ಹನೂರು : ಅರಣ್ಯ ಇಲಾಖೆ ಸಿಬ್ಬಂದಿ ಗುಂಡಿಗೆ ಮೂವರು ಬಲಿ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದೆ. ದನ ಹುಡುಕಲು ಹೋಗಿದ್ದವರ ಮೇಲೆ ಅರಣ್ಯ ಇಲಾಖೆಯವರು ಗುಂಡಿನ ದಾಳಿ ನಡೆಸಿ ಕೊಲೆ ಮಾಡಿದ್ದಾರೆ ಎಂಬ ಮೃತರ ಕುಟುಂಬಸ್ಥರ ಆರೋಪಗಳಿಗೆ ಇಲಾಖೆ ಮತ್ತೆ ಕೌಂಟರ್ ನೀಡಿದ್ದು, ಮೃತ ಮೂವರು ಸೇರಿ ನಾಲ್ವರೂ ಬೇಟೆಗೆ ಹೋಗಿದ್ದರು ಎಂಬುದಕ್ಕೆ ಸಾಕ್ಷಿ ಬಿಡುಗಡೆ ಮಾಡಿದೆ.
ಸ್ಥಳದಲ್ಲಿ ಸಿಕ್ಕ ಬ್ಯಾಗ್, ಮಾಂಸ, ಅಡುಗೆ ಸಾಮಗ್ರಿ ಚಿತ್ರ ರಿಲೀಸ್ ಮಾಡಲಾಗಿದ್ದು, ವನ್ಯಮೃಗದ ಮಾಂಸದಲ್ಲಿ ಗುಂಡಿನ ಗುರುತು ಪತ್ತೆಯಾಗಿರೋದು ಇಡೀ ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಪ್ರಕರಣ ಸಂಬಂಧ ಅರಣ್ಯ ಅಧಿಕಾರಿಗಳು ಈ ಹಿಂದೆಯೂ ಕೆಲಸ ಸಾಕ್ಷ್ಯಗಳನ್ನು ಬಹಿರಂಗಪಡಿಸಿದ್ದರು. ಆತ್ಮರಕ್ಷಣೆಗಾಗಿ ತಮ್ಮ ಸಿಬ್ಬಂದಿ ಗುಂಡು ಹಾರಿಸಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದ ಇಲಾಖೆ, ಘಟನಾ ಸ್ಥಳದಲ್ಲಿ ಸಿಕ್ಕಿದ್ದ 34 ಕೆ.ಜಿ ಜಿಂಕೆ ಮಾಂಸ ಹಾಗೂ ಬಂದೂಕುಗಳು ಮತ್ತು ಚಪ್ಪಲಿಯ ಫೋಟೋಗಳನ್ನು ಸಾಕ್ಷಿಯಾಗಿ ಪ್ರದರ್ಶಿಸಿತ್ತು. ಆದರೆ ಹೊಸ ಚಪ್ಪಲಿಯ ಮೇಲಿದ್ದ ಸ್ಟಿಕ್ಕರ್ ಕೂಡ ಹಾಗೇ ಇದ್ದಿದ್ದು ಕಂಡುಬಂದಿದ್ದ ಕಾರಣ ಸಾಕ್ಷ್ಯಗಳ ಬಗ್ಗೆಯೇ ಅನುಮಾನ ವ್ಯಕ್ತವಾಗಿದ್ದವು. ಇದೇ ವಿಚಾರ ಕರ್ನಾಟಕ ಸೇರಿ ನೆರೆ ರಾಜ್ಯ ತಮಿಳುನಾಡು ವಿಧಾನಸಭೆಯಲ್ಲೂ ಚರ್ಚೆಯಾಗಿತ್ತು.
ಅರಣ್ಯ ಕಚೇರಿಗಳ ಭದ್ರತೆ ಹೆಚ್ಚಳ
ಮೂವರ ಸಾವಿನ ಬಳಿಕ ದುಷ್ಕರ್ಮಿಗಳು ಅರಣ್ಯ ಇಲಾಖೆಯನ್ನೇ ಟಾರ್ಗೆಟ್ ಮಾಡಿರುವ ಹಿನ್ನೆಲೆ ಹನೂರಿನ ಅರಣ್ಯ ಕಚೇರಿ ಹಾಗೂ ವಸತಿ ಗೃಹಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ದುಷ್ಕರ್ಮಿಗಳು 8 ಕಳ್ಳಬೇಟೆ ತಡೆ ಶಿಬಿರ ಸ್ಫೋಟಿಸಿದ್ದ ಕಾರಣ ಅರಣ್ಯ ಇಲಾಖೆ ಕಚೇರಿ ಬಳಿ ಡಿಎಆರ್ ತುಕಡಿ ನಿಯೋಜಿಸಲಾಗಿದೆ. ನಿರಂತರ ದಾಳಿಯಿಂದ ಬೆಚ್ಚಿ ಬಿದ್ದಿರುವ ಅರಣ್ಯ ಇಲಾಖೆ ಸಿಬ್ಬಂದಿ, ಕಾಡಿನೊಳಗೆ ಬೀಟ್ಗೆ ತೆರಳಲೂ ಭಯ ಪಡಬೇಕಾದ ಸ್ಥಿತಿ ಸದ್ಯ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ ನಿರ್ಮಾಣವಾಗಿದೆ.




