Mysore
18
few clouds

Social Media

ಬುಧವಾರ, 28 ಜನವರಿ 2026
Light
Dark

ಸಾರ್ವಜನಿಕರನ್ನು ಅಣಕಿಸುತ್ತಿರುವ ಕಸದ ರಾಶಿ 

ಸಾಂಕ್ರಾಮಿಕ ರೋಗಗಳು ಹರಡುವ ಭೀತಿ; ಕ್ರಮಕೆ ಸ್ಥಳೀಯರ ಆಗ್ರಹ 

ಕಿಕ್ಕೇರಿ: ಕನ್ನಡ ಕಾವ್ಯ ಲೋಕಕ್ಕೆ ಪ್ರೇಮಕವಿ ಕೆ.ಎಸ್.ನರಸಿಂಹಸ್ವಾಮಿ ಅವರನ್ನು ಕೊಟ್ಟ ಪವಿತ್ರ ಭೂಮಿ ಕೆ.ಆರ.ಟೆ ತಾಲ್ಲೂಕಿನ ಕಿಕ್ಕೇರಿ ಗ್ರಾಮ. ಶುದ್ಧ ಭಾವನಾತ್ಮಕ ಕಾವ್ಯ ಬರೆದ ಕವಿಯ ಊರು ಇದೀಗ ಕಸದೊಳಗೊಂದು ಕಿಕ್ಕೇರಿ ಎಂಬಂತಾಗಿದ್ದು, ಸಾರ್ವಜನಿಕರ ಅಸಹನೆಗೆ ಕಾರಣವಾಗಿದೆ.

ಮೈಸೂರು-ಚನ್ನರಾಯಪಟ್ಟಣ  ಹೆದ್ದಾರಿಯ ಪಕ್ಕದಲ್ಲೇ ಇರುವ ಕಿಕ್ಕೇರಿಗೆ ಪ್ರವೇಶಿದಾಗ ಈ ಕಸದ ರಾಶಿಯ ದರ್ಶನವಾಗುತ್ತಿದೆ. ಪ್ಲಾಸ್ಟಿಕ್ ಚೀಲಗಳು, ಅಳಸಿದ ಆಹಾರ ಪದಾರ್ಥ, ಸತ್ತ ಪ್ರಾಣಿಗಳ ಕಳೇಬರದಿಂದ ದುರ್ವಾಸನೆ ಹರಡುತ್ತಿದ್ದು, ಸ್ಥಳೀಯರು ಹಾಗೂ ಪ್ರಯಾಣಿಕರು ಮೂಗು ಮುಚ್ಚಿಕೊಂಡೇ ಸಂಚರಿಸಬೇಕಾದ ಪರಿಸ್ಥಿತಿ ಎದುರಾಗಿದೆ.

ಪ್ರತಿದಿನ ನೂರಾರು ವಾಹನಗಳು ಸಂಚರಿಸುವ ಈ ಹೆದ್ದಾರಿ ಈಗ ಕಸದ ರಾಶಿಯನ್ನು ಹೊದ್ದು ಮಲಗಿದೆ. ಸರ್ಕಾರದಿಂದ ಪ್ರತಿಯೊಂದು ಗ್ರಾಮ ಪಂಚಾಯಿತಿಗೂ ಕಸ ವಿಲೇವಾರಿ ಘಟಕಗಳ ನಿರ್ಮಾಣಕ್ಕೆ ಅನುದಾನ ನೀಡಿದ್ದರೂ, ಕಿಕ್ಕೇರಿ ಗ್ರಾಮ ಪಂಚಾಯಿತಿಯಲ್ಲಿ ಇಂದಿಗೂ ಕಸ ವಿಲೇವಾರಿ ಘಟಕ ನಿರ್ಮಾನಗೊಂಡಿಲ್ಲ. ಇದರಿಂದ ಜನರು ಕಸವನ್ನು ರಸ್ತೆಬದಿಯಲ್ಲೇ ಹಾಕುತ್ತಿರುವ ಸನ್ನಿವೇಶ ಸೃಷ್ಟಿಯಾಗಿದೆ.

ಇದನ್ನು ಓದಿ: ಪ್ರವಾಸಿ ತಾಣಗಳಿಗೆ ಲಗ್ಗೆ ಇಟ್ಟ ಪ್ರವಾಸಿಗರ ದಂಡು

ಗ್ರಾಮದ ಅಂಚಿನಲ್ಲಿರುವ ಈ ಕಸದ ರಾಶಿಯು ಸಾಂಕ್ರಮಿಕ ರೋಗಗಳಿಗೆ ಎಡೆಮಾಡಿಕೊಡುತ್ತಿದೆ. ಜಾನುವಾರುಗಳು ಈ ಕಸದೊಳಗೆ ಆಹಾರ ಹುಡುಕುವ ಭರದಲ್ಲಿ ಎಲ್ಲೆಂದರಲ್ಲಿ ಹರಡುತ್ತಿವೆ. ಆಹಾರ ತಿನ್ನಲು ಹೋಗಿ ಪ್ಲಾಸ್ಟಿಕ್ ನುಂಗುವುದು, ಬಳಿಕ ಸಾವನ್ನಪ್ಪುವ ಘಟನೆಗಳು ಸಾಮಾನ್ಯವಾಗಿವೆ. ಮಳೆ ಬಂದಾಗಲಂತೂ ತ್ಯಾಜ್ಯದ ನೀರು ಹೆದ್ದಾರಿಗೆ ಹರಿದು, ವಾಹನ ಸವಾರರಿಗೆ ಕಿರಿಕಿರಿ ಉಂಟುಮಾಡುತ್ತಿದೆ.

ಸ್ಥಳೀಯ ನಾಗರಿಕರ ಆಕ್ರೋಶ: ಕವಿ ಕೆ.ಎಸ್.ನರಸಿಂಹಸ್ವಾಮಿ ಬರೆದ ಕಾವ್ಯದಂತೆ ಶುದ್ಧ ಮನಸ್ಸಿನ ಊರು ಕಿಕ್ಕೇರಿ. ಇದೀಗ ದುರ್ವಾಸನೆಯ ನೆಲವಾಗಿರುವುದು ಬೇಸರದ ಸಂಗತಿ. ಗ್ರಾಪಂ ಆಡಳಿತ ಮಂಡಳಿಯು ಕಸ ವಿಲೇವಾರಿ ಘಟಕವನ್ನು ಸ್ಥಾಪಿಸಿ ಸ್ವಚ್ಛತೆಗೆ ಆದ್ಯತೆ ನೀಡಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಪರಿಸರ ತಜ್ಞರ ಎಚ್ಚರಿಕೆ: ನಿರಂತರವಾಗಿ ಪ್ಲಾಸ್ಟಿಕ್ ಮತ್ತು ರಾಸಾಯನಿಕ ವಿಷ ಮಿಶ್ರಿತ ಕಸದಿಂದ ಮಣ್ಣು ಮತ್ತು ನೀರು ಗುಣಮಟ್ಟ ಕಳೆದುಕೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಈ ವ್ಯಾಪ್ತಿಯ ನಾಡಹಳ್ಳಿ ಬಾವಿಗಳ ನೀರು ಕೂಡ ಮಲೀನಗೊಳ್ಳುವ ಸಂಭವವಿದೆ. ಆದ್ದರಿಂದ ಗ್ರಾಪಂ ಇತ್ತ ಗಮನಹರಿಸಬೇಕಿದೆ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

” ಕಿಕ್ಕೇರಿ ಪಟ್ಟಣದ ಸ.ನಂ. ೯೩ರಲ್ಲಿ ಸುಮಾರು ಒಂದೂವರೆ ಎಕರೆಯಷ್ಟು ಕಸ  ವಿಲೇವಾರಿ ಘಟಕಕ್ಕೆ ಅನುಮೋದನೆಯಾಗಿದೆ. ಆದರೆ, ಅಕ್ಕಪಕ್ಕದ ರೈತರು ಕೆಲ ಭಾಗವನ್ನು ಅತಿಕ್ರಮಿಸಿಕೊಂಡಿರುವುದರಿಂದ ಈ ಸಮಸ್ಯೆ ಉಂಟಾಗಿದೆ. ಈ ಜಾಗದ ಸಮಸ್ಯೆ ಕುರಿತು ತಾಪಂ ಆಡಳಿತಕ್ಕೆ ಪತ್ರ ಬರೆಯಲಾಗಿದ್ದು, ಸದ್ಯದಲ್ಲೇ ಸರ್ವೆ ನಡೆಸಿ ಒತ್ತುವರಿಯನ್ನು ತೆರವುಗೊಳಿಸಿ, ಬಳಿಕ ಟ್ರೆಂಚ್ ತೆಗೆದು ಕಾಂಪೌಂಡ್ ನಿರ್ಮಿಸಿ ಸಮಸ್ಯೆ ಬಗೆಹರಿಸಲಾಗುವುದು.”

-ಚಲುವರಾಜು, ಪಿಡಿಒ, ಕಿಕ್ಕೇರಿ ಗ್ರಾಮ ಪಂಚಾಯಿತಿ.

ಮಹೇಶ್ ಕಿಕ್ಕೇರಿ

Tags:
error: Content is protected !!