Mysore
22
overcast clouds

Social Media

ಗುರುವಾರ, 01 ಜನವರಿ 2026
Light
Dark

ಎರಡು ಗ್ರಾಮಗಳ ಜನರಿಗೆ ನರಕಯಾತನೆ ತಂದಿತ್ತ ಹೈಟೆಕ್ ಕ್ರಷರ್

ಶ್ರೀಧರ್ ಆರ್ ಭಟ್

ವರುಣ: ಮೂರು ತಿಂಗಳ ಹಿಂದೆ ಆರಂಭಗೊಂಡ ಹೈಟೆಕ್ ಕ್ರಷರ್ ಎರಡು ಗ್ರಾಮಗಳ ಪಾಲಿಗೆ ಈಗಾಗಲೇ ಸಂಕಷ್ಟ ತಂದಿಕ್ಕಲಾರಂಭಿಸಿದೆ.

ನಂಜನಗೂಡು ತಾಲ್ಲೂಕಿನ ವರುಣ ಕ್ಷೇತ್ರ ವ್ಯಾಪ್ತಿಯ ತಾಂಡವಪುರ ಬಳಿ ಕೇರಳದ ವ್ಯಕ್ತಿಯೊಬ್ಬರು ಅತ್ಯಾಧುನಿಕ ಕ್ರಷರ್ ಆರಂಭಿಸಿದ್ದಾರೆ.

ಸರ್ಕಾರದ ನಿಯಮಾವಳಿಗಳನ್ನು ಅನುಸರಿಸದೇ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳದೇ ಆರಂಭಿಸಲಾದ ಈ ಕೈಗಾರಿಕೆಯಿಂದ ಈಗ ಮೇಲೇಳು ತ್ತಿರುವ ದೂಳು ಚಿಕ್ಕಯ್ಯನಛತ್ರ ಹಾಗೂ ತಾಂಡವ ಪುರ ಗ್ರಾಮಗಳನ್ನು ಆವರಿಸಿಕೊಳ್ಳ ತೊಡಗಿದ್ದು, ೬೦ ವರ್ಷ ಮೇಲ್ಪಟ್ಟ ನಾಗರಿಕರೂ ಈ ದೂಳಿನಿಂದಾಗಿ ಈಗಾಗಲೇ ಏದುಸಿರು ಬಿಡಲಾರಂಭಿಸಿದ್ದಾರೆ.  ಹಸುಗೂಸುಗಳು ಗ್ರಾಮದಲ್ಲಿ ಉಸಿರಾಟದ ತೊಂದರೆ ಯಿಂದ ನರಳುತ್ತಿದ್ದು, ಎರಡೂ ಗ್ರಾಮಗಳ ಜನತೆ ಆರೋಗ್ಯದ ಮೇಲೆ ಈ ಕ್ರಷರ್ ದುಷ್ಪರಿಣಾಮ ಬೀರಲಾರಂಭಿಸಿದೆ.

ಗುಂಡ್ಲುಪೇಟೆ ತಾಲ್ಲೂಕಿನ ಹಿರಿಕಾಟಿಯಿಂದ ತರಲಾಗುವ ಭಾರಿ ಗಾತ್ರದ ಬಂಡೆಕಲ್ಲುಗಳನ್ನು ಇಲ್ಲಿ ಪುಡಿ ಮಾಡಲಾಗುತ್ತಿದ್ದು, ಅದರಿಂದ ಏಳುವ ದೂಳಿನ ಕಣಗಳು ಎರಡೂ ಗ್ರಾಮಗಳನ್ನು ಆವರಿ ಸುತ್ತಿವೆ ಎನ್ನುವುದು ಗ್ರಾಮಸ್ಥರ ಆರೋಪ.

ದೂಳು ಕಡಿಮೆಯಾಗದಿದ್ದಲ್ಲಿ ನಾವೇ ಊರು ಖಾಲಿ ಮಾಡಬೇಕಾಗುತ್ತದೆ ಎಂಬ ಆತಂಕದಲ್ಲಿರುವ ತಾಂಡವಪುರ ಹಾಗೂ ಚಿಕ್ಕಯ್ಯನ ಛತ್ರದ ಗ್ರಾಮಸ್ಥರು ಈ ಕ್ಷೇತ್ರವನ್ನು ಪ್ರತಿನಿಽಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅಥವಾ ಕ್ಷೇತ್ರದ ಉಸ್ತುವಾರಿ ಡಾ. ಯತೀಂದ್ರ ಸಿದ್ದರಾಮಯ್ಯ ಮಧ್ಯಪ್ರವೇಶಿಸಿ ಇಲಾಖೆಯ ಅನುಮತಿ ಇಲ್ಲದೆ ದೂಳೆಬ್ಬಿ ಸುತ್ತಾ ಜನತೆಯ ಅನಾರೋಗ್ಯಕ್ಕೆ ಕಾರಣವಾಗಿರುವ ಈ ಹೈಟೆಕ್ ಕ್ರಷರ್ ಬಾಗಿಲಿಗೆ ಬೀಗ ಹಾಕಿ ನಮ್ಮ ಆರೋಗ್ಯ ಕಾಪಾಡಬೇಕೆಂದು ಮನವಿ ಮಾಡಿದ್ದಾರೆ.

” ನಾವಂತೂ ಅನುಮತಿ ನೀಡಿಲ್ಲ. ಜನರು ತಮಗೆ ದೂರು ನೀಡಿದ್ದು, ನಾವು ಸದ್ಯ ದಲ್ಲೇ ಈ ಕುರಿತು ವರದಿ ಸಿದ್ಧಪಡಿಸಿ ಮೇಲಾಧಿಕಾರಿಗಳಿಗೆ ಕಳಿಸುತ್ತೇವೆ.”

-ಪ್ರಭಾಕರ್, ಪಿಡಿಒ,ತಾಂಡವಪುರ

” ಕೈಗಾರಿಕೆ ಪ್ರಾರಂಭಿಸಲು ಪರಿಸರ ಇಲಾಖೆಯವರು ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಬೇಕು. ಗ್ರಾಪಂ ಒಪ್ಪಿಗೆಯನ್ನು ಪಡೆದುಕೊಳ್ಳಬೇಕು. ಅದ್ಯಾವುದೂ ಆಗಿಲ್ಲ. ಇದೊಂದು ಅನಧಿಕೃತ ಕೈಗಾರಿಕೆಯಾಗಿದ್ದು ಇದನ್ನು ಮುಚ್ಚಬೇಕು.”

-ಚಂದ್ರು, ಗ್ರಾಪಂ ಸದಸ್ಯ, ತಾಂಡವಪುರ

” ಈ ಕ್ರಷರ್‌ಗೆ ಅನುಮತಿ ನೀಡಿದವರು ಯಾರೆಂಬುದು ನಮಗೆ ತಿಳಿದಿಲ್ಲ. ಕ್ರಷರ್ನಿಂದಾಗುವ ಅನಾಹುತದ ಕುರಿತ ದೂರು ಬಂದ ಮೇಲೆಯೇ ಇದು ನನ್ನ ಗಮನಕ್ಕೆ ಬಂದಿದೆ. ತಕ್ಷಣ ಈ ಕುರಿತು ತಾಂಡವಪುರ ಗ್ರಾಪಂನಿಂದ ವರದಿ ಕೇಳಲಾಗಿದೆ.”

-ಜೆರಾಲ್ಡ್ ರಾಜೇಶ್, ತಾಪಂ ಇಒ

” ಕ್ರಷರ್ ಆರಂಭಿಸಲು ಕೆಐಎಡಿಬಿಯಿಂದ ಯಾವುದೇ ಪರವಾನಗಿ ಪಡೆದಿಲ್ಲ. ಈ ಬಗ್ಗೆ ಪರಿಶೀಲಿಸಲಾಗುವುದು.”

-ಅರುಣ, ಎಇಇ, ಕೆಐಎಡಿಬಿ

Tags:
error: Content is protected !!