮಗಾರಿ ನಡೆಯಬೇಕಾಗಿತ್ತು. ಇವುಗಳನ್ನೆಲ್ಲ ನಿರ್ಲಕ್ಷಿಸಿ ಗುತ್ತಿಗೆದಾರ ಮತ್ತು ಅಧಿಕಾರಿಗಳು ಕಾಮಗಾರಿ ನಡೆಸುತ್ತಿದ್ದಾರೆ. ಸಾರ್ವಜನಿಕರು ಈ ಭಾಗದ ಪುರಸಭಾ ಸದಸ್ಯರುಗಳಾದ ಕುಲುಮೆ ರಾಜು, ಐಡಿಯಾ ವೆಂಕಟೇಶ್, ಮಿಲ್ ನಾಗರಾಜು, ಮತ್ತಿತರರಿಗೆ ವಿಚಾರ ತಿಳಿಸಿದಾಗ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ತರಾಟೆಗೆ ತೆಗೆದುಕೊಂಡರೂ ಮತ್ತೆ ಕಾಮಗಾರಿಯನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಿದ್ದಾರೆ. ಪಟ್ಟಣದಲ್ಲಿರುವ ಕೆಂಕೆರೆ ನೀರು ಕೋಡಿ ಬಿದ್ದಾಗ ನಿರ್ಮಾಣಗೊಳ್ಳುತ್ತಿರುವ ಚರಂಡಿಯಲ್ಲಿ ನೀರು ಹರಿದು ಹೋದಾಗ ಕಾಮಗಾರಿ ಕುಸಿದು ಹೋಗುವ ಸಾಧ್ಯತೆಗಳಿರುವುದರಿಂದ ಲಕ್ಷಾಂತರ ರೂ. ಅನುದಾನ ನೀರುಪಾಲಾಗುವ ಸಾಧ್ಯತೆ ಇದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಕಟ್ಟುನಿಟ್ಟಾಗಿ ಶಾಶ್ವತವಾದಂತಹ ಗುಣಮಟ್ಟದ ಕೆಲಸ ಮಾಡಬೇಕಿದೆ.

” ಕಾರ್ಮಿಕರು ಶಿಥಿಲಗೊಂಡಿರುವ ಜಾಗದಲ್ಲಿ ಕಾಮಗಾರಿ ನಡೆಸುತ್ತಿರುವ ಬಗ್ಗೆ ವಿಚಾರ ತಿಳಿದಿದ್ದು, ಇದನ್ನು ತಡೆಹಿಡಿದು ಸೂಕ್ತವಾದ ಕಾಮಗಾರಿ ನಡೆಸುವಂತೆ ಸೂಚಿಸಲಾಗಿದೆ. ಉತ್ತಮವಾದ ಕಾಮಗಾರಿಯನ್ನು ಮಾಡಿಸಲು ಮುಂದಾಗಿದ್ದೇವೆ.”

-ಸುಬ್ರಹ್ಮಣ್ಯ, ಇಂಜಿನಿಯರ್, ಪಿಡಬ್ಲ್ಯುಡಿ

 

 

Tags:
error: Content is protected !!