ಷರತ್ತುಗಳ ಒಪ್ಪದ ಹೊರತು ಜಲಸಂಧಿ ತೆರೆಯಲ್ಲ; ಸ್ಪಷ್ಟನೆ
ಟೆಹರಾನ್ : ಹಾರ್ಮುಜ್ ಜಲಸಂಧಿಯ ಮೇಲೆ ಅಮೆರಿಕ ಸಂಪೂರ್ಣ ನಿಯಂತ್ರಣ ಸಾಧಿಸಿದೆ ಎಂಬ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯನ್ನು ಇರಾನ್ ತೀವ್ರವಾಗಿ ಖಂಡಿಸಿದ್ದು, ನಮ್ಮ ಷರತ್ತುಗಳಿಗೆ ಒಪ್ಪಿಗೆ ನೀಡದ ಹೊರತು ಜಲಸಂಧಿ ತೆರೆಯುವದಿಲ್ಲ ಎಂದು ತಿರುಗೇಟು ನೀಡಿದೆ.
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಪರ್ಷಿಯನ್ ಗಲ್ಛ್ ಸ್ಟ್ರೇಟ್ ಅಥಾರಿಟಿ ಹಾರ್ಮುಜ್ ಜಲಸಂಧಿ ನಿರ್ಬಂಧ ಮುಕ್ತವಾಗಿದೆ ಎಂದು ಅಮೆರಿಕದ ಅಧಿಕಾರಿಗಳು ಪದೇಪದೆ ಮಾಡುತ್ತಿರುವ ಹೇಳಿಕೆಗಳಿಂದ ವಾಸ್ತವಾಂಶ ಬದಲಾಗುವುದಿಲ್ಲ ಎಂದು ತಿಳಿಸಿದೆ. ‘ಹಾರ್ಮುಜ್ ಜಲಸಂಧಿʼ ಇನ್ನೂ ನಿರ್ಬಂಧಿತವಾಗಿದೆ. ಇರಾನ್ನ ಷರತ್ತುಗಳನ್ನು ಒಪ್ಪಿಕೊಳ್ಳುವವರೆಗೆ ಅದನ್ನು ಮತ್ತೆ ತೆರೆಯಲಾಗುವುದಿಲ್ಲ’ ಎಂದು ಸ್ಪಷ್ಟಪಡಿಸಿದೆ. ಇದೇ ವೇಳೆ ಹಾರ್ಮುಜ್ ಜಲಸಂಧಿಯ ನಿರ್ಬಂಧ ತೆರವುಗೊಳಿಸಲಾಗಿದೆ ಎಂಬ ಅಮೆರಿಕದ ಅಧಿಕಾರಿಗಳ ಹೇಳಿಕೆಗಳನ್ನೂ ಇರಾನ್ ತಳ್ಳಿಹಾಕಿದೆ.
ಅಮೆರಿಕದ ಅಧಿಕಾರಿಗಳ ಸರಣಿ ಹೇಳಿಕೆಗಳು ಮತ್ತು ಸಾಮಾಜಿಕ ಜಾಲತಾಣದ ಪೋಸ್ಟ್ಗಳು ವಾಸ್ತವಾಂಶವನ್ನು ಬದಲಿಸುವುದಿಲ್ಲ. ಇರಾನ್ನ ಷರತ್ತುಗಳನ್ನು ಒಪ್ಪಿಕೊಳ್ಳುವವರೆಗೆ ಜಲಸಂಽ ಮುಚ್ಚಿಯೇ ಇರಲಿದೆ ಎಂದು ಇರಾನ್ ಪುನರುಚ್ಚರಿಸಿದೆ. ಇರಾನ್ನ ಈ ಪ್ರತಿಕ್ರಿಯೆ ಟ್ರಂಪ್ ಹೇಳಿಕೆ ನೀಡಿದ ಕೆಲವೇ ಗಂಟೆಗಳ ಬಳಿಕ ಬಂದಿದೆ. ಹಾರ್ಮುಜ್ ಜಲಸಂಧಿಯ ಮೇಲೆ ಅಮೆರಿಕ ‘ಸಂಪೂರ್ಣ ನಿಯಂತ್ರಣ’ ಸಾಧಿಸಿದ್ದು, ಅದನ್ನು ಮುಂದುವರಿಸುವುದಾಗಿ ಟ್ರಂಪ್ ಹೇಳಿದ್ದರು. ‘ನಾವು ಅದನ್ನು ಮುಂದುವರಿಸಿಕೊಳ್ಳುತ್ತೇವೆ ಎಂದು ನಾನು ಭಾವಿಸುತ್ತೇನೆ. ನಮ್ಮ ನೌಕಾಪಡೆಯ ನಿರ್ಬಂಧವನ್ನು ಎಲ್ಲರೂ ‘ಉಕ್ಕಿನ ಗೋಡೆ’ ಎಂದು ಕರೆಯುತ್ತಿದ್ದಾರೆ. ಇದನ್ನು ತಡೆಯಲು ಇರಾನ್ಗೆ ಏನೂ ಮಾಡಲು ಸಾಧ್ಯವಿಲ್ಲ’ ಎಂದು ಟ್ರಂಪ್ ತಮ್ಮ ‘ಟ್ರೂತ್ ಸೋಶಿಯಲ್’ ಪೋಸ್ಟ್ನಲ್ಲಿ ಹೇಳಿದ್ದರು.
ಇರಾನ್ನ ಸೇನಾ ವ್ಯವಸ್ಥೆ ಭಾರೀ ಹಾನಿಗೊಳಗಾಗಿದೆ ಎಂದು ಕೂಡ ಟ್ರಂಪ್ ಪ್ರತಿಪಾದಿಸಿದ್ದಾರೆ. ಇರಾನ್ ಬಳಿ ನೌಕಾಪಡೆ ಅಥವಾ ವಾಯುಪಡೆ ಇಲ್ಲ, ಉಳಿದಿರುವ ಸೈನಿಕರಿಗೆ ವೇತನ ಪಾವತಿಯಾಗುತ್ತಿಲ್ಲ ಮತ್ತು ಇರಾನ್ನ ರೆವಲ್ಯೂಷನರಿ ಗಾರ್ಡ್ ತೀವ್ರವಾಗಿ ದುರ್ಬಲಗೊಂಡಿದೆ ಎಂದು ಅವರು ತಮ್ಮ ಪೋಸ್ಟ್ನಲ್ಲಿ ಹೇಳಿದ್ದಾರೆ. ಇರಾನ್ ‘ಸುಳ್ಳು ಸುದ್ದಿಗಳು ಮತ್ತು ಹೆಚ್ಚುತ್ತಿರುವ ಹಣದುಬ್ಬರ’ ವನ್ನಷ್ಟೇ ಹೊಂದಿದೆ ಎಂದು ಟ್ರಂಪ್ ಟೀಕಿಸಿದ್ದಾರೆ.
ಇರಾನ್ ಷರತ್ತುಗಳೇನು?
ಇರಾನ್ನ ಹೊಸದಾಗಿ ನೇಮಕಗೊಂಡ ಸುಪ್ರೀಂ ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್ ಮುಖ್ಯಸ್ಥ ಮೊಹ್ಸೆನ್ ರೆಜಾಯೀ ಅವರು, ಅಮೆರಿಕ ತನ್ನ ಎಲ್ಲ ಷರತ್ತುಗಳನ್ನು ಒಪ್ಪಿಕೊಳ್ಳುವವರೆಗೆ ಹೋರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ತೆರೆಯುವುದಿಲ್ಲ ಎಂದು ಎಚ್ಚರಿಸಿದ್ದಾರೆ. ‘ಎಕ್ಸ್’ನಲ್ಲಿ ಸಂದೇಶ ಪ್ರಕಟಿಸಿರುವ ರೆಜಾಯೀ, ಇರಾನ್ನ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಅಮೆರಿಕ ಯುದ್ಧ ಮತ್ತು ನಿರ್ಬಂಧವನ್ನು ಕೊನೆಗೊಳಿಸಬೇಕು, ಇರಾನ್ನ ಸ್ಥಗಿತಗೊಳಿಸಲಾದ ಆಸ್ತಿಗಳನ್ನು ಬಿಡುಗಡೆ ಮಾಡಬೇಕು ಹಾಗೂ ಲೆಬನಾನ್ ಮತ್ತು ಗಾಜಾ ಸೇರಿದಂತೆ ಇಡೀ ಪ್ರದೇಶದಲ್ಲಿ ಕದನ ವಿರಾಮಕ್ಕೆ ಒಪ್ಪಿಕೊಳ್ಳಬೇಕು. ಈ ಎಲ್ಲ ಷರತ್ತುಗಳನ್ನು ಈಡೇರಿಸಿದ ಬಳಿಕವೇ ಹೋರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯಲಾಗುವುದು ಎಂದು ಹೇಳಿದ್ದಾರೆ.




