Mysore
32
few clouds

Social Media

ಶುಕ್ರವಾರ, 17 ಏಪ್ರಿಲ 2026
Light
Dark

ತಿ.ನರಸೀಪುರ ಸಮಗ್ರ ಅಭಿವೃದ್ಧಿಗೆ ಶಕ್ತಿಮೀರಿ ಶ್ರಮ: ಅಶ್ವಿನ್ ಕುಮಾರ್‌

ಮೈಸೂರು: ಕ್ಷೇತ್ರವನ್ನು ಪ್ರವಾಸೋದ್ಯಮ ಕೇಂದ್ರವನ್ನಾಗಿ ಮಾಡುವುದು ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಶಕ್ತಿಮೀರಿ ಶ್ರಮಿಸಲಾಗುವುದು ಎಂದು ಶಾಸಕ ಎಂ.ಅಶ್ವಿನ್‌ಕುಮಾರ್ ಭರವಸೆ ನೀಡಿದರು.

ಮೈಸೂರು ಜಿಲ್ಲೆಯ ತಿ.ನರಸೀಪುರ ಪಟ್ಟಣದ ವಿದ್ಯೋದಯ ಕಾಲೇಜಿನ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ‘ಆಂದೋಲನ ದಿನಪತ್ರಿಕೆ ೫೦ ಸಾರ್ಥಕ ಪಯಣ’ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಲಕಾಡು,ಸೋಮನಾಥಪುರ, ಗುಂಜಾನರಸಿಂಹಸ್ವಾಮಿ ದೇವಸ್ಥಾನ ಸೇರಿದಂತೆ ಹಲವಾರು ಪ್ರೇಕ್ಷಣೀಯ ಸ್ಥಳಗಳು ಇವೆ. ಮುಂದಿನ ದಿನಗಳಲ್ಲಿ ಪ್ರಮುಖ ಸ್ಥಳಗಳನ್ನುಪ್ರವಾಸಿ ತಾಣವನ್ನಾಗಿ ಮಾಡಿ ಪ್ರವಾಸಿಗರು ಹೆಚ್ಚು ಬರುವಂತೆ ಮಾಡಲಾಗುವುದು ಎಂದು ಹೇಳಿದರು. ಪಂಚಲಿಂಗದರ್ಶನ ಹೊರತುಪಡಿಸಿದರೆ ಉಳಿದ ಸಮಯದಲ್ಲಿ ಹೆಚ್ಚಿನ ಪ್ರವಾಸಿಗರು ಬರುವುದಿಲ್ಲ. ಗುಂಜಾನರಸಿಂಹಸ್ವಾಮಿ ದೇವಸ್ಥಾನವನ್ನು ಐತಿಹಾಸಿಕ ಸ್ಥಳವನ್ನಾಗಿ ಮಾಡಲು ರೂಪುರೇಷೆ ತಯಾರಿಸಲಾಗಿದೆ. ಗಂಗರ ಕಾಲದಿಂದಲೂ ಪ್ರಸಿದ್ಧಿ ಪಡೆದಿರುವ ತಲಕಾಡನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಗಮನಹರಿಸಲಾಗಿದೆ ಎಂದು ಹೇಳಿದರು.

ರಾಜಶೇಖರಕೋಟಿ ಅವರು ಪ್ರಖರ ಪತ್ರಕರ್ತರು. ಆಂದೋಲನದಲ್ಲಿ ಪ್ರಶ್ನೆ ಹಾಕಿ ಸುದ್ದಿ ಮಾಡಿದನ್ನು ನೋಡಿಲ್ಲ. ಪಕ್ಷಾತೀತ, ಜಾತ್ಯತೀತ ಮತ್ತು ಸಮಾಜಮುಖಿಯಾಗಿ ಸಾಗುವುದಲ್ಲದೆ ಅದೇ ರೀತಿ ಪತ್ರಿಕೆಯನ್ನು ನಡೆಸಿಕೊಂಡು ಬರಲಾಗಿದೆ ಎಂದರು. ರಾಜಶೇಖರಕೋಟಿ ಅವರು ನನಗೆ ಜಾಸ್ತಿ ಒಡನಾಟ ಇಲ್ಲದಿದ್ದರೂ ಆಂದೋಲನ ಬಗ್ಗೆ ನನಗೆ ಗೊತ್ತಿದೆ. ಯಾವುದೇ ವಿಚಾರದಲ್ಲಿ ತಾರತಮ್ಯವನ್ನು ಮಾಡದೆ ಎಲ್ಲರಿಗೂ ಅವಕಾಶವನ್ನು ಮಾಡಿಕೊಟ್ಟಿರುವುದು ವಿಶೇಷವಾಗಿದೆ ಎಂದರು.

ಆಂದೋಲನ ಪತ್ರಿಕೆಯು ವಸ್ತುನಿಷ್ಠವಾಗಿ ಹೊರ ಬರುತ್ತಿದೆ. ಯಾವ ಸಂದರ್ಭದಲ್ಲೂ ಪತ್ರಿಕಾಧರ್ಮವನ್ನು ಬಿಟ್ಟುಕೊಟ್ಟಿಲ್ಲ. ರಾಜಶೇಖರಕೋಟಿ ಅವರ ನಂತರದಲ್ಲಿ ಪತ್ರಿಕೆಯ ಹೊಣೆ ಹೊತ್ತಿರುವ ಮಕ್ಕಳು ಅದೇ ದಾರಿಯಲ್ಲಿ ನಡೆಸಿಕೊಂಡು ಬರುತ್ತಿದ್ದಾರೆ. ಈ ಪತ್ರಿಕೆಯು ನೂರು ವರ್ಷ ಪೂರೈಸಬೇಕು. ಸಮಾಜಕ್ಕೆ ಮಾರ್ಗದರ್ಶನ ನೀಡುವಂತೆ ನಿರಂತರವಾಗಿ ಹೊರ ಬರಲಿ ಎಂದು ಹಾರೈಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!