Mysore
25
overcast clouds

Social Media

ಸೋಮವಾರ, 14 ಸೆಪ್ಟೆಂಬರ್ 2026
Light
Dark

50 ವರ್ಷಗಳ ನಂತರ ಮೊದಲ ಬಾರಿ ಬರಿದಾದ ಕಾರಿಗನಹಳ್ಳಿ ಅಣೆಕಟ್ಟೆ

ಆರ್.ಶ್ರೀನಿವಾಸ್

೪೦೦೦ ಕೊಳವೆಬಾವಿಗಳಲ್ಲಿ ಅಂತರ್ಜಲ ಕುಸಿತ, ಕುಡಿಯುವ ನೀರಿಗೂ ಹಾಹಾಕಾರ 

ಕೆ.ಆರ್.ಪೇಟೆ: ಸುಮಾರು ೫೦ ವರ್ಷಗಳ ಅವಧಿಯಲ್ಲಿ ಮೊದಲ ಬಾರಿಗೆ ಕಾರಿಗನಹಳ್ಳಿ ಅಣೆಕಟ್ಟೆಯು ಸಂಪೂರ್ಣ ಬತ್ತಿ ಹೋಗಿದೆ. ಸುತ್ತಮುತ್ತಲಿನ ಸುಮಾರು ೪ ಸಾವಿರ ಕೊಳವೆ ಬಾವಿಗಳಲ್ಲಿ ಅಂತರ್ಜಲ ಕುಸಿದಿದ್ದು, ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ.

೧೦೦ ವರ್ಷಗಳ ಹಿಂದೆ ಮೈಸೂರು ಮಹಾರಾಜರು ನಿರ್ಮಿಸಿದ್ದ ಅಣೆಕಟ್ಟೆ: ಸುಮಾರು ೧೦೦ ವರ್ಷಗಳ ಹಿಂದೆ ಮೈಸೂರು ಮಹಾರಾಜರು ನಿರ್ಮಿಸಿಕೊಟ್ಟ ಈ ಕಾರಿಗನಹಗಳ್ಳಿ ಅಣೆಕಟ್ಟೆಯು ಸುಮಾರು ೨೦ ಅಡಿ ಎತ್ತರ, ಸುಮಾರು ೧೫೦ ಮೀಟರ್ ಉದ್ದವಿದೆ. ಸುಮಾರು ೨ ಟಿಎಂಸಿ ನೀರು ತುಂಬುವ ಸಾಮರ್ಥ್ಯವನ್ನು ಹೊಂದಿದೆ. ಈ ಅಣೆಕಟ್ಟೆಯಿಂದ ಎರಡೂ ಬದಿಯಲ್ಲೂ ಕಾಲುವೆಗಳನ್ನು ನಿರ್ಮಿಸಲಾಗಿದೆ. ಎರಡೂ ಕಾಲುವೆಗಳಲ್ಲಿ ಒಟ್ಟು ೪೦೦ ಎಕರೆ ಜಮೀನಿಗೆ ನೀರುಣಿಸುವ ಸಾಮರ್ಥ್ಯವನ್ನು ಹೊಂದಿದೆ.

ಈ ಅಣೆಕಟ್ಟೆಯಲ್ಲಿ ನೀರಿಲ್ಲದೇ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿದಿದ್ದು, ಸುಮಾರು ೧೦೦೦ ಅಡಿ ಕೊರೆದರೂ ಕೊಳವೆ ಬಾವಿಗಳಲ್ಲಿ ನೀರು ಬರುತ್ತಿಲ್ಲ. ಕೂಡಲೇ ಈ ಅಣೆಕಟ್ಟೆಗೆ ಹೇಮಾವತಿ ಜಲಾಶಯದಿಂದ ನೀರನ್ನು ತುಂಬಿಸಿದಲ್ಲಿ ಅಂತರ್ಜಲ ಮರುಪೂರಣವಾಗಿ ಕಾರಿಗನಹಳ್ಳಿ, ಬೀಚೇನಹಳ್ಳಿ, ರಾಮನಹಳ್ಳಿ, ಮಾಣಿಕ್ಯನಹಳ್ಳಿ, ಲಿಂಗಾಪುರ ಮತ್ತಿತರ ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಲಿದೆ.

” ಕಾರಿಗನಹಳ್ಳಿ, ಬೀಚೇನಹಳ್ಳಿ, ರಾಮನಹಳ್ಳಿ, ಮಾಣಿಕ್ಯನಹಳ್ಳಿ, ಲಿಂಗಾಪುರ ಸೇರಿದಂತೆ ಹಲವು ಗ್ರಾಮಗಳ ಜನ ಜಾನುವಾರುಗಳಿಗೂ ಜೀವನಾಧಾರವಾಗಿದ್ದ ಅಣೆಕಟ್ಟೆ ಬರಿದಾಗಿರುವ ಕಾರಣ ತೀವ್ರ ಸಂಕಷ್ಟ ಎದುರಾಗಿದೆ. ಕೂಡಲೇ ಹೇಮಾವತಿ ನೀರಾವರಿ ಅಧಿಕಾರಿಗಳು ಈ ಅಣೆಕಟ್ಟೆಗೆ ಹೇಮಾವತಿ ಕಾಲುವೆಯಿಂದ ನೀರು ತುಂಬಿಸುವ ಮೂಲಕ ಈ ಭಾಗದ ರೈತರಿಗೆ, ಜನ-ಜಾನುವಾರುಗಳಿಗೆ ಅನುಕೂಲ ಮಾಡಿಕೊಡಬೇಕು.”

ಕಾರಿಗನಹಳ್ಳಿ ಕುಮಾರ್, ಅಧ್ಯಕ್ಷರು, ತಾಲ್ಲೂಕು ಕಬ್ಬು ಬೆಳೆಗಾರರ ಸಂಘ

” ಕಾರಿಗನಹಳ್ಳಿ ಬಳಿ ೧೯೨೬ರಲ್ಲಿ ಹೇಮಾವತಿ ನದಿಯ ಉಪ ನದಿಯಾಗಿರುವ ಕೇತಕಾನದಿಗೆ ಅಡ್ಡಲಾಗಿ ಮೈಸೂರು ಮಹಾರಾಜರು ಕಾರಿಗನಹಳ್ಳಿ ಅಣೆಕಟ್ಟೆ ನಿರ್ಮಿಸುವ ಮೂಲಕ ಈ ಭಾಗದ ಏಳೆಂಟು ಗ್ರಾಮಗಳ ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದರು. ಸುಮಾರು ೨ ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಕಾರಿಗನಹಳ್ಳಿ ಕಿರು ಜಲಾಶಯ ಸುಮಾರು ೫೦ ವರ್ಷಗಳ ನಂತರ ಬತ್ತಿ ಹೋಗಿದೆ. ಸಂಬಂಧಪಟ್ಟವರು ಕೂಡಲೇ ಹೇಮಾವತಿ ಜಲಾಶಯದ ಮೂಲಕ ಕಾರಿಗನಹಳ್ಳಿ ಅಣೆಕಟ್ಟೆಗೆ ನೀರು ಹರಿಸಲು ಕ್ರಮ ಕೈಗೊಳ್ಳಬೇಕು.”

ರಂಗಸ್ವಾಮಿ, ಶಿಕ್ಷಕರು ಹಾಗೂ ಹವ್ಯಾಸಿ ಇತಿಹಾಸ ಸಂಶೋಧಕ

 

 

 

Tags:
error: Content is protected !!