ಹನೂರು: ತಾಲ್ಲೂಕಿನ ಬೈಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರೆಕಾಡುವಿನದೊಡ್ಡಿ ಮತ್ತು ಅರ್ಧನಾರೀಪುರ ಗ್ರಾಮಗಳಿಗೆ ಗುರುವಾರ ಗ್ರಾಮ ಪಂಚಾಯಿತಿ ವತಿಯಿಂದ ಟ್ಯಾಂಕರ್ ಮೂಲಕ ಕುಡಿಯುವ ನೀರನ್ನು ಪೂರೈಸಲಾಯಿತು. ‘ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಆಗ್ರಹ’ ಎಂಬ ಶೀರ್ಷಿಕೆಯಡಿ ಜು.೧೬ರಂದು ‘ಆಂದೋಲನ’ ದಿನಪತ್ರಿಕೆಯಲ್ಲಿ ವರದಿ ಪ್ರಕಟಿಸಲಾಗಿತ್ತು . ಈ ವರದಿಗೆ ಸ್ಪಂದಿಸಿದ ಪಿಡಿಒ ಶಿವಣ್ಣ ತಕ್ಷಣ ಕ್ರಮ ಕೈಗೊಂಡಿದ್ದಾರೆ. ಗುರುವಾರ ಮುಂಜಾನೆ ಅರೆಕಾಡುವಿನದೊಡ್ಡಿ ಹಾಗೂ ಅರ್ಧನಾರೀಪುರ ಗ್ರಾಮಗಳಿಗೆ ಒಂದು ಟ್ಯಾಂಕರ್ ನೀರು ಪೂರೈಕೆ ಮಾಡುವ ಮೂಲಕ ತಾತ್ಕಾಲಿಕ ಪರಿಹಾರ ನೀಡಲಾಗಿದೆ.ಈ ಬಗ್ಗೆ ಮಾಹಿತಿ ನೀಡಿದ ಪಿಡಿಒ ಶಿವಣ್ಣ, ‘ಅರೆಕಾಡುವಿನದೊಡ್ಡಿಯಲ್ಲಿ ಅಂತರ್ಜಲ ಮಟ್ಟ ಕುಸಿದು ನೀರಿನ ಸಮಸ್ಯೆ ಎದುರಾಗಿದೆ. ಆ ಕಾರಣಕ್ಕೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗಿದೆ. ಇನ್ನೊಂದು ಬಡಾವಣೆಯ ಕೊಳವೆ ಬಾವಿಗೆ ರೀ-ಬೋರ್ ಮಾಡಿಸಲು ಇಒ ಅವರಿಗೆ ಮನವಿ ಮಾಡಿದ್ದೇನೆ.
ಅರ್ಧನಾರೀಪುರದಲ್ಲಿ ಮೋಟಾರ್ ದುರಸ್ತಿ ಆಗಿರುವುದರಿಂದ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಶೀಘ್ರದಲ್ಲೇ ಮೋಟಾರ್ ದುರಸ್ತಿಗೊಳಿಸಿ ನೀರು ಪೂರೈಕೆ ಮಾಡಲಾಗುವುದು ಎಂದು ತಿಳಿಸಿದರು





