ರಾಜ್ಯದಲ್ಲಿ ಸೈಬರ್ ವಂಚನೆ ಪ್ರಕರಣಗಳು ಹೆಚ್ಚುತ್ತಿದ್ದು, ಕಳೆದ ಏಳು ತಿಂಗಳ ಅವಧಿಯಲ್ಲಿ ಸುಮಾರು ರೂ.೬೦೦ ಕೋಟಿಯಷ್ಟು ಹಣ ಸೈಬರ್ ವಂಚಕರ ಪಾಲಾಗಿದೆ ಎಂದು ಅಧಿಕೃತವಾಗಿ ವರದಿಯಾಗಿದೆ. ಆಶ್ಚರ್ಯಕರ ಸಂಗತಿ ಎಂದರೆ ಈ ರೀತಿಯ ವಂಚನೆಗೆ ಒಳಗಾದವರು, ನಿವೃತ್ತ ನೌಕರರು, ಅತಿ ಹೆಚ್ಚು ವಿದ್ಯಾವಂತರು, ಹಿರಿಯ ನಾಗರಿಕರು ಮತ್ತು ಗೃಹಿಣಿಯರು. ಅಲ್ಲದೇ ಅತಿ ಹೆಚ್ಚು ಸೈಬರ್ ಪ್ರಕರಣಗಳು ಕರ್ನಾಟಕದಿಂದಲೇ ದಾಖಲಾಗುತ್ತಿರುವುದು ಆತಂಕಕಾರಿ ಬೆಳವಣಿಗೆ.
ಹಿಂದಿ ಭಾಷೆಯಲ್ಲಿ ಮಾತನಾಡುವ ಅಪರಿಚಿತ ವ್ಯಕ್ತಿ ಕರೆ ಮಾಡಿ, ನೀವು ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ ನಿಮ್ಮ ಹಣ ಒಂದು ವರ್ಷದ ಡಬ್ಬಲ್ ಆಗುತ್ತದೆ ಎಂದು ನಂಬಿಸಿ, ನಿಮ್ಮ ಮೊಬೈಲ್ ಸಂಖ್ಯೆಗೆ ಲಿಂಕ್ ಕಳುಹಿಸುತ್ತಾರೆ. ಲಿಂಕ್ ಅನ್ನು ಒತ್ತಿ ನಿಮ್ಮ ಪಾನ್ ಸಂಖ್ಯೆ ಮತ್ತು ಆಧಾರ್ ಸಂಖ್ಯೆಯನ್ನು ನಮೂದಿಸಲು ಹೇಳುತ್ತಾರೆ. ಇವರನ್ನು ನಂಬಿ, ನಿಮ್ಮ ಪಾನ್ ಕಾರ್ಡ್ ಸಂಖ್ಯೆ ಮತ್ತು ಆಧಾರ್ ಸಂಖ್ಯೆಯನ್ನು ಕೊಟ್ಟರೇ ಸಾಕು ನಿಮ್ಮ ಯಾವುದೇ ಬ್ಯಾಂಕಿನ ಎಸ್ಬಿ ಅಕೌಂಟ್ನಲ್ಲಿರುವ ಎಲ್ಲ ಹಣವೂ ಹತ್ತೇ ನಿಮಿಷಗಳಲ್ಲಿ ಮಾಯವಾಗಿರುತ್ತದೆ. ಅಪರಿಚಿತ ವ್ಯಕ್ತಿಯ ಕರೆಗಳನ್ನು ಸ್ವೀಕರಿಸಬೇಡಿ ಎಂದು ಪೊಲೀಸ್ ಇಲಾಖೆ ಮತ್ತು ಬ್ಯಾಂಕ್ಗಳು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದರೂ ಜನರು ಪಾಠ ಕಲಿತಂತಿಲ್ಲ.
-ಬೂಕನಕೆರೆ ವಿಜೇಂದ್ರ, ಮೈಸೂರು




