ಮೈಸೂರು : ದಸರಾ ಮಹೋತ್ಸವಕ್ಕೆ ಆರಂಭದ ಮುನ್ನುಡಿಯಂತಿರುವ ಯುವ ಸಂಭ್ರಮಕ್ಕೆ ಈ ಬಾರಿ ಮೈಸೂರಿನ ಮನೆ ಮಗ ಖ್ಯಾತ ಗಾಯಕ ವಿಜಯಪ್ರಕಾಶ್ ಚಾಲನೆ ನೀಡಲಿದ್ದಾರೆ.
ಪ್ರಶಾಂತ ವಾತಾವರಣದಂತೆ ಇರುವ ಮಾನಸಗಂಗೋತ್ರಿ ಬಯಲು ರಂಗಮಂದಿರದಲ್ಲಿ ಸೆ.೨೮ ರಿಂದ ಅಕ್ಟೋಬರ್ ೫ರವರೆಗೆ ನಡೆಯಲಿರುವ ಯುವ ಸಂಭ್ರಮ ಸಮಾರಂಭವನ್ನು ವಿಜಯಪ್ರಕಾಶ್ ಉದ್ಘಾಟಿಸಲಿದ್ದಾರೆ.
ಈ ಮೂಲಕ ಹಲವು ವರ್ಷಗಳಿಂದ ವಿಜಯಪ್ರಕಾಶ್ ಅವರಿಂದ ಉದ್ಘಾಟಿಸಬೇಕೆಂಬ ಕೂಗನ್ನು ಯುವ ಸಂಭ್ರಮ ಸಮಿತಿ ಈಡೇರಿಸಿದೆ. ಇದೇ ರೀತಿ ಜಿಲ್ಲೆಯವರೇ ಆಗಿರುವ ಮತ್ತೊಬ್ಬ ನಟ ಪ್ರಭುದೇವ್ ಉತ್ತನಹಳ್ಳಿ ಸಮೀಪ ಆಯೋಜಿಸುವ ಯುವದಸರಾ ಕಾರ್ಯಕ್ರಮಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಲು ಆಹ್ವಾನಿಸಲಾಗಿದೆ. ಯುವ ಸಂಭ್ರಮಕ್ಕೆ ವ್ಯಾಪಕ ಪ್ರಚಾರ ನೀಡಲು ಪೋಸ್ಟರ್ ಬಿಡುಗಡೆ ಮಾಡಲಾಗಿದೆ ಎಂದು ಯುವ ಸಂಭ್ರಮ ಉಪ ಸಮಿತಿ ಉಪ ವಿಶೇಷಾಧಿಕಾರಿ ಆರ್.ಐಶ್ವರ್ಯ ತಿಳಿಸಿದ್ದಾರೆ.
ಮೈಸೂರು, ಚಾಮರಾಜನಗರ, ಮಂಡ್ಯ, ಕೊಡಗು, ಹಾಸನ, ದಕ್ಷಿಣಕನ್ನಡ ಸೇರಿದಂತೆ ಇನ್ನಿತರ ಜಿಲ್ಲೆಗಳ ವಿಶ್ವವಿದ್ಯಾನಿಲಯಗಳ ವ್ಯಾಪ್ತಿಗೆ ಬರುವ ಕಾಲೇಜುಗಳ ತಂಡಗಳ ಆಯ್ಕೆಯ ಅಂತಿಮ ಹಂತದಲ್ಲಿ ಇದೆ. ಈಗಾಗಲೇ ಆಯಾಯ ಜಿಲ್ಲೆಯ ಆಯ್ದ ಕಾಲೇಜುಗಳ ವಿದ್ಯಾರ್ಥಿಗಳ ತಂಡ ಪೂರ್ವಾಭ್ಯಾಸದಲ್ಲಿ ತೊಡಗಿದೆ ಎಂದು ಅವರು ಹೇಳಿದ್ದಾರೆ.



