Mysore
30
scattered clouds

Social Media

ಗುರುವಾರ, 27 ಮಾರ್ಚ್ 2025
Light
Dark

ಆಂದೋಲನ ನಡಿಗೆಯೊಂದಿಗೆ ನಾನು..

-ಬಿ.ಎಸ್.ಹರೀಶ್ ಬಂದಗದ್ದೆ

‘ಆಂದೋಲನ’ ದಿನಪತ್ರಿಕೆಯಲ್ಲಿ ೨ ದಶಕಗಳಷ್ಟು ಸುದೀರ್ಘ ಅವಧಿಗೆ ಕೆಲಸ ಮಾಡಿರುವುದು ನನಗೆ ಈಗ ನೆನಪು. ರಾಜಶೇಖರ ಕೋಟಿಯವರೊಡನೆ ಪತ್ರಕರ್ತನಾಗಿ ಕೆಲಸ ಮಾಡಿರುವುದು ನನ್ನ ಬದುಕಿನ ಪ್ರಮುಖ ಭಾಗಗಳಲ್ಲೊಂದು.‘ಆಂದೋಲನ’ದಲ್ಲಿ ಕೆಲಸ ಮಾಡುತ್ತಿದ್ದಾಗ ನನಗೆ ದಕ್ಕಿದ ಕೆಲ ಅಂಶಗಳನ್ನು ಹಂಚಿಕೊಳ್ಳುವುದು ಈ ಲೇಖನದ ಉದ್ದೇಶ.

೧೯೮೦ರ ಅಂತ್ಯದಲ್ಲಿ ‘ಆಂದೋಲನ’ ದಿನಪತ್ರಿಕೆ ಒಂಟಿಕೊಪ್ಪಲಿನಲ್ಲಿದ್ದ ಅನುಪಮ ಮುದ್ರಣಾಲಯಕ್ಕೆ ಸ್ಥಳಾಂತರಗೊಂಡು, ಎರಡು ಪುಟಗಳಲ್ಲಿ ಮುದ್ರಣ ಆರಂಭಿಸಿತು. ಪತ್ರಿಕೆ ಹಳ್ಳಿಗಳಿಗೂ ತಲುಪುತ್ತ ಜನಮನ್ನಣೆ ಗಳಿಸತೊಡಗಿತ್ತು. ಆದರೆ, ಆರ್ಥಿಕ ಬಿಕ್ಕಟ್ಟೇ ದೊಡ್ಡ ಸಮಸ್ಯೆಯಾಗಿ ಕಾಡತೊಡಗಿತ್ತು. ಹೀಗಿರುವಾಗ ಒಮ್ಮೆ ಕೋಟಿಯವರು ಸಾಲ ತಂದು ಕೆಲ ದಿನ ನಿರಾಳರಾದರು. ಆದರೂ ಅಂದಿನ ಪತ್ರಿಕೆಯ ಬೆಲೆಗೆ ಹೋಲಿಸಿದರೆ ಮುದ್ರಣ ವೆಚ್ಚ ಸರಿತೂಗಿಸುವುದು ಕಷ್ಟವಾಗಿತ್ತು.

ಮಾನಸಗಂಗೋತ್ರಿಯಲ್ಲಿ ಪ್ರಾಧ್ಯಾಪಕರಾಗಿದ್ದ ಪ್ರೊ.ಎ.ರಾಮಲಿಂಗಂ ಅವರು ಪತ್ರಿಕೆಗೆ ಬೆನ್ನೆಲುಬಾಗಿ ನಿಂತರು. ಇದರಿಂದಾಗಿ ಆರೇಳು ತಿಂಗಳ ಕಾಲ ನಿರಂತರವಾಗಿ ಪತ್ರಿಕೆ ಅಡೆತಡೆಯಿಲ್ಲದೆ ಮುದ್ರಣವಾಗುವ ಜತೆಗೆ ತನ್ನ ಪ್ರಾಬಲ್ಯವನ್ನೂ ಹೆಚ್ಚಿಸಿಕೊಂಡಿತು. ಕೋಟಿಯವರಿಗೆ ತಮ್ಮ ಮುಂದಿನ ಯೋಜನೆ ಬಗ್ಗೆ ಚಿಂತಿಸಲು, ಯೋಜಿಸಲು ಒಳ್ಳೆಯ ಅವಕಾಶವನ್ನೂ ನೀಡಿತು.

ಹೀಗಾಗಿಯೇ ಅವರು ಅನುಪಮ ಮುದ್ರಣಾಲಯದಿಂದ ಹೊರಬಂದು ತಮ್ಮದೇ ಮುದ್ರಣ ವಿಭಾಗ ತೆರೆಯುವ ಕನಸು ಕಂಡರು. ೧೯೮೩ರಲ್ಲಿ ಕಾಲ ಬಿ.ಬಿ.ಗಾರ್ಡನ್ ರಸ್ತೆಯಲ್ಲಿ ಮನನೊಂದನ್ನು ಬಾಡಿಗೆ ಪಡೆದು, ಅಲ್ಲಿನ ಕಾರು ಶೆಡ್‌ನಲ್ಲಿ ಮುದ್ರಣ ವಿಭಾಗ, ಮನೆಯಲ್ಲಿ ವಾಸ. ಪತ್ರಿಕೆಯ ಸಂಪಾದಕೀಯ ಹಾಗೂ ಮೊಳೆ ಜೋಡಿಸುವ ವಿಭಾಗ ಮಾತ್ರ ಇದ್ದವು, ಉಳಿದಂತೆ ಮುದ್ರಣ ಕಾರ್ಯ ಸಮೀಪದಲ್ಲಿದ್ದ ಹಿರಿಯ ಪತ್ರಕರ್ತ ಎಸ್. ಪಟ್ಟಾಭಿರಾಮನ್ ಅವರ ಮಾಲೀಕತ್ವದ ನವಧ್ವನಿ ಪತ್ರಿಕೆ ಮುದ್ರಣಾಲಯದಲ್ಲಿ ನಡೆಯತೊಡಗಿತು. ಅಲ್ಲಿ ಪತ್ರಿಕೆಯ ಸಿಬ್ಬಂದಿ ಎಂದರೆ ಒಬ್ಬರು ರಾಜಶೇಖರ ಕೋಟಿ ಮತ್ತು ನಾನು ಅಷ್ಟೆ.

೧೯೮೭ರಲ್ಲಿ ರಾಮಾನುಜ ರಸ್ತೆಯಲ್ಲಿ ಖಾಲಿ ಕಟ್ಟಡವೊಂದನ್ನು ಖರೀದಿಸಿದ ರಾಜಶೇಖರ ಕೋಟಿಯವರು, ಪತ್ರಿಕೆಗೆ ಸ್ವಂತ ಕಟ್ಟಡ ಸಿಕ್ಕಿತೆಂದು ನೆಮ್ಮದಿಯಾದರು. ಇದೇ ವೇಳೆ ಹಾರಂಗಿ ಹಾಗೂ ಕಬಿನಿ ನಾಲೆಗಳಿಗಾಗಿ ಭೂ ಸ್ವಾಧೀನ ಪ್ರಕ್ರಿಯೆ ಜೋರಾಗಿತ್ತು. ಆದರೆ ಸರಕಾರಿ ಭೂ ಸ್ವಾಧೀನ ಜಾಹೀರಾತುಗಳು ರಾಜ್ಯಮಟ್ಟದ ಪತ್ರಿಕೆಗಳಿಗೆ ಸೀಮಿತವಾಗಿದ್ದವು. ಆಗ ಕಂದಾಯ ಸಚಿವರಾಗಿದ್ದ ಎಸ್.ಆರ್.ಬೊಮ್ಮಾಯಿ ಅವರಿಗೆ ಮನವರಿಕೆ ಮಾಡಿಕೊಟ್ಟು ಜಿಲ್ಲಾ ಮಟ್ಟದ ಪತ್ರಿಕೆಗಳಿಗೂ ಈ ಜಾಹೀರಾತು ನೀಡುವಂತೆ ಆದೇಶ ಮಾಡಿಸುವಲ್ಲಿ ವೇದಾಂತ ಹೆಮ್ಮಿಗೆ, ರಾಮಕೃಷ್ಣ, ಚಂದ್ರು ಸಫಲರಾದರು. ಅದು ಪತ್ರಿಕೆಯ ಬೆಳವಣಿಗೆಯಲ್ಲಿ ಮೈಲಿಗಲ್ಲಾಯಿತು. ಪತ್ರಿಕೆಯ ಪ್ರಸಾರ ಸಂಖ್ಯೆಯೂ ಗಣನೀಯವಾಗಿ ಹೆಚ್ಚಿತು.

ಆಂದೋಲನದ ಕೊಡುಗೆ

ಕಳೆದ ವರ್ಷ ನಮ್ಮನ್ನು ಅಗಲಿದ ಖ್ಯಾತ ಛಾಯಾಗ್ರಾಹಕ ನೇತ್ರ ರಾಜು ಹಾಗೂ ಈಗ ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿರುವ ಸಾಗ್ಗೆರೆ ರಾಮಸ್ವಾಮಿ ಅವರನ್ನೂ ಸೇರಿ ಹಲವರನ್ನು ‘ಆಂದೋಲನ’ ಪತ್ರಿಕಾ ರಂಗಕ್ಕೆ ಪರಿಚಯಿಸಿತು ಎಂಬುದು ಉಲ್ಲೇಖಾರ್ಹ. ತಮ್ಮ ವಿಶಿಷ್ಟ ಚಿತ್ರಗಳ ಮೂಲಕ ‘ಆಂದೋಲನ’ದ ಮೌಲ್ಯ ಹೆಚ್ಚಿಸಿದವರು ನೇತ್ರರಾಜು.

ಕೋಟಿಯವರು ಮೊದಲು ಕಾರುಕೊಂಡದ್ದು…

ಕೊಳ್ಳೇಗಾಲದ ಜನಾರ್ದನ ಹಾಲ್‌ನವರು ಪತ್ರಿಕೆಗೆ ಪ್ರತಿದಿನ ಇಯರ್ ಪ್ಯಾನಲ್ ಜಾಹೀರಾತು ನೀಡುತ್ತಿದ್ದರು. ಒಮ್ಮೆ ಇದರ ಬಿಲ್ ೫೦ ಸಾವಿರಕ್ಕೂ ಅಧಿಕವಾದಾಗ, ಆ ಮೊತ್ತಕ್ಕೆ ಜನಾರ್ದನ ಹಾಲ್‌ನವರ ಅಂಬಾಸಿಡರ್ ಕಾರೊಂದನ್ನು ಕೋಟಿಯವರು ಖರೀದಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ