Mysore
20
clear sky

Social Media

ಶುಕ್ರವಾರ, 13 ಫೆಬ್ರವರಿ 2026
Light
Dark

ಪ್ರವಾಹಕ್ಕೆ ಎದುರಾಗಿ ಈಸಬೇಕು ಹೆಣ್ಣು

ಆತ್ಮ ಸಂಗಾತಿಗಳಿಗೆ,

ಹೆಣ್ಣಿನ ಮೇಲೆ ನಡೆಯುತ್ತಿರುವ ಶೋಷಣೆ, ಆತ್ಯಾಚಾರ ಅಂತೇನಾದರೂ ಮಾತು ತೆಗೆದರೆ ಬೋರು ಹೊಡೆಯುವ ವಿಷಯವೆನಿಸುತ್ತದೆ. ‘ಹೀಗೇಕೆ ಆಯಿತೆಂದರೆ’ ಎಂದು ಆರಂಭವಾಗುವ ಪುರುಷ ಮನಸ್ಥಿತಿಯ ಕಾರಣಗಳು ಆಕೆಯ ಚಾರಿತ್ರ್ಯ ಮತ್ತು ತೊಡುವ ಬಟ್ಟೆಯ ಸುತ್ತಲ ಪರಿಧಿ ಬಿಟ್ಟು ಆಚೆ ಸರಿಯುವುದಿಲ್ಲ.

ನಾವೀಗ ಮುಂದುವರಿದಿದ್ದೇವೆ ಎಂದು ಹೇಳುತ್ತಿರುವಾಗಲೇ ಕಳೆದ ವರ್ಷ ಮಂಡ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆಯ ದಂಧೆ ಬೆಳಕಿಗೆ ಬಂದಿದ್ದು ನೆನಪಿದೆ ತಾನೇ! ಸೀತೆ, ದೌಪದಿ, ಮಾಧವಿ, ನಂಗೇಲಿಯಂತಹ ಪುರಾಣ ಕಾಲದ ಸ್ತ್ರೀ ಪಾತ್ರಗಳ ಆದಿಯಾಗಿ ಅತ್ಯಾಚಾರ, ಮಾನಭಂಗದ ಜಾಲದಲ್ಲಿ ನಲುಗಿದ ಹೆಣ್ಣುಮಕ್ಕಳಿಗೆ ಯಾವ ಭರವಸೆ ಇದೆ ಹೇಳಿ? ಆಲ್ಲೊಬ್ಬ ಹೇಳಿದ್ದ, ಅತ್ಯಾಚಾರದಿಂದ ತಪ್ಪಿಸಿಕೊಳ್ಳಲಾಗುತ್ತಿಲ್ಲವೆಂದರೆ ಅದನ್ನು ಅನುಭವಿಸಿ ಎಂದು. ‘ಹೆಣ್ಣಿನ ಬಾಳು ಬಾಳೆ ಎಲೆ ಇದ್ದಂತೆ’ ಎನ್ನುವ ಪದಪುಂಜ ವನ್ನು ಪದೇ ಪದೇ ಬಳಸಿ ಸವಕಲಾಗಿಸಿದ್ದರೂ, ಕರುಣಾ ಭಾವದಲ್ಲಿ ಈ ಪ್ರತಿಮೆಯನ್ನು ನೀಡಿ, ಹೆಣ್ಣಿನ ಸ್ವಭಾವವೇ ಮೃದು ಎಂಬ ರಬ್ಬರ್ ಸ್ಟಾಂಪ್ ಒತ್ತಿಯಾಗಿದೆ. ಗಮನಿಸಿ, ಹೆಣ್ಣು ಮಗುವಿದ್ದ ಮನೆಗೆ ಆಟಿಕೆಗಳನ್ನು ಕೊಡುವಾಗ ಬಾರ್ಬಿ ಡಾಲ್, ಟೆಡ್ಡಿಬೇರ್, ಇನ್ಯಾವುದೋ ಹುಡುಗಿಯ ಬೊಂಬೆಗಳನ್ನೇ ಖರೀದಿಸುತ್ತಾರೆ. ಈ ಹುಡುಗಿ ಆದರ ತಲೆ ಬಾಚಲಿ ಹೊಳಪು ಕಂಗಳಿಂದ, ಮಂದಹಾಸ ಬೀರುತ್ತಾ ಸುಮ್ಮನೆ ನೋಡುತ್ತಿರುತ್ತದೆ. ಸಿಟ್ಟಿನಲ್ಲಿ ಕೈ ಎತ್ತಲಿ, ಆಡುವ ಭರದಲ್ಲಿ ಕಾಲು ತುಂಡು ಮಾಡಿದರೂ ಬಾರ್ಬಿ ಗೊಂಬೆ ಮಾತ್ರ ನಗುತ್ತಿರುತ್ತದೆ.

ನಿಯಮಗಳನ್ನು ಹೆಣ್ಣಿಗೆ ಹೇರುವ ಮುನ್ನ ಕೊಂಚ ಯೋಚಿಸಬೇಕಿದೆ. ಕತ್ತಲು ಕವಿಯುವ ಮುನ್ನ ಮನೆಗೆ ಸೇರಬೇಕು. ಅದೇ ಗಂಡು ನಿಯಮದ ಬೇಲಿಯಾಚೆ, ಸರ್ವ ಸ್ವತಂತ್ರನಾಗಿ ಸಂಚರಿಸುತ್ತಿರುತ್ತಾನೆ. ಡಿಗ್ರಿ ಓದಿದ ಎಷ್ಟು ಹೆಣ್ಣು ಮಕ್ಕಳು ಮಾಸ್ಟರ್ಸ್ ಓದಬೇಕೆಂದು ಮುಂದುವರಿಯುತ್ತಾರೆ? ತನಗೆ ಸಿಗಬೇಕಾದ ಎಲ್ಲ ಸ್ಟಾಲರ್‌ ಶಿಪ್‌ಗಳನ್ನು ಪಡೆದು ಓದು ಮುಗಿಸುತ್ತೇನೆಂದು ಭರವಸೆ ನೀಡಿದ್ದರೂ ಹಳ್ಳಿ ಭಾಗದ ಬಹುತೇಕರು ತಮ್ಮ ಮನೆಯ ಅನನುಕೂಲತೆಯನ್ನು ಹೇಳಿ, ಓದು ಮುಂದುವರಿಸದಂತೆ ಭಾವನಾತ್ಮಕ ತಡೆಗೋಡೆಯನ್ನು ನಿರ್ಮಾಣ ಮಾಡಿಬಿಡುತ್ತಾರೆ. ತಾನು ಸಹನಾಮಯಿ, ಕ್ಷಮಯಾಧರಿತ್ರಿಯಂತಹ ಗುಣಗಳನ್ನು ಹೊಂದಿದವಳು ಎಂಬುದನ್ನು ಬಾಯಿಪಾಠದಂತೆ ಕಲಿತ ಹೆಣ್ಣು ತನ್ನ ಓದನ್ನು ನಿರಾಕರಿಸಿ, ‘ಒಳ್ಳೆಯತನ’ದಿಂದ ಒಂದೋ ಮದುವೆಯಾಗುತ್ತಾಳೆ, ಇಲ್ಲ ಯಾವುದಾದರೂ ಅಂಗಡಿಯಲ್ಲಿ ಕೆಲಸ ಹಿಡಿಯುತ್ತಾಳೆ. ಇದು ‘ಬದಲಾಗಿದೆ’ ಎಂಬ ಬೊಬ್ಬಿಡುವ ಸಮಾಜದ ಬದಲೇ ಆಗದ ಸ್ಥಿತಿ. ‘ಹೆಣ್ಣೆಂದರೆ?’ ಎಂಬ ಪ್ರಶ್ನೆಗೆ ತಾಳ್ಮೆ, ಸೌಮ್ಯ, ನಾಚಿಕೆ ಸೇರಿದಂತೆ ಈ ರೀತಿಯ ಅನೇಕ ಗುಣಗಳ ಮೂರ್ತರೂಪ ಎಂಬ ಸಿದ್ಧ ಉತ್ತರವಿದೆ. ಅದೇ ‘ಗಂಡೆಂದರೆ?’ ಎಂಬ ಪ್ರಶ್ನೆಗೆ ಮೀಸೆ ತಿರುವುತ್ತಾ, ತೊಡೆ ತಟ್ಟುತ್ತಾ, ಗಾಂಭೀರ್ಯ, ಧೈರ್ಯ ಹೆಣ್ಣಿಗೆ ಯಾವ ಯಾವ ಗುಣಗಳನ್ನು ಪಟ್ಟಿ ಮಾಡಲಾಗಿತ್ತೋ ಅದರ ವಿರುದ್ಧ ಪದಗಳನ್ನು ಸೇರಿಸಿಬಿಡುತ್ತೇವೆ. ಅದಕ್ಕಾಗಿಯೇ ಹೆಣ್ಣು ಈ ಗುಣಭೇದಗಳನ್ನು ಮೀರಿ, ಸ್ಥಾಪಿತ ಮೌಲ್ಯಗಳನ್ನು ಧಿಕ್ಕರಿಸಿದಳೆಂದರೆ ಪುರುಷ ಸಮಾಜ ಸುಮ್ಮನಾಗುತ್ತದೆಯೇ? ಹೆಣ್ಣನ್ನು ನಗ್ನಗೊಳಿಸಿ ಹೊಡೆಯಲಾಗುತ್ತದೆ, ಊರತುಂಬ ಮೆರವಣಿಗೆ ಮಾಡಲಾಗುತ್ತದೆ, ಶೀಲತ್ವದಿಂದ ಉಚ್ಚಾಟನೆ ಮಾಡಲಾಗುತ್ತದೆ, ಗಂಡಿಗೆ ಸರಿಸಮವಾಗಿ ನಿಂತುಬಿಟ್ಟರೆ ಅತ್ಯಾಚಾರ ಎಸಗಲಾಗುತ್ತದೆ, ಅವಳೇ ಆತ್ಮಹತ್ಯೆಗೆ ಶರಣಾದಳೆಂದು ಸುದ್ದಿ ಹಬ್ಬಿಸಿ, ಸಾಯಿಸಲಾಗುತ್ತದೆ.

ಗಂಡಿಗೆ ಮನೆಗೆಲಸ ಕಲಿಸಿ, ಬೆಳೆಸುವುದರೊಂದಿಗೆ ಹೆಣ್ಣಿನ ಕುರಿತ ಆತನ ನೋಟಕ್ರಮಗಳನ್ನು ಬದಲಿಸಲು ನಿರಂತರ ಒತ್ತಾಯಿಸಲಾಗುತ್ತಿದೆ. ಬಾಯಿ ತೆರೆಯಲು ಹೆದರುತ್ತಿದ್ದವರೆಲ್ಲ, ಕೊಂಚವಾದರೂ ದನಿಗೂಡಿಸುತ್ತಿದ್ದಾರೆ. ಆಗುತ್ತಿರುವ ಅನ್ಯಾಯವನ್ನು ಪ್ರಶ್ನಿಸಲು, ಪ್ರತಿಭಟಿಸಲು ಹೆಣ್ಣು ಮುಂದಾಗುತ್ತಿದ್ದಾಳೆ. ವ್ಯವಸ್ಥೆಯ ಪ್ರವಾಹದೊಳಗೆ ಕಸಕಡ್ಡಿಗಳಾಗಿ ತೂರಿಕೊಳ್ಳಬೇಕು ಎಂದು ಜಗತ್ತು ಬೋಧಿಸಿದಷ್ಟೂ, ಹೆಣ್ಣು ಪ್ರವಾಹಕ್ಕೆ ಇದಿರಾಗಿ ಸಾಗುತ್ತೇನೆಂದು ಜೀವಂತ ಮತ್ಯವಾಗುತ್ತಿದ್ದಾಳೆ.

‘ಸ್ರಾವ ನಿಂತರೂ ಹೆಣ್ಣು ಹೆಣ್ಣೆ ನಾವೇನೋ ಹೇಗೋ ಸವೆಸುವೆವು ಕಾಲ ಆದರೆ? ಆಪ್‌ಕಾ ಕ್ಯಾ ಹೋಗಾ ಜನಾಬೇ ಅಲೀ?’

ನಿಮ್ಮ ವಿಶ್ವಾಸಿ, ಕೀರ್ತಿ ಬೈಂದೂರು

Tags:
error: Content is protected !!