Mysore
25
overcast clouds

Social Media

ಮಂಗಳವಾರ, 28 ಜುಲೈ 2026
Light
Dark

ಮರದ ಹಿಂದೆ ಮರೆಯಾದ ಸಿಗ್ನಲ್ ಲೈಟ್‌ಗಳು!

ಪ್ರಶಾಂತ್ ಎನ್

ಮೈಸೂರು: ಸುಗಮ ಸಂಚಾರ ಹಾಗೂ ಜನರ ಸುರಕ್ಷತೆಗಾಗಿ ನಗರದ ವಿವಿಧ ರಸ್ತೆ, ವೃತ್ತಗಳಲ್ಲಿ ಅಳವಡಿಸಿರುವ ಟ್ರಾಫಿಕ್ ಸಿಗ್ನಲ್ ಲೈಟ್‌ಗಳು ಸವಾರರ ಉಪಯೋಗಕ್ಕೆ ಬಾರದಂತಾಗಿವೆ. ನಗರದ ಪ್ರಮುಖ ವೃತ್ತಗಳಲ್ಲಿ ಸುಮಾರು ೮೦ಕ್ಕೂ ಹೆಚ್ಚು ಸಿಗ್ನಲ್ ಲೈಟ್‌ಗಳನ್ನು ಅಳವಡಿಸಲಾಗಿದೆ. ಆದರೆ, ಕೆಲವೆಡೆ ಇದರ ಉಪಯೋಗವಾಗುತ್ತಿಲ್ಲ. ಸಿಗ್ನಲ್ ಲೈಟ್ ಅಳವಡಿಕೆಗೂ ಮುನ್ನ ಸಂಚಾರ ಪೊಲೀಸರು ರಸ್ತೆ ಅಥವಾ ವೃತ್ತದ ಅಕ್ಕ ಪಕ್ಕ ಸಮರ್ಪಕವಾಗಿ ಪರಿಶೀಲನೆ ನಡೆಸದಿರುವುದೇ ಇದಕ್ಕೆ ಕಾರಣವಾಗಿದೆ.

ಇದಕ್ಕೆ ತಾಜಾ ಉದಾಹರಣೆಯಾಗಿ ನಗರದ ೧೦ಕ್ಕೂ ಹೆಚ್ಚು ರಸ್ತೆ ಹಾಗೂ ವೃತ್ತಗಳ ಬಳಿ ಅಳವಡಿಸಿರುವ ಸಿಗ್ನಲ್‌ಲೈಟ್ ಕಂಬಗಳನ್ನು ಗಿಡ ಮರಗಳು, ಅವುಗಳ ರೆಂಬೆ-ಕೊಂಬೆಗಳು ಮುಚ್ಚಿ ಬಿಟ್ಟಿವೆ. ಇದರಿಂದ ಸರಿಯಾದ ರೀತಿಯಲ್ಲಿ ಸಿಗ್ನಲ್ ಲೈಟ್‌ಗಳು ಕಾಣಿಸದ ಪರಿಣಾಮ ವಾಹನ ಸವಾರರು ತಮಗಿಷ್ಟಬಂದಂತೆ ವಾಹನ ಚಾಲನೆ ಮಾಡುತ್ತಿದ್ದಾರೆ. ಸಂಚಾರ ನಿಯಮಗಳನ್ನು ಉಲ್ಲಂಸುತ್ತಿದ್ದಾರೆ.

ಯಾವುದೇ ಸ್ಥಳದಲ್ಲಿ ಟ್ರಾಫಿಕ್ ಸಿಗ್ನಲ್ ಲೈಟ್ ಅಳವಡಿಸ ಬೇಕಾದಲ್ಲಿ ಮೊದಲು ಸ್ಥಳ ಪರಿಶೀಲನೆ ನಡೆಸಬೇಕು. ನಂತರ ಅಲ್ಲಿ ಯಾವುದಾದರೂ ಬೃಹತ್ ಮರವಿದ್ದಲ್ಲಿ ಸಿಗ್ನಲ್ ಲೈಟ್‌ಗೆ ತೊಂದರೆಯಾಗದಂತೆ ರೆಂಬೆಗಳನ್ನು ತೆರವುಗೊಳಿಸಬೇಕು. ಈ ಸಂಬಂಧ ನಗರಪಾಲಿಕೆ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಗಿಡ-ಮರಗಳ ರೆಂಬೆಗಳ ತೆರವಿಗೆ ಅಭಯ ಪಡೆ ಸಿದ್ಧವಾಗಿರುತ್ತದೆ. ಅದನ್ನು ಬಳಸಿಕೊಂಡು ಮರದ ರೆಂಬೆ-ಕೊಂಬೆಗಳನ್ನು ತೆರವುಗೊಳಿಸಿದ ನಂತರ ಸಿಗ್ನಲ್ ಲೈಟ್‌ಗಳನ್ನು ಅಳವಡಿಸಬೇಕು. ಇದು ಆಯಾಯ ಸಂಚಾರ ಪೊಲೀಸ್ ಠಾಣೆಯ ಅಧಿಕಾರಿಗಳ ಜವಾಬ್ದಾರಿಯಾಗಿದೆ. ಆದರೆ, ನಗರದ ವಿಜಯನಗರ, ಕುವೆಂಪುನಗರದ ಕಾವೇರಿ ಶಾಲೆಯ ಬಳಿ, ನಾರಾಯಣ ಹೃದಯಾಲಯ ಬಳಿಯ ಜಂಕ್ಷನ್ ಸೇರಿದಂತೆ ಹಲವೆಡೆ ಸಿಗ್ನಲ್ ಲೈಟ್‌ಗಳ ಅಳವಡಿಕೆ ಸಂದರ್ಭದಲ್ಲಿ ಎಚ್ಚರಿಕೆ ವಹಿಸದ ಕಾರಣ ಸಿಗ್ನಲ್ ಲೈಟ್‌ಗಳು ಮರದ ಹಿಂದೆ ಅವಿತುಕೊಂಡಿವೆ.

ಟ್ರಾಫಿಕ್ ಸಿಗ್ನಲ್ ಲೈಟ್ ಕಂಬಗಳನ್ನು ಆವರಿಸಿಕೊಂಡಿರುವ ಮರದ ರೆಂಬೆ-ಕೊಂಬೆಗಳನ್ನು ತೆರವುಗೊಳಿಸಬೇಕು. ಇಲ್ಲವಾದಲ್ಲಿ ಸಿಗ್ನಲ್ ಲೈಟ್ ಅಳವಡಿಸಿದರೂ ಯಾವುದೇ ಪ್ರಯೋಜನ ಆಗುವುದಿಲ್ಲ. ಪೊಲೀಸ್ ಇಲಾಖೆ ಹಾಗೂ ನಗರಪಾಲಿಕೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

” ಸಿಗ್ನಲ್ ಲೈಟ್‌ಗೆ ಮರದ ಕೊಂಬೆಗಳು ಅಡ್ಡ ಬಂದಿರುವ ಬಗ್ಗೆ ನನಗೂ ದೂರುಗಳು ಬಂದಿವೆ. ಈ ಸಂಬಂಧ ಆಯಾಯ ಸಂಚಾರ ಪೊಲೀಸ್ ಠಾಣೆಯ ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ. ಠಾಣಾ ವ್ಯಾಪ್ತಿಯಲ್ಲಿ ಪರಿಶೀಲನೆ ನಡೆಸಿ ಸಮಸ್ಯೆಯನ್ನು ಬಗೆಹರಿಸುವಂತೆ ಸೂಚನೆ ನೀಡುತ್ತೇನೆ.”

-ಕೆ.ಎನ್.ಸುಂದರರಾಜ್, ಡಿಸಿಪಿ, ಸಂಚಾರ ವಿಭಾಗ 

 

 

Tags:
error: Content is protected !!