ಮೈಸೂರು : ರಾಜಶೇಖರ ಕೋಟಿ ಅವರ ಬರಹ ಯಾವ ರೀತಿ ಇತ್ತೋ ಅದೇ ರೀತಿ ಅವರ ಬದುಕು ಕೂಡ ಇತ್ತು. ಅವರ ಬರಹ–ಬದುಕು ವಿಭಿನ್ನವಾಗಿ ಇರಲಿಲ್ಲ. ಅದಕ್ಕಾಗಿಯೇ ಅವರಿಗೆ ಜನರ ಮನದಾಳವನ್ನು ಬರೆಯಲು ಸಾಧ್ಯವಾಯಿತು ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಕೋಟಿ ಅವರನ್ನು ಬಣ್ಣಿಸಿದರು.
‘ಆಂದೋಲನ’ ದಿನಪತ್ರಿಕೆಯ ೫೦ ವರ್ಷದ ಸಾರ್ಥಕ ಪಯಣ ಉದ್ಘಾಟಿಸಿ ಮಾತನಾಡಿದ ಅವರು, ಮುಖ್ಯವಾಹಿನಿ ಪತ್ರಿಕೆಗಳಲ್ಲಿ ಬರುವಂತಹ ಸುದ್ದಿಗಳು ‘ಆಂದೋಲನ’ ಪತ್ರಿಕೆಯಲ್ಲೂ ಪ್ರಕಟವಾಗುತ್ತಿವೆ. ಆದರೆ ಸುದ್ದಿಯ ವಿಶ್ಲೇಷಣೆ ವಿಭಿನ್ನ ಮತ್ತು ಸತ್ವಯುತವಾಗಿರುತ್ತದೆ. ಸಕಾರಾತ್ಮಕ ಚಿಂತನೆಯಿಂದ ಪತ್ರಿಕೆಯನ್ನು ಕೋಟಿ ಅವರು ಕಟ್ಟಿದ್ದಾರೆ. ಇದೇ ಪರಂಪರೆಯನ್ನು ಅವರ ಮಕ್ಕಳು ಮುಂದುವರಿಸಿಕೊಂಡು ಹೋಗಲಿ ಎಂದರು. ರೈತರ ಸ್ಥಿತಿ: ವಸ್ತುನಿಷ್ಠವಾಗಿ ನೋಡಿ: ರೈತರ ಮಕ್ಕಳು ಖಾಯಂ ಆಗಿ ರೈತರಾಗೇ ಉಳಿಯಲು ಆಗುವುದಿಲ್ಲ. ಭೂಮಿ ಅಷ್ಟೇ ಇದೆ. ಜನರು ಹೆಚ್ಚಾದಂತೆ ಸಣ್ಣ–ಸಣ್ಣ ತುಂಡುಗಳಾಗಿವೆ. ೨೦ ಎಕರೆ ಭೂಮಿ ಈಗ ಎಂಟತ್ತು ಭಾಗಗಳಾಗಿ ಹೋಗಿದೆ. ಈ ಭಾಗದಲ್ಲಿ ರೈತರು ಏನು ಮಾಡಲು ಸಾಧ್ಯ. ಅವರು ಬೇರೆ–ಬೇರೆ ವೃತ್ತಿಗೆ ಹೋಗಬೇಕು. ಇದರಿಂದ ಅವರು ಆರ್ಥಿಕವಾಗಿ ಬೆಳವಣಿಗೆಯಾಗುತ್ತಾರೆ. ಆದರೆ ಈ ವಿಚಾರದಲ್ಲಿ ಪೂರ್ವಗ್ರಹವಾಗಿ ಟೀಕಿಸುವುದನ್ನು ಬಿಟ್ಟು ಸಕಾರಾತ್ಮಕ ಭಾವನೆಯಿಂದ ವಸ್ತುನಿಷ್ಠವಾಗಿ ನೋಡಬೇಕು. ಹೊಸತನ್ನು ಟೀಕೆ ಮಾಡುವುದಲ್ಲ. ಮೊದಲು ಖಾಸಗೀಕರಣವನ್ನು ಟೀಕಿಸಲಾಯಿತು. ಬಳಿಕ ಅದನ್ನು ಒಪ್ಪಿಕೊಂಡರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೃಷಿ ಕಾಯ್ದೆಗಳನ್ನು ಕುರಿತು ಸಮರ್ಥನೆ ನೀಡಿದರು.
ಅಗ್ನಿಪಥ್ ಸಮರ್ಥನೆ: ರಾಷ್ಟ್ರದ ಸೈನ್ಯಕ್ಕೆ ಗುತ್ತಿಗೆ ಆಧಾರದಲ್ಲಿ ನೇಮಕಾತಿ ನಡೆಸುವ ಯೋಜನೆಯಾದ ‘ಅಗ್ನಿಪಥ್’ ಅನ್ನು ಸಮರ್ಥಿಸಿಕೊಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ೧೭ರಿಂದ ೨೪ ವಯಸ್ಸಿನ ಯುವಕರಿಗೆ ಉತ್ತಮ ತರಬೇತಿಯನ್ನು ನೀಡಿ ಅವರಿಗೆ ಉದ್ಯೋಗ ನೀಡುವುದಲ್ಲದೇ ಮುಂದಿನ ದಿನದಲ್ಲಿ ಅವರಿಗೆ ಬೇರೆ ಕಡೆಗಳಲ್ಲಿ ಉದ್ಯೋಗ ನೀಡಲಾಗುತ್ತದೆ. ಇಂತಹ ಯೋಜನೆಗಳ ಬಗ್ಗೆ ಸಕಾರಾತ್ಮಕವಾಗಿ ಆಲೋಚನೆ ಮಾಡಬೇಕು. ಜಗತ್ತಿನ ಅನೇಕ ದೇಶಗಳಲ್ಲಿ ಈ ವ್ಯವಸ್ಥೆ ಇದೆ. ಈ ಯೋಜನೆಯ ಅವಕಾಶವನ್ನು ಬಳಕೆ ಮಾಡಿಕೊಂಡು ರಾಜ್ಯ–ರಾಷ್ಟ್ರ ಮುಂದೆ ಹೋಗಬೇಕು ಎಂದರು.
ಬದಲಾವಣೆಯು ನಿರಂತರವಾಗಿ ಇರುತ್ತದೆ. ಇದನ್ನು ಬಳಕೆ ಮಾಡಿಕೊಂಡು ಉನ್ನತ ಮಟ್ಟದಲ್ಲಿ ಬೆಳೆಯಬೇಕು. ಈ ಉತ್ಕೃಷ್ಟತಾ ಅವಕಾಶಗಳನ್ನು ಬಳಸಿಕೊಂಡು ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು