Mysore
29
clear sky

Social Media

ಮಂಗಳವಾರ, 17 ಫೆಬ್ರವರಿ 2026
Light
Dark

ಇಂದು ಕೆ.ಆರ್.ನಗರದಲ್ಲಿ ಆದಿಶಕ್ತಿ ತೋಪಮ್ಮ ಜಾತ್ರಾ ಮಹೋತ್ಸವ  

ಭೇರ್ಯ ಮಹೇಶ್

ಆದಿಶಕ್ತಿ ತೋಪಮ್ಮ ಟ್ರಸ್ಟ್ ಆಡಳಿತ ಮಂಡಳಿಯಿಂದ ಸಕಲ ಸಿದ್ಧತೆ; ಸಾವಿರಾರು ಮಂದಿ ಭೇಟಿ ನಿರೀಕ್ಷೆ

ಕೆ.ಆರ್.ನಗರ: ಫೆಬ್ರವರಿ ೧೭ರ ಮಂಗಳವಾರ ಶ್ರೀ ಆದಿಶಕ್ತಿ ತೋಪಮ್ಮ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಲಿದ್ದು, ಇದಕ್ಕಾಗಿ ಆದಿಶಕ್ತಿ ತೋಪಮ್ಮ ಟ್ರಸ್ಟ್ ಈಗಾಗಲೇ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಪಟ್ಟಣದ ೯ ಗ್ರಾಮಗಳ ಒಕ್ಕಲುತನದಿಂದ ಪೂಜೆ ಪಡೆಯುವ ಶ್ರೀ ಆದಿಶಕ್ತಿ ತೋಪಮ್ಮ ಪಟ್ಟಣದ ಹೆಬ್ಬಾಗಿಲು ಮೈಸೂರು-ಹಾಸನ ರಸ್ತೆಯ ಎಡಭಾಗದಲ್ಲಿ ನೆಲೆಸಿದ್ದಾಳೆ.

ಆದಿಶಕ್ತಿ ತೋಪಮ್ಮ ಅಥವಾ ತೋಪಮ್ಮ ದೇವಿ ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ, ವಿಶೇಷವಾಗಿ ಹಳೆಯ ಮೈಸೂರು ಭಾಗ ದಲ್ಲಿ (ಮಂಡ್ಯ, ಮೈಸೂರು ಜಿಲ್ಲೆ) ಪೂಜಿಸಲ್ಪಡುವ ಅತ್ಯಂತ ಶಕ್ತಿಶಾಲಿ ಗ್ರಾಮದೇವತೆ. ಇವಳು ದುರ್ಗಾ ಅಥವಾ ಪಾರ್ವತಿಯ ಅವತಾರವೆಂದು ನಂಬಲಾಗಿದ್ದು, ಗ್ರಾಮದ ರಕ್ಷಕಿ, ಬೆಳೆಗಳಿಗೆ ಒಳಿತು ಮಾಡುವವರು ಮತ್ತು ಮಕ್ಕಳನ್ನು ಕಾಪಾಡುವ ತಾಯಿಯಾಗಿ ಪೂಜಿಸಲ್ಪಡುತ್ತಾಳೆ. ತೋಪಮ್ಮ ದೇವಿಗೆ ಹರಕೆ ಹೊತ್ತರೆ, ಭಕ್ತರ ಕಷ್ಟಗಳು ದೂರಾಗುತ್ತವೆ ಮತ್ತು ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂಬ ನಂಬಿಕೆ ಜನರಲ್ಲಿದೆ.

ಈ ದೇವಿಯ ಜಾತ್ರೆ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತದೆ. ಉತ್ಸವದಲ್ಲಿ ದೇವಿಯ ಆಭರಣಗಳು, ಪೂಜಾ ವಿಧಿವಿಧಾನಗಳು, ಮತ್ತು ಭಕ್ತರ ಹರಕೆಗಳು, ಮುತ್ತೈದೆಯರು ದೇವಿಗೆ ಮಡಿಲು ತುಂಬುವುದು ವಿಶೇಷವಾಗಿದೆ.

ಐತಿಹ್ಯ: ದೇವಿಯು ಸಾಮಾನ್ಯವಾಗಿ ತೋಪಿನ ಮರ (ಒಂದು ರೀತಿಯ ಕಾಡು ಮರ ಅಥವಾ ಪವಿತ್ರ ಮರ) ಅಥವಾ ಅರಣ್ಯ ಪ್ರದೇಶದಲ್ಲಿ ನೆಲೆಸಿದ್ದಾಳೆ ಎಂದು ನಂಬಲಾಗಿದೆ. ಅದರಿಂದಲೇ ‘ತೋಪಮ್ಮ’ ಎಂಬ ಹೆಸರು ಬಂದಿದೆ ಎನ್ನಲಾಗಿದೆ. ಹಲವು ವರ್ಷಗಳ ಹಿಂದೆ ಭಕ್ತರೇ ಪೂಜೆ ಮಾಡಿಕೊಳ್ಳುತ್ತಿದ್ದರು. ತದ ನಂತರ ಅರ್ಚಕರನ್ನು ನೇಮಿಸಿ ಪೂಜೆ ಸಲ್ಲಿಸಲಾಗುತ್ತಿದೆ.

” ಆದಿಶಕ್ತಿ ತೋಪಮ್ಮ ದೇವಸ್ಥಾನಕ್ಕೆ ಬಂದು ಶ್ರದ್ಧಾಭಕ್ತಿಯಿಂದ ಭಕ್ತರು ಪೂಜಿಸಿದರೆ ವಿವಾಹ, ಸಂತಾನ ಭಾಗ್ಯ ಲಭಿಸುತ್ತದೆ. ವ್ಯಾಪಾರ, ವ್ಯವಹಾರ ಲಾಭ ಉಂಟಾಗುತ್ತದೆ. ವ್ಯಾಜ್ಯಗಳು ಬಗೆಹರಿಯುತ್ತವೆ. ದೂರವಾಗಿ ಶೀಘ್ರವಾಗಿ ಜೀವನದಲ್ಲಿ ಸುಖ, ಶಾಂತಿ ನೆಲೆಸುವ ಜತೆಗೆ ಇಷ್ಟಾರ್ಥಗಳು ಈಡೇರುತ್ತವೆ ಎಂಬುದು ಭಕ್ತರ ನಂಬಿಕೆಯಾಗಿದೆ. ಜಾತ್ರಾ ಮಹೋತ್ಸವಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಆಗಮಿಸುತ್ತಾರೆ.”

-ಕೆ.ಪಿ.ಜಗದೀಶ್, ಕಾರ್ಯದರ್ಶಿ, ಶ್ರೀ ಆದಿಶಕ್ತಿ ತೋಪಮ್ಮ ಟ್ರಸ್ಟ್

” ದೇಗುಲದಲ್ಲಿ ಪ್ರತಿನಿತ್ಯ ವಿಶೇಷ ಪೂಜೆಗಳು ನಡೆಯುತ್ತವೆ. ಮಂಗಳವಾರ, ಶುಕ್ರವಾರ ಹಾಗೂ ಭಾನುವಾರ ದೇವರಿಗೆ ವಿಶೇಷ ಪೂಜೆ ಮಾಡಲಾಗುತ್ತದೆ. ನವರಾತ್ರಿ ಸಂದರ್ಭದಲ್ಲಿ ೯ ದಿನಗಳು ದೇವಿಗೆ ವಿಶೇಷವಾಗಿ ಅಲಂಕಾರ ಮಾಡಲಾಗುತ್ತದೆ. ಆಷಾಢ ಮಾಸದಲ್ಲಿ ದೇಗುಲದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯುತ್ತವೆ. ಕಾರ್ತಿಕ ಮಾಸದಲ್ಲಿ ದೀಪೋತ್ಸವ ಹಮ್ಮಿಕೊಳ್ಳಲಾಗುತ್ತದೆ.”

-ಚೌಕಹಳ್ಳಿ ರಾಜಣ್ಣ, ಅಧ್ಯಕ್ಷರು, ಶ್ರೀ ಆದಿಶಕ್ತಿ ತೋಪಮ್ಮ ಟ್ರಸ್ಟ್‌ 

 

 

Tags:
error: Content is protected !!