Mysore
21
overcast clouds

Social Media

ಬುಧವಾರ, 22 ಜುಲೈ 2026
Light
Dark

ಠಾಣೆ ಮೆಟ್ಟಿಲೇರಿದ ವೈದ್ಯರ ನಡುವಿನ ಗಲಾಟೆ

ಮಂಜು ಕೋಟೆ

ಕೋಟೆ: ಸಾರ್ವಜನಿಕ ಆಸ್ಪತ್ರೆ ಆಡಳಿತ ಅಧಿಕಾರಿ ಡಾ.ಪೂರ್ಣಿಮಾ ಮತ್ತು ಡಾ.ರೇಖಾ ಮಧ್ಯೆ ಮುಸುಕಿನ ಗುದ್ದಾಟ

ಎಚ್.ಡಿ.ಕೋಟೆ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಇಬ್ಬರು ವೈದ್ಯರ ನಡುವಿನ ಮುಸುಕಿನ ಗುದ್ದಾಟದಿಂದ ಗಲಾಟೆಯಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಈ ಕುರಿತು ಸಮಿತಿ ರಚಿಸಿ ತನಿಖೆ ನಡೆಸಲು ಆರೋಗ್ಯ ಇಲಾಖೆಯ ಅಧಿಕಾರಿಗಳು ಮುಂದಾಗಿದ್ದಾರೆ.

ಸಾರ್ವಜನಿಕ ಆಸ್ಪತ್ರೆಯ ಆಡಳಿತ ಅಧಿಕಾರಿ ಡಾ.ಪೂರ್ಣಿಮಾ ಮತ್ತು ಡಾ.ರೇಖಾ ಇವರಿಬ್ಬರ ಕಡೆಯವರ ನಡುವೆ ಆಸ್ಪತ್ರೆ ಆವರಣದಲ್ಲಿ ಗಲಾಟೆ ನಡೆದಿದ್ದು, ಪೊಲೀಸ್ ಠಾಣೆಯಲ್ಲಿ ಪರಸ್ಪರ ದೂರು ನೀಡಿದ್ದಾರೆ. ಸಾರ್ವಜನಿಕ ಆಸ್ಪತ್ರೆ ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯ ಮತ್ತು ಅವ್ಯವಸ್ಥೆಯ ಬಗ್ಗೆ ಮಾಹಿತಿ ತಿಳಿದು ಇತ್ತೀಚೆಗೆ ಶಾಸಕರಾದ ಅನಿಲ್ ಚಿಕ್ಕಮಾದುರವರು ಆಡಳಿತಾಧಿಕಾರಿ ಡಾ.ಪೂರ್ಣಿಮಾ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು.

ಆಸ್ಪತ್ರೆಯಲ್ಲಿ ಸಿಸೇರಿಯನ್ ಮಾಡಲು ಸಾವಿರಾರು ರೂ. ಪಡೆಯುತ್ತಿರುವ ವಿಚಾರವಾಗಿ ಹಾಗೂ ಸ್ಕ್ಯಾನಿಂಗ್ಯಂತ್ರ ಇದ್ದರೂ ವೈದ್ಯರನ್ನು ನೇಮಿಸಿಕೊಳ್ಳದೆ ಖಾಸಗಿಯವರಿಗೆ ಅನುಕೂಲ ಮಾಡಿಕೊಡುತ್ತಿರುವ ವಿಚಾರವಾಗಿ ಆಡಳಿತಾಧಿಕಾರಿ ಅವರಿಗೆ ಕೆಡಿಪಿ ಸಭೆಯಲ್ಲೂ, ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲೂ ಎಚ್ಚರಿಕೆ ನೀಡಿದ್ದರು.

ಈ ಘಟನೆ ನಡೆದ ನಂತರ ಆಡಳಿತಾಧಿಕಾರಿ ಡಾ.ಪೂರ್ಣಿಮಾ ಮತ್ತು ಡಾ.ರೇಖಾ ಅವರ ನಡುವೆ ಮುಸುಕಿನ ಗುದ್ದಾಟ ಪ್ರಾರಂಭವಾಗಿದೆ. ಕೆಲವೊಂದು ವಿಚಾರಕ್ಕಾಗಿ ರೇಖಾ ಅವರಿಗೆ ಪೂರ್ಣಿಮಾರವರು ನೋಟಿಸ್ ನೀಡಿದ್ದಾರೆ.

ಈ ನಡುವೆ ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳು ಪ್ರಸಾರವಾಗಿದ್ದು, ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಈ ವಿಚಾರ ಪ್ರಸ್ತಾಪವಾಗಿದೆ. ಕಾರಣಾಂತರಗಳಿಂದ ಶಾಸಕ ಅನಿಲ್ ಚಿಕ್ಕಮಾದು ಅವರ ಅನುಪಸ್ಥಿತಿಯಲ್ಲಿ ನಡೆದ ಈ ಸಭೆಯಲ್ಲಿ ಡಿಎಚ್‌ಒ ಮೋಹನ್ ಅವರು ಹಲವಾರು ವೈದ್ಯರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು ಎಚ್ಚರಿಕೆ ನೀಡಿದ್ದಾರೆ.

ಅಂದು ಸಂಜೆಯೇ ಡಾ.ಪೂರ್ಣಿಮಾ ಅವರ ಕಡೆಯವರು ಡಾ.ರೇಖಾ, ವಾಹನ ಚಾಲಕನಿಗೆ ‘ಈ ಹಿಂದೆ ಪೂರ್ಣಿಮಾ ಅವರು ಆಸ್ಪತ್ರೆಗೆ ಬರುವ ಮತ್ತು ಹೋಗುವ ವಿಡಿಯೋವನ್ನು ಏಕೆ ಮಾಡಿದ್ದೀರಿ ?’ಎಂದು ಜಗಳ ತೆಗೆದು ಮಾತಿನ ಚಕಮಕಿ ನಡೆಸಿದ್ದಾರೆ. ಇದು ಗಲಾಟೆಗೆ ತಿರುಗಿದೆ. ಈ ಸಂಬಂಧ ಎರಡೂ ಕಡೆಯವರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಸರ್ಕಲ್ ಇನ್‌ಸ್ಪೆಕ್ಟರ್ ಗಂಗಾಧರ್ ಅವರಿಗೆ ದೂರು ನೀಡಿದ್ದಾರೆ.

ಶಾಸಕ ಅನಿಲ್ ಚಿಕ್ಕಮಾದು ಮತ್ತು ಡಿಎಚ್‌ಒ ಮೋಹನ್ ಅವರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಸೇರಿದಂತೆ ತಾಲ್ಲೂಕಿನಲ್ಲಿ ಇರುವ ಆಸ್ಪತ್ರೆಗಳು ಮತ್ತು ವೈದ್ಯರು, ಔಷಧಿ ಸೌಲಭ್ಯಗಳ ಬಗ್ಗೆ ಹೆಚ್ಚು ಗಮನಹರಿಸಿ ಬಡರೋಗಿಗಳು, ರೈತರು, ಸಾರ್ವಜನಿಕರ ಹಿತ ಕಾಪಾಡಲು ಮುಂದಾಗಬೇಕಿದೆ.

” ಸಾರ್ವಜನಿಕ ಆಸ್ಪತ್ರೆ ಆಡಳಿತ ಅಧಿಕಾರಿ ಡಾ.ಪೂರ್ಣಿಮಾ ಮತ್ತು ಡಾ.ರೇಖಾ ಕಡೆಯವರ ನಡುವೆ ನಡೆದಿರುವ ಗಲಾಟೆ ಮತ್ತು ಪೊಲೀಸ್ ಠಾಣೆಯ ಮೆಟ್ಟಿಲೇರಿರುವ ವಿಚಾರವನ್ನು ಡಿಎಚ್‌ಒ ಅವರಿಗೆ ತಿಳಿಸಿದ್ದೇನೆ. ಅವರು ಸಮಿತಿ ರಚಿಸಿ ತನಿಖೆ ನಡೆಸಲು ಮುಂದಾಗಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ.”

ರವಿಕುಮಾರ್, ತಾಲ್ಲೂಕು ಆರೋಗ್ಯ ಅಧಿಕಾರಿ, ಎಚ್.ಡಿ.ಕೋಟೆ 

 

 

Tags:
error: Content is protected !!