-ಶ್ರೀಧರ್ ಆರ್. ಭಟ್
ಒಂದು ಪತ್ರಿಕೆ ಎಂದರೆ ಒಬ್ಬ ವ್ಯಕ್ತಿಯಿಂದ ಆಗುವುದಿಲ್ಲ . ಸುದ್ದಿ ಸಂಗ್ರಾಹಕರಿಂದ ಹಿಡಿದು ಅದು ಓದುಗರ ಕೈ ತಲುಪುವವರಿಗೆ ಈ ರಂಗದಲ್ಲಿ ಹಲವಾರು ಜನರ ಪರಿಶ್ರಮ ಅಡಕವಾಗಿರುತ್ತದೆ. ಕೆಲವರ ಶ್ರಮ ಬಹಿರಂಗವಾದರೆ ಮಿಕ್ಕವರ ಶ್ರಮ ಎಲೆಮರೆ ಕಾಯಿಯಂತಾಗಿ ಹೊರಜಗತ್ತಿಗೆ ಕಾಣುವುದೇ ಇಲ್ಲ. ಪತ್ರಿಕಾ ರಂಗದಲ್ಲಿ ಪ್ರತಿ ದಿನ ಚಳಿ, ಮಳೆ, ಗಾಳಿ ಬಿಸಿಲುಗಳ ಪರಿವೆಯೇ ಇಲ್ಲದೆ ದುಡಿಯುತ್ತಿರುವ ಮಹತ್ವದ ವಿಭಾಗ ವಿತರಣೆಯ ವಿಭಾಗ. ಮುದ್ರಿತವಾಗಿ ಹೊರಬಂದ ಪತ್ರಿಕೆಯನ್ನು ಸಮಯಕ್ಕೆ ಸರಿಯಾಗಿ ಓದುಗರ ಕೈಗಿಡಲು ಮನೆ ಮನೆಗೆ ಪತ್ರಿಕೆ ತಲುಪಿಸುವ ಜವಾಬ್ದಾರಿ ಇವರದ್ದು. ಸೈಕಲ್ನಲ್ಲಿ ಸಾಗಿ ಪತ್ರಿಕೆ ಹುಂಚುವವರು ವಿರಳವಾಗಿ ವಾಹನಗಳಲ್ಲಿ ಪತ್ರಿಕೆ ತಲುಪಿಸುವ ವ್ಯವಸ್ಥೆ ಕಾಣುತ್ತಿರುವ ಈ ಕಾಲದಲ್ಲಿ ಇಲ್ಲೊಬ್ಬರು ಬರೋಬ್ಬರಿ ದಿನಕ್ಕೆ ೫೦ ಕಿ.ಮೀ. ಸುತ್ತಿ ೧೭ ಗ್ರಾಮಗಳಿಗೆ ಪತ್ರಿಕೆಯನ್ನು ತಲುಪಿಸುತ್ತಿದ್ದಾರೆ. ಇಂತಹ ಕಾಯಕ ಯೋಗಿಯನ್ನು ಕಾಣಲು ನೀವು ಮೈಸೂರು ತಾಲ್ಲೂಕಿನ ದೇವಯ್ಯನ ಹುಂಡಿಗೆ ಬರಬೇಕು.
ಈ ಗ್ರಾಮದ ಶಿವನಾಗು ಪತ್ರಿಕೆಯನ್ನು ಓದುಗರ ಕೈಗೆ ತಲುಪಿಸಲೇಂದೇ ಪ್ರತಿದಿನ ೫೦ ಕಿ.ಮೀ. ದೂರ ಸೈಕಲ್ ತುಳಿಯುತ್ತಿದ್ದಾರೆ. ಇವರ ಈ ಕಾಯಕ ಇಂದು ನಿನ್ನೆಯದಲ್ಲ . ಬರೋಬ್ಬರಿ ೨೪ ವರ್ಷಗಳಿಂದಲೂ ನಿರಂತರವಾಗಿ ಸಾಗಿದೆ.
ಬೆಳಗಿನ ಜಾವ ೩ ಗಂಟೆಗೆ ದೇವೇಗೌಡನ ಹುಂಡಿಯಿಂದ ಹೊರಬೀಳುವ ಶಿವನಾಗು, ಮೈಸೂರು ತಾಲ್ಲೂಕಿನ ಮೇಗಾಳಪುರಕ್ಕೆ ಬಂದು ವಾಹನಗಳಲ್ಲಿ ಬರುವ ಪತ್ರಿಕೆಗಳನ್ನು ಪಡೆದು ಸೈಕಲ್ ನಲ್ಲಿ ಹೇರಿಕೊಂಡು ವಿತರಣೆಯ ಕಾಯಕ ಆರಂಭಿಸುತ್ತಾರೆ. ಮೇಗಳಾಪುರ, ಮುದ್ದೇಗೌಡನ ಹುಂಡಿ, ಹೊಸಳ್ಳಿ, ಕುಪ್ಪೇಗಾಲ, ಅಂಚೆ ಹುಂಡಿ, ಸಿದ್ದರಾಮಯ್ಯನ ಹುಂಡಿ, ಕೆಂಪಯ್ಯನ ಹುಂಡಿ, ಶ್ರೀನಿವಾಸಪುರ, ರಂಗನಾಥ ಪುರ, ನಂದಿಗುಂದಪುರ, ನಂದಿಗುಂದ, ತುಂಬಸೋಗೆ, ಮರಡಿ ಹುಂಡಿ, ಹೊಸಕೋಟೆ, ತಾಯೂರು ಗ್ರಾಮಗಳಲ್ಲಿ ಪತ್ರಿಕೆ ವಿತರಿಸಿ ತಿರುಗಿ ದೇವೇಗೌಡನ ಹುಂಡಿಗೆ ಹಿಂತಿರುಗುವಾಗ ಬೆಳಿಗ್ಗೆ ೧೧ ಗಂಟೆಯಾಗುತ್ತದೆ.
ಪ್ರತಿ ದಿನವೂ ಪತ್ರಿಕೆಯ ವಿತರಣೆಗಾಗಿಯೇ ೮ ತಾಸುಗಳ ಕಾಲ ೫೦ ಕಿ.ಮೀ. ಸೈಕಲ್ ತುಳಿಯುವ ಇಂತಹವರ ಶ್ರಮ ಜೀವನಕ್ಕೆ ಬೆಲೆ ಕಟ್ಟಲಾಗದು. ಇಂಥವರೇ ಪತ್ರಿಕೆಗಳ ಆಧಾರಸ್ಥಂಭ. ಆದರೆ ಪತ್ರಿಕೆಗೆ ಸಂಬಂಧಿಸಿದ ಪ್ರಶಸ್ತಿಗಳ ವಿಚಾರಕ್ಕೆ ಬಂದರೆ ವಿತರಣೆ ವಿಭಾಗ ಗಣನೆಗೆ ಬರುವುದಿಲ್ಲ. ಹೀಗಾಗಿ ಶಿವನಾಗು ಅಂಥವರ ಶ್ರಮಕ್ಕೆ ಇಂದಿಗೂ ಮಾನ್ಯತೆ ಸಿಕ್ಕಿಲ್ಲ.