ಬೃಹತ್ ಗಾತ್ರದಲ್ಲಿ ಸೊಗಸಾಗಿ ಮೂಡಿಬಂದ ೫೦ ರ ಹರೆಯದ ‘ಆಂದೋಲನ’
ಐವತ್ತೇನೇ ವರ್ಷದ ಸಂಭ್ರಮಾಚರಣೆ ಕಂಡ ಆಂದೋಲನ ಅಂದು ೧೧೪ ಪುಟಗಳ ಬೃಹತ್ ಗಾತ್ರದಲ್ಲಿ ತುಂಬಾ ಅಚ್ಚು ಕಟ್ಟಾಗಿ ಸೊಗಸಾಗಿ ಮೂಡಿ ಬಂದಿದೆ. ನಿರ್ಮಲಾ ಕೋಟಿಯವರ ‘ ಕೋಟಿ ನೆನಪುಗಳ ಸಿಹಿ ಪಾಕ’ ಕೆ ವೆಂಕಟರಾಜು ಅವರ ‘ತಿಟ್ಹತ್ತಿ ತಿರುಗಿ ನೋಡಿದಾಗ’ ‘ಆಂದೋಲನದ ಹೆಜ್ಜೆ ಗುರುತು’ ‘ಜನಾಂದೋಲನಗಳೇ ಆಂದೋಲನವಾದಾಗ’ ‘ ತಾಯಿ ಮಮತೆಯ ಕೋಟಿ ಹೃದಯ’ ‘ ಕಾಡುಗಳ್ಳ ವೀರಪ್ಪನ್ ಅಟ್ಟಹಾಸಕ್ಕೆ ನಡುಗಿದ ಏಳುಮಲೆ’ ಡಾ.ಶಿವಾನಂದ ಗವಿಮಠರವರ ‘ ಮೆಸೂರು ಪ್ರಾಂತ್ಯದಲ್ಲಿ ಆಯುರ್ವೇದ ಹೆಜ್ಜೆ ಗುರುತು’ ಬಿ.ಆರ್. ಜೋಯಪ್ಪರವರ ‘ಭಾವುಕ ಕ್ಷಣಗಳಿಗೆ ಸಾಕ್ಷಿಯಾದ ದಿನಗಳು’ ಮಹಾರಾಣಿ ತ್ರಿಷಿಕಾ ಕುಮಾರಿಯವರ ‘ಬದುಕು ಬದಲಾಗಿಲ್ಲ ಜವಾಬ್ದಾರಿ ಬಂದಿದೆಯಷ್ಟೆ ’ ಲೇಖನಗಳು ಮನಸೊರೆಗೊಂಡವು.
ಹೆಚ್.ಎಸ್ . ಉಮೇಶ್, ಈಚನೂರು ಕುಮಾರ್, ಎ.ಎನ್ ಮಣಿಕಂಠ, ಆರ್.ಎಲ್.ಮಂಜುನಾಥ, ಸಿ.ಮರಿ ಜೋಸೆಫ್, ಜಿ. ಹೇಮಂತ್ ಕುಮಾರ್, ಬಿ.ಟಿ. ಮೋಹನ್ ಕುಮಾರ್, ಪ್ರಸಾದ್ ಲಕ್ಕೂರು, ಹೆಚ್.ಟಿ. ಅನಿಲ್, ಕೆ.ಬಿ. ರಮೇಶ್ ನಾಯಕ, ಆರ್.ವೀರೆಂದ್ರ ಪ್ರಸಾದ್, ಸುರೇಶ್ .ಆರ್. ಕಂದೇಗಾಲ, ಹಾರೋಹಳ್ಳಿ ರವೀಂದ್ರ, ಉತ್ತನ ಹಳ್ಳಿ ಮಹದೇವ, ಹೆಚ್.ಎಸ್ .ದಿನೇಶ್ ಕುಮಾರ್, ಬಾ.ನಾ.ಸುಬ್ರಹ್ಮಣ್ಯ , ಪ. ಮಲ್ಲೇಶ್, ಜನಾರ್ಧನ್ ಜನ್ನಿ, ಸುಮನಾ, ಬೆಟ್ಟಯ್ಯ ಕೋಟೆ, ರತಿರಾವ್, ನವೀನ್ ಡಿಸೋಜ. ಡಾ.ಕೆ.ರಾಘವೇಂದ್ರ ಪೈ, ಪರಮಶಿವ ನಡುಬೆಟ್ಟ, ಸ.ರಾ.ಸುದರ್ಶನ, ಸುಜಾತ ರೋಹಿತ್ , ಬಿ.ಎಸ್. ಹರೀಶ್ ಬಂದಗದ್ದೆ, ಆಲಕಾ ಕಟ್ಟೆಮನೆ, ಭವ್ಯ ತಿಮ್ಮಯ್ಯ, ಶೆಲಜಾ ವೇಣುಗೋಪಾಲ್, ವಿ.ಶ್ರೀನಿವಾಸ್ ಪ್ರಸಾದ್, ಅಂಶಿ ಪ್ರಸನ್ನ ಕುಮಾರ್, ಶ್ರೀಧರ್ .ಆರ್.ಭಟ್- ಇವರೆಲ್ಲರ ಲೇಖನಗಳು ನಮ್ಮನ್ನು ಆಸಕ್ತಿಯಿಂದ ಓದುವಂತೆ ಮಾಡಿದವು. ನಮಗೆ ಇಂದಿಗೂ ಗೊತ್ತಾಗದಿರುವ ಹಲವು ವಿಷಯಗಳು ಈ ವಿಶೇಷ ಸಂಚಿಕೆಯಿಂದ ಗೊತ್ತಾಯಿತು ಎಂದು ತಿಳಿಸಲು ಹರ್ಷಿಸುತ್ತೇನೆ. ಪ್ರತಿಯೊಬ್ಬರು ಈ ವಿಶೇಷ ಸಂಚಿಕೆಯನ್ನು ಜೋಪಾನವಾಗಿ ಇಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ವಿಶೇಷ ಸಂಚಿಕೆಯನ್ನು ಹೊರತರಲು ಹಗಲಿರುಳು ಶ್ರಮಿಸಿದ ‘ಆಂದೋಲನ’ದ ಎಲ್ಲಾ ಸಿಬ್ಬಂದಿ ವರ್ಗದವರಿಗೆ ಲಕ್ಷಾಂತರ ಓದುಗರ ಪರವಾಗಿ ಧನ್ಯವಾದಗಳು!
-ಅಹಲ್ಯ ಸಿ.ನಾ. ಚಂದ್ರ, ಜನತಾನಗರ, ಮೆಸೂರು.
ಶ್ರೀಲಂಕಾ ಸ್ಥಿತಿ ನೆರೆಹೊರೆಗೆ ಎಚ್ಚರಿಕೆಯ ಗಂಟೆ
ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ದ್ವೀಪ ರಾಷ್ಟ್ರ ಶ್ರೀಲಂಕಾ ಹೊತ್ತಿ ಉರಿಯುವ ಸ್ಥಿತಿಗೆ ತಲುಪಿದೆ. ಬೊಕ್ಕಸ ಬರಿದಾಗಿದೆ, ದೇಶದ ಆಡಳಿತದ ಚುಕ್ಕಾಣಿ ಹಿಡಿದ ಸ್ವತ: ಅಧ್ಯಕ್ಷ ಗೋಟಬಾಯಿ ರಾಜಪಕ್ಷ ಅವರು ಪರಾರಿಯಾಗಿ ಅಜ್ಞಾತ ಸ್ಥಳದಲ್ಲಿ ಅವಿತುಕೊಳ್ಳುವಂತ ಸ್ಥಿತಿ ನಿಜಕ್ಕೂ ಆ ದೇಶದ ಮಟ್ಟಿಗೆ ಆತಂಕಕಾರಿ. ಇತ್ತ ಆಹಾರ ,ಇಂಧನ ,ಅಗತ್ಯ ವಸ್ತುಗಳಿಗೆ ಪರಿತಪಿಸುತ್ತಿರುವ ಪ್ರಜೆಗಳು ಬೀದಿಗಿಳಿದು ನಾಯಕರು ಮನೆಗಳಿಗೆ ಬೆಂಕಿ ಹಚ್ಚುವ ಕೃತ್ಯಕ್ಕೆ ಇಳಿದಿದ್ದಾರೆ ಇದನ್ನು ಗಮನಿಸಿದರೆ ಅಲ್ಲಿಯ ಜನರ ಪರಿಸ್ಥಿತಿ ಹೇಗಿರಬಹುದು ಎಂಬುದು ಊಹಿಸಲು ಅಸಾಧ್ಯ. ಇದು ನಮ್ಮ ದೇಶಕ್ಕೂ ಎಚ್ಚರಿಕೆಯ ಗಂಟೆಯಾಗಿದೆ. ಮಿತಿಮೀರಿದ ಭ್ರಷ್ಟಾಚಾರ, ನಮ್ಮನ್ನು ಆಳುವವರು ,ಅಧಿಕಾರಿ ಶಾಹಿಯ ಸರ್ಕಾರದ ಹಣವನ್ನು ಸಾಧ್ಯವಾದಷ್ಟು ಮಟ್ಟಿಗೆ ಕೊಳ್ಳೆ ಹೊಡೆಯಬೇಕೆಂಬ ಮನ:ಸ್ಥಿತಿಗೆ ತಲುಪಿರುವುದು ಆರ್ಥಿಕ ಶಿಸ್ತು ಮರೆತು ಕೇವಲ ಪಕ್ಷಗಳ ಜನಪ್ರಿಯತೆಗಾಗಿ ಬೊಕ್ಕಸ ಹಣವನ್ನು ಅನುತ್ಪಾದಕ ಯೋಜನೆಗಳಿಗೆ ತೊಡಗಿಸುವುದು, ದುಡಿದು ತಿನ್ನುವ ಮನೋಭಾವ ಕಡಿಮೆಯಾಗಿ ಸರ್ಕಾರದ ಸೌಲಭ್ಯಕ್ಕೆ ಕೈಯೊಡ್ಡಿ ನಿಲ್ಲುವ ಸ್ಥಿತಿಗೆ ಜನ ತಲುಪಿರುವುದು ದೇಶದ ಭವಿಷ್ಯದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ. ಶ್ರೀಲಂಕಾದ ಸ್ಥಿತಿ ಎಲ್ಲಾ ದೇಶಗಳಿಗೂ ಎಚ್ಚರಿಕೆಯ ಗಂಟೆ.
-ಶುಭ ಎಸ್, ಮಹಾರಾಜ ಕಾಲೇಜ್, ಮೈಸೂರು.
ಮೋದಿ ಬಂದು ಹೋದರು.. ರಸ್ತೆಗಳೂ ಕಿತ್ತು ಹೋದವು!
ಪ್ರಧಾನಿ ನರೇಂದ್ರ ಮೋದಿಯವರು ಬಂದ ಕಾರಣದಿಂದ ಮೈಸೂರಿನ ರಸ್ತೆಗಳಿಗೆ ಡಾಂಬರ್ ಭಾಗ್ಯ ದೊರಕಿದೆ ಎಂಬ ಖುಷಿಯಲ್ಲಿದ್ದ ಮೈಸೂರಿನ ಜನತೆಯ ಖುಷಿಯೀಗ ಆಕ್ರೋಶಕ್ಕೆ ತಿರುಗಿದೆ. ರಸ್ತೆ ಕಾಮಗಾರಿ ಮಾಡಿ ತಿಂಗಳು ತುಂಬುವ ಮುನ್ನವೇ ಡಾಂಬರ್ ಕಿತ್ತು ಹೋಗಿ ರಸ್ತೆಗಳೆಲ್ಲ ಗುಂಡಿಮಯವಾಗುತ್ತಿದೆ. ಜನರು ಮೊದಲಿನಂತೆ ತೊಂದರೆ ಪಡುವಂತಹ ಸ್ಥಿತಿಗೆ ಮೈಸೂರಿನ ರಸ್ತೆಗಳು ತಲುಪುತ್ತಿದೆ. ಈ ಗುಂಡಿಗಳಿಂದ ಅಪಘಾತದ ಪ್ರಮಾಣ ಹೆಚ್ಚಾಗುತ್ತದೆ, ಅಧಿಕಾರಿಗಳು ಜನರ ಜೀವದ ಜೊತೆ ಆಟವಾಡುತ್ತಿದ್ದಾರೆ. ಹಾಗಾಗಿ ಈ ಕಳಪೆ ಕಾಮಗಾರಿಯಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು.
-ರಕ್ಷಿತ್ ಕೆ ಸಿ, ಮಹಾರಾಜ ಕಾಲೇಜ್, ಮೈಸೂರು.