Mysore
25
overcast clouds

Social Media

ಬುಧವಾರ, 12 ಆಗಸ್ಟ್ 2026
Light
Dark

ಶಾಂತಿ ಕದಡುವ ಆರೋಪಹೊತ್ತ ಸಂಘಟನೆಗಳನ್ನು ತ್ವರಿತವಾಗಿ ನಿಷೇಧಿಸಿದ ಕೇಂದ್ರ ಸರ್ಕಾರ 

ದೇಶದ ಏಕತೆ, ಸಮಗ್ರತೆ ಮತ್ತು ಸುರಕ್ಷತೆಗೆ ಹೊರಗಿನಂದಷ್ಟೇ ಅಲ್ಲ ಒಳಗಿನಿಂದ ಬರುವ ಸಂಭವನೀಯ ಅಪಾಯಗಳನ್ನೂ ಆರಂಭದಲ್ಲೇ ಚಿವುಟಬೇಕು. ಹೊರಗಿನ ಶತ್ರುಗಳಿಗಿಂತ ಒಳಗಿನ ಶತ್ರುಗಳು ಹೆಚ್ಚು ಅಪಾಯಕಾರಿ. ದೇಶದ ಬಾಹ್ಯ ಸುರಕ್ಷತೆ ಎಷ್ಟು ಮುಖ್ಯವೋ ಆಂತರಿಕ ಸುರಕ್ಷತೆಯೂ ಅಷ್ಟೇ ಮುಖ್ಯ. ಆಂತರಿಕ ಸುರಕ್ಷತೆ ಇದ್ದಾಗ ಮಾತ್ರವೇ ದೇಶ ಸುಭಿಕ್ಷವಾಗಿರಲು ಸಾಧ್ಯ. ದೇಶದ ಆಂತರಿಕ ಸುರಕ್ಷತೆಗೆ ಧಕ್ಕೆ ತರುವ ಯಾವುದೇ ವ್ಯಕ್ತಿಯಾಗಲೀ, ಸಂಘಟನೆಯಾಗಲೀ ಕ್ಷಮೆಗೆ ಅನರ್ಹರು. ಕೇಂದ್ರ ಸರ್ಕಾರ ದೇಶದ ಆಂತರಿಕ ಸುರಕ್ಷತೆಗೆ ಧಕ್ಕೆ ತರುವ ಆರೋಪದ ಮೇಲೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆ ಮತ್ತು ಅದರ ಸಹ ಸಂಘಟನೆಗಳನ್ನು ನಿಷೇಧಿಸಿದೆ. ಈ ಸಂಘಟನೆಗಳ ಮೇಲಿನ ನಿಷೇಧ ಐದು ವರ್ಷಗಳವರೆಗೆ ಇರುತ್ತದೆ. ಮುಂಬರುವ ದಿನಗಳಲ್ಲಿ ಈ ಸಂಘಟನೆಗಳು ದೇಶದ ಶಾಂತಿ ಕದಡುವ, ಸುರಕ್ಷತೆಗೆ ಧಕ್ಕೆ ತರುವ ಯಾವ ಕೆಲಸವನ್ನೂ ಮಾಡಲಿಲ್ಲ ಅಂತಹ ಉದ್ದೇಶ ಈ ಸಂಘಟನೆಗಳಿಗೆ ಇಲ್ಲ ಎಂದು ಗೃಹ ಸಚಿವಾಲಯಕ್ಕೆ ಮನವರಿಕೆಯಾದರೆ, ಐದು ವರ್ಷಕ್ಕೂ ಮುನ್ನವೇ ನಿಷೇಧವನ್ನು ತೆರವುಗೊಳಿಸಬಹುದು, ಇಲ್ಲವೇ ಮತ್ತಷ್ಟು ಅವಧಿಗೆ ನಿಷೇಧವನ್ನು ಮುಂದುವರಿ ಸಲೂಬಹುದು.

ಕರ್ನಾಟಕ ರಾಜ್ಯದ ಬೆಂಗಳೂರು, ಮೈಸೂರು, ಚಾಮರಾಜನಗರ, ಹುಬ್ಬಳ್ಳಿ, ಶಿವಮೊಗ್ಗ, ಬೆಳಗಾವಿ, ಅಲ್ಲದೇ ದೆಹಲಿ, ಉತ್ತರ ಪ್ರದೇಶ, ಗುಜರಾತ್, ಮಹಾರಾಷ್ಟ್ರ, ಅಸ್ಸಾಂ ಸೇರಿದಂತೆ ಏಳು ರಾಜ್ಯಗಳ ವಿವಿಧ ನಗರಗಳಲ್ಲಿ ರಾಷ್ಟ್ರೀಯ ತನಿಖಾ ದಳವು ಆಯಾ ರಾಜ್ಯಗಳ ಪೊಲೀಸರೊಂದಿಗೆ ಏಕಕಾಲಕ್ಕೆ ದಾಳಿ ನಡೆಸಿದೆ. ಕರ್ನಾಟಕದ 80 ಜನರು ಸೇರಿದಂತೆ ಏಳು ರಾಜ್ಯಗಳ 230 ಜನರನ್ನು ಬಂಧಿಸಿದೆ. ಸಾರ್ವಜನಿಕ ಶಾಂತಿಗೆ ಭಂಗ, ಕಾನೂನು ಬಾಹಿರ ಚಟುವಟಿಕೆ, ಆಯ್ದ ನಾಯಕರ ಮೇಲೆ ದಾಳಿ ಮಾಡುವ ಸಂಚು ನಡೆಸಿದ ಆರೋಪ ಎಲ್ಲಾ ಬಂಧಿತರ ಮೇಲಿದೆ. ಬಂಧಿತ ಆರೋಪಿಗಳ ವಿರುದ್ಧ ಆಯಾ ಠಾಣೆಗಳಲ್ಲಿ ಸಿಆರ್‌ಪಿಸಿ 107ರ (ಶಾಂತಿಭಂಗ ಉಂಟುಮಾಡುವ ಅನುಮಾನ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕೇಂದ್ರ ಗೃಹ ಸಚಿವಾಲಯದ ಮಾಹಿತಿ ಪ್ರಕಾರ, ಬಂಧಿತರನ್ನು ಏಕಾಏಕಿ ಬಂಧಿಸಲಾಗಿಲ್ಲ. ಹಲವು ತಿಂಗಳುಗಳ ಕಾಲ ಮಾಹಿತಿ, ಸಾಕ್ಷ್ಯ ಸಂಗ್ರಹಿಸಿ, ದೇಶದ ಶಾಂತಿ ಕದಡುವ ಅಪಾಯ ಇದೆ ಎಂಬುದು ಮನವರಿಕೆಯಾದ ಮೇಲಷ್ಟೇ ವ್ಯವಸ್ಥಿತವಾಗಿ ದಾಳಿ ಮಾಡಿ ಬಂಧಿಸಲಾಗಿದೆ. ದಾಳಿಯ ವೇಳೆ ಸಿಕ್ಕ ಸಾಕ್ಷ್ಯಗಳನ್ನಾಧರಿಸಿ ಬುಧವಾರ ಪಿಎಫ್‌ಐ ಮತ್ತು ಅದರ ಅಂಗ ಸಂಸ್ಥೆಗಳಾದ ರಿಹಾಬ್ ಇಂಡಿಯಾ ಫೌಂಡೇಶನ್ (ಆರ್‌ಐಎಫ್), ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್‌ಐ), ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ (ಎಐಐಸಿ), ಎನ್‌ಸಿಎಚ್‌ಆರ್‌ಒ, ನ್ಯಾಷನಲ್ ವುಮೆನ್ಸ್ ಫ್ರಂಟ್ (ಎನ್‌ಡಬ್ಲ್ಯೂಎಫ್), ಜೂನಿಯರ್ ಫ್ರಂಟ್, ಎಂಪವರ್ ಇಂಡಿಯಾ ಫೌಂಡೇಶನ್ ಸಂಘಟನೆಗಳನ್ನು ನಿಷೇಧಿಸಿದೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ವ್ಯಕ್ತಿಗಳು ಸಂಘಟನೆ ಕಟ್ಟಿಕೊಂಡು ಕಾರ್ಯನಿರ್ವಹಿಸಬಹುದು. ಅದಕ್ಕೆ ಕಾನೂನಿನ ರಕ್ಷಣೆ ಇದೆ. ಆದರೆ, ದೇಶದ ಐಕ್ಯತೆ, ಸಮಗ್ರತೆ ಮತ್ತು ಸುರಕ್ಷತೆಗೆ ಧಕ್ಕೆ ತರುವ ಯಾವುದೇ ಚಟುವಟಿಕೆಯನ್ನು ಪ್ರಜಾಪ್ರಭುತ್ವ ಮತ್ತು ಮೂಲಭೂತ ಹಕ್ಕುಗಳ ರಕ್ಷಾಕವಚದೊಂದಿಗೆ ನಡೆಸುವುದು ಅಕ್ಷಮ್ಯ. ಅಂತಹ ಸಂಘಟನೆಗಳು ದೇಶದ ಶಾಂತಿ ಮತ್ತು ಸುವ್ಯವಸ್ಥೆಗೆ ಯಾವತ್ತೂ ಅಪಾಯಕಾರಿ. ಅಂತಹ ಸಂಘಟನೆಗಳನ್ನು ನಿಷೇಧಿಸಲೇಬೇಕು.

ದೇಶದಲ್ಲಿ ಇತ್ತೀಚೆಗೆ ನಡೆದ ಹಿಜಾಬ್, ನಮಾಜ್ ಮತ್ತಿತರ ಅಲ್ಪಸಂಖ್ಯಾತರ ಕೇಂದ್ರಿತ ಘಟನೆಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ತಾನು ಈಗ ಕೈಗೊಂಡಿರುವ ಕ್ರಮವು ನಿಷ್ಪಕ್ಷಪಾತವಾಗಿ ಮತ್ತು ಯಾವುದೇ ದುರುದ್ದೇಶ ಮತ್ತು ಪೂರ್ವಗ್ರಹಪೀಡಿತವಿಲ್ಲದೇ ಕೈಗೊಂಡಿರುವುದನ್ನು ಜನತೆಗೆ ಮನವರಿಕೆ ಮಾಡಿಕೊಡಬೇಕು. ಆ ನಿಟ್ಟಿನಲ್ಲಿ ಆರೋಪಿಗಳ ವಿರುದ್ಧ ಹೂಡಲಾಗಿರುವ ಮೊಕದ್ದಮೆಗಳು, ದೇಶದ ಸುರಕ್ಷತೆಗೆ ಧಕ್ಕೆತರುವ ಅಂಶಗಳ ಹೊರತುಪಡಿಸಿ ವಶಪಡಿಸಿಕೊಂಡಿರುವ ಸಾಕ್ಷ್ಯಗಳನ್ನು ಬಹಿರಂಗಪಡಿಸಬೇಕು. ಕೇಂದ್ರ ಸರ್ಕಾರ ತಾನು ಅಲ್ಪ ಸಂಖ್ಯಾತರ ವಿರೋಧಿ ಎಂಬ ಆರೋಪ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ತನ್ನ ಮೇಲಿನ ಆರೋಪವನ್ನು ತೊಡೆದುಕೊಳ್ಳಲು ಇದು ಅಗತ್ಯ ಕೂಡ.

ಐಎಸ್‌ಐ, ಅಲ್‌ಖೈದಾದಂತಹ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದರೆ, ಅಂತಹ ವ್ಯಕ್ತಿ ಅಥವಾ ಸಂಘಟನೆಗಳಿಗೆ ಅತ್ಯಂತ ಕಠಿಣ ಶಿಕ್ಷೆಯಾಗಬೇಕು. ಯುವ ಸಮುದಾಯಕ್ಕೆ ಉದ್ಯೋಗ, ವಿಲಾಸಿ ಜೀವನದ ಆಮಿಷ ಒಡ್ಡಿ ಇಂತಹ ಭಯೋತ್ಪಾದನೆ ಗುಂಪುಗಳಿಗೆ ಸೆಳೆಯುವ ಪ್ರಯತ್ನಗಳು ವ್ಯಾಪಕವಾಗಿ ನಡೆಯುತ್ತಿವೆ. ಅದಕ್ಕೆ ಬೇಕಾದಷ್ಟು ಸಾಕ್ಷ್ಯಗಳೂ ಇವೆ. ಇತ್ತೀಚೆಗೆ ಪಿಎಫ್‌ಐ ಮತ್ತಿತರ ಸಂಘಟನೆಗಳ ಮೇಲೆ ಎನ್‌ಐಎ ನಡೆಸಿದ ದಾಳಿ, ಬಂಧನದ ಬೆನ್ನಲ್ಲೆ ಈ ಸಂಘಟನೆಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ್ದು ತ್ವರಿತ ನಿರ್ಧಾರವೂ ಹೌದು.

ಕೇಂದ್ರ ಸರ್ಕಾರ ಕೈಗೊಳ್ಳುವ ಎಲ್ಲ ನಿರ್ಧಾರಗಳನ್ನೂ ಅನುಮಾನಿಸಬೇಕಿಲ್ಲ. ಅನುಮಾನಿಸಬಾರದೂ ಕೂಡ. ದೇಶದ ಜನರಿಗೆ ಆದ್ಯತೆ ಮೇಲೆ ಬೇಕಿರುವುದು ಶಾಂತಿ ಮತ್ತು ಸುವ್ಯವಸ್ಥೆ. ಅದನ್ನು ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೈಗೊಳ್ಳುವ ಯಾವ ನಿರ್ಧಾರಗಳೂ ಶ್ಲಾಘನೀಯವೇ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!