ರಾಜ್ಯ ಸರ್ಕಾರವು ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಅಧಿಸೂಚನೆ ಹೊರಡಿಸಿದು, ಸ್ಪರ್ಧಾಕಾಂಕ್ಷಿಗಳು ಆನ್ಲೆ ನ್ ಮೂಲಕ ಅರ್ಜಿಸಲ್ಲಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ)ದ ಅಧಿಕೃತ ವೆಬ್ಸೈಟ್ನಲ್ಲಿ ಅವಕಾಶ ನೀಡಲಾಗಿದೆ. ಅರ್ಜಿ ಶುಲ್ಕವೂ ಹೆಚ್ಚಾಗಿರುವುದರಿಂದ ಬಡ ಮತ್ತು ಮಧ್ಯಮ ವರ್ಗದವರ ಮೇಲೆ ಹೊರೆ ಬೀಳಲಿದೆ. ಸ್ಪರ್ಧಾಕಾಂಕ್ಷಿಗಳು ಅರ್ಜಿ ಸಲ್ಲಿಸುವ ಪ್ರಕ್ರಿಯೆಯಲ್ಲಿ ಪರೀಕ್ಷಾ ಅರ್ಜಿ ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿಸಿದ ಮೇಲೆ ಅವರ ಖಾತೆಯಿಂದ ಹಣ ಕಡಿತಗೊಂಡ ನಂತರವೂ ಪಾವತಿ ಪೂರ್ಣಗೊಂಡಿಲ್ಲ ಎಂದು ತೋರಿಸುತ್ತಿದೆ. ಅರ್ಜಿ ಸ್ಥಿತಿ ಪರಿಶೀಲಿಸಿದಾಗಲೂ ಪೂರ್ಣಗೊಂಡಿರುವ ಯಾವುದೇ ಮಾಹಿತಿ ಗೋಚರಿಸುತ್ತಿಲ್ಲ. ಇದರಿಂದಾಗಿ ಹಲವಾರು ಸ್ಪರ್ಧಾಕಾಂಕ್ಷಿಗಳು ಹಣ ಕಳೆದುಕೊಂಡು ಆತಂಕಗೊಂಡಿದ್ದಾರೆ ಮತ್ತು ಅರ್ಜಿ ಪ್ರಕ್ರಿಯೆ ಪೂರ್ಣಗೊಂಡಿಲ್ಲ, ಆದ್ದರಿಂದ ಪುನಃ ಪಾವತಿಸಬೇಕೇ ಎಂಬ ಗೊಂದಲಕ್ಕೀಡಾಗಿದ್ದಾರೆ. ಹಾಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಈ ರೀತಿಯ ಸಮಸ್ಯೆ ಎದುರಾಗಿರುವ ಸ್ಪರ್ಧಾರ್ಥಿಗಳಿಗೆ ಹಣವನ್ನು ಮರುಪಾವತಿಸಬೇಕು, ಇಲ್ಲವೇ ಅವರು ಸಲ್ಲಿಸಿರುವ ಅರ್ಜಿಯನ್ನು ಮಾನ್ಯ ಮಾಡಿ ಪೂರ್ಣಗೊಳಿಸಬೇಕಿದೆ ಹಾಗೂ ಇಂತಹ ತಾಂತ್ರಿಕ ದೋಷಗಳನ್ನು ಕೂಡಲೇ ಸರಿಪಡಿಸಿ, ಶುಲ್ಕ ಪಾವತಿಸುವ ಪ್ರಕ್ರಿಯೆಯನ್ನು ಸುಗಮಗೊಳಿಸಬೇಕಿದೆ.
– ಎಂ. ಪಿ. ದರ್ಶನ್ ಚಂದ್ರ, ಮುಕ್ಕಡಹಳ್ಳಿ, ಚಾಮರಾಜನಗರ ತಾ.


