Mysore
29
overcast clouds

Social Media

ಮಂಗಳವಾರ, 30 ಜೂನ್ 2026
Light
Dark

ವಿಶ್ವ ಶಾಂತಿಯೇ ಆರೋಗ್ಯದ ಮೂಲ

ಸೆ.೨೧ ವಿಶ್ವ ಶಾಂತಿ ದಿನ; ವರ್ಣಬೇಧ ನೀತಿ ಕೊನೆಗಾಣಿಸಲು ಪಣ

ಡಾ.ಬಿ.ಎನ್‌.ರವೀಶ್‌ 

ಸೆ.೨೧ನ್ನು ವಿಶ್ವದಾದ್ಯಂತ ಶಾಂತಿ ದಿನವನ್ನಾಗಿ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಒಂದು ಲೆಕ್ಕಕ್ಕೆ ಶಾಂತಿ ಲೋಕ ಕಲ್ಯಾಣದಿಂದ ಹಿಡಿದು ವ್ಯಕ್ತಿಯ ಮನಸ್ಥಿತಿ, ದೇಹಾರೋಗ್ಯವನ್ನೂ ಕಾಪಾಡಿಕೊಳ್ಳಲು ಇರುವ ಸರಳ ಮಾರ್ಗ. ಈ ವರ್ಷ ‘ವರ್ಣಬೇಧವನ್ನು ಕೊನೆಗಾಣಿಸಿ ಶಾಂತಿ ಸ್ಥಾಪಿಸಿ’ ಎನ್ನುವ ಥೀಮ್ ಇಟ್ಟುಕೊಂಡು ಶಾಂತಿ ದಿನವನ್ನು ಆಚರಣೆ ಮಾಡಿದ್ದು, ನಾವು ಶಾಂತಿಯ ಮಹತ್ವವನ್ನು ತಿಳಿದುಕೊಂಡರೆ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ಮನೋವೈದ್ಯರಾದ ಡಾ. ರವೀಶ್ ಅವರು ವಿವರವಾಗಿ ತಿಳಿಸಿದ್ದಾರೆ.

೨೧ನೇ ಶತಮಾನವನ್ನು ಸರಳವಾಗಿ ಸ್ಪರ್ಧಾತ್ಮಕ ಯುಗ ಎನ್ನಬಹುದು. ಒಂದು ಲೆಕ್ಕಕ್ಕೆ ಸ್ಪರ್ಧೆ ಒಳ್ಳೆಯದ್ದೇ. ಆದರೆ ಅದು ಅತಿರೇಕಕ್ಕೆ ಹೋದಾಗ ಆಗುವ ಅಪಾಯ ಹೆಚ್ಚು. ಇಂದು ಸ್ಪರ್ಧೆ ಮನೆಯಿಂದಲೇ ಪ್ರಾರಂಭವಾಗುತ್ತಿದೆ. ಇಲ್ಲಿ ನಾ ಮುಂದು ತಾ ಮುಂದು ಎನ್ನುವ ಬೆಳವಣಿಗೆ ಹೆಚ್ಚುತ್ತಿದೆ. ಇದರಿಂದ ಜೀವನ ಶೈಲಿಯಲ್ಲಿ ಬದಲಾವಣೆ ಆಗುತ್ತಿದೆ. ಬದಲಾದ ಜೀವನಶೈಲಿಯಿಂದಾಗಿ ನಾನ್ ಕಮ್ನೂನಿಕಬಲ್ ಡಿಸೀಸ್‌ಗಳು (ಜೀವನಶೈಲಿ ಆಧಾರಿತ ಕಾಯಿಲೆಗಳು) ಹೆಚ್ಚಾಗುತ್ತಿವೆ.

ಬರುವ ರೋಗ, ತಂದುಕೊಳ್ಳುವ ರೋಗ

ಕೋವಿಡ್, ವೈರಲ್ ಫೀವರ್, ಕ್ಯಾನ್ಸರ್ ಸೇರಿ ಹಲವಾರು ಸಮಸ್ಯೆಗಳು ಕೆಲವರಿಗೆ ಯಾರನ್ನೂ ಕೇಳದೇ ಬರುತ್ತವೆ. ಕೆಲವು ಹೋಗುತ್ತವೆ, ಮತ್ತೆ ಕೆಲವು ಸಾವಿಗೂ ಕಾರಣವಾಗುತ್ತವೆ. ಇವುಗಳು ನಮ್ಮ ಕೈ ಮೀರಿದ್ದು. ಆದರೆ ಇಂದು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ನಾನ್ ಕಮ್ನೂನಿಕಬಲ್ ಡಿಸೀಸ್‌ಗಳು ನಾವಾಗಿಯೇ ತಂದುಕೊಳ್ಳುತ್ತಿರುವ ಸಮಸ್ಯೆಗಳು. ಬಿಪಿ, ಷುಗರ್, ಖಿನ್ನತೆ, ಹೃದಯ ಸಂಬಂಧಿ ಸಮಸ್ಯೆಗಳು, ಮಾನಸಿಕ ಸಮಸ್ಯೆ, ಗ್ಯಾಸ್ಟ್ರಿಕ್ ಸೇರಿ ಹಲವಾರು ಸಮಸ್ಯೆಗಳು ನಾವಾಗಿಯೇ ತಂದುಕೊಳ್ಳುವಂತಹದ್ದು. ನಮ್ಮ ಬದಲಾದ ಜೀವನ ಶೈಲಿಯಿಂದ, ಅಧಿಕ ಒತ್ತಡದಿಂದ, ಅತಿಯಾದ ಆಸೆಯಿಂದ ಬಂದದ್ದು.

ಶಾಂತಿಯೆಂಬ ಚಿಕಿತ್ಸಕ ಅಸೂಯೆ, ಮತ್ಸರ, ಅತಿ ಆಸೆ, ಆಕ್ರಮಣ, ಅಸಮಾಧಾನಗಳೆಲ್ಲವೂ ಒಳಗೊಳಗೇ ವ್ಯವಸ್ಥೆ, ವ್ಯಕ್ತಿಯ ಆರೋಗ್ಯಕ್ಕೆ ಕೊಡಲಿ ಪೆಟ್ಟು ಕೊಡುತ್ತಲೇ ಇರುತ್ತವೆ. ಮೊದಲು ಇವುಗಳನ್ನು ಜಯಿಸಿದರೆ ವ್ಯಕ್ತಿ, ಕುಟುಂಬ, ವ್ಯವಸ್ಥೆಯ ಆರೋಗ್ಯ ಸುಧಾರಿಸುವುದು ಖಚಿತ. ಇದಕ್ಕಾಗಿಯೇ ಇಂದು ವಿಶ್ವವೇ ಶಾಂತಿ ಮಂತ್ರ ಜಪಿಸುತ್ತಿದೆ. ಶಾಂತಿ ಎಂದರೆ ನಿಶ್ಯಬ್ಧದ ಸ್ಥಿತಿಯಲ್ಲ. ಅದಕ್ಕೂ ಮೇಲಾದುದು. ಅದೊಂದು ಧ್ಯಾನಸ್ಥ ಸ್ಥಿತಿ. ಇಂದು ಈ ಧ್ಯಾನಸ್ಥ ಸ್ಥಿತಿಯಿಂದಲೇ ಹಲವಾರು ಕಾಯಿಲೆಗಳಿಂದ ಮುಕ್ತಿ ಪಡೆದುಕೊಳ್ಳಬಹುದು.

ಇಂದು ಮನುಷ್ಯ ಅಂತರಂಗ ಮತ್ತು ಬಹಿರಂಗ ಎರಡೂ ಅಶಾಂತಿಯಿಂದ ಕೂಡಿವೆ. ಇದು ಶಾಂತವಾಗಬೇಕು. ಇದು ಸಾಧ್ಯವಾಗಬೇಕು ಎಂದರೆ ದೈಹಿಕ, ಮಾನಸಿಕ, ಆಧ್ಯಾತ್ಮಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಇದಕ್ಕೆ ಶಾಂತ ಸ್ಥಿತಿ, ಧ್ಯಾನಸ್ಥ ಸ್ಥಿತಿಯೇ ಹೆಬ್ಬಾಗಿಲು.

ನಮ್ಮ ಹಿಂದೆಯೂ ಸಾಕಷ್ಟು ನಾಗರಿಕತೆಗಳು ಬಂದು ಹೋಗಿವೆ. ಅತ್ಯುನ್ನತವಾದ ಜೀವನವನ್ನು ನಮ್ಮ ಪೂರ್ವಿಕರು ನಡೆಸಿದ್ದಾರೆ. ಒಂದಿಲ್ಲೊಂದು ಹಂತದಲ್ಲಿ ಅವುಗಳು ಅವಸಾನ ಆಗಲು ಅಶಾಂತಿಯೇ ಕಾರಣ ಎನ್ನಬಹುದು. ಇದಕ್ಕಾಗಿಯೇ ಪ್ರತಿ ಹಂತದಲ್ಲಿಯೂ ಶಾಂತಿ ಮಹತ್ವನ್ನು ಪಡೆದುಕೊಂಡಿದೆ. ಮಹಾತ್ಮಾ ಗಾಂಧಿ ಅವರು ಶಾಂತಿ ಮಾರ್ಗದಲ್ಲಿಯೇ ದೇಶ ಕಟ್ಟಿದ್ದು, ಅದರಿಂದಲೇ ಅವರು ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿರುವುದು.

ಶಾಂತಿ ಎಂದರೆ ಕೇವಲ ನಿಶ್ಯಬ್ಧ ಅಲ್ಲ. ನಮ್ಮೊಳಗಿನ ಪ್ರಚೋದನೆಗಳನ್ನು ನಿಗ್ರಹಿಸಿ, ಅವುಗಳ ಎಬ್ಬಿಸುವ ಅಲೆಗಳನ್ನು ತಿಳಿಗೊಳಿಸುತ್ತಾ ಸಾಗುವುದು. ಇದನ್ನೇ ಆಧ್ಯಾತ್ಮ ಪ್ರಾರಂಭದಲ್ಲಿಯೇ ಬೋಧಿಸುವುದು. ನಾವು ತಾಂತ್ರಿಕವಾಗಿ ಇಷ್ಟೆಲ್ಲಾ ಮುಂದೆ ಸಾಗಿ ಬಂದಿದ್ದರೂ ಮನಸ್ಸಿನ ನೆಮ್ಮದಿ ಸ್ಥಾಪಿಸುವುದಕ್ಕೆ, ಶಾಂತ ಸ್ಥಿತಿಗೆ ತಲುಪುವುದಕ್ಕೆ ಏನು ಮಾಡಬೇಕು ಎಂಬುದನ್ನು ತಿಳಿಯಲು ಆಗಿಲ್ಲ. ಇದೆಲ್ಲವನ್ನೂ ತಿಳಿಸಲು ವಿಶ್ವಶಾಂತಿ ದಿನದ ಅಗತ್ಯವಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!