Mysore
25
overcast clouds

Social Media

ಗುರುವಾರ, 16 ಜುಲೈ 2026
Light
Dark

ಕೈಕೊಟ್ಟ ಮುಂಗಾರು; ಆಗಸದತ್ತ ಮುಖ ಮಾಡಿದ ರೈತರು  

ದೂರ ನಂಜುಂಡಸ್ವಾಮಿ

ಜಯಪುರ ಹೋಬಳಿ ವ್ಯಾಪ್ತಿಯಲ್ಲಿ ಬೆಳೆ ಒಣಗುತ್ತಿರುವ ಹಿನ್ನೆಲೆಯಲ್ಲಿ ಅನ್ನದಾತರು ಕಂಗಾಲು

ದೂರ: ಮೈಸೂರು ತಾಲ್ಲೂಕಿನ ಜಯಪುರ ಹೋಬಳಿ ವ್ಯಾಪ್ತಿಯಲ್ಲಿ ಸರಿಯಾದ ಪ್ರಮಾಣದಲ್ಲಿ ಮುಂಗಾರು ಮಳೆಯಾಗದ ಕಾರಣ ರೈತರು ಬೆಳೆ ಬೆಳೆಯಲಾಗದೆ ಹಾಗೂ ಬೆಳೆದ ಬೆಳೆಯೂ ಒಣಗುತ್ತಿರುವುದರಿಂದ ಆತಂಕದಿಂದ ಆಗಸದತ್ತ ಮುಖ ಮಾಡಿದ್ದಾರೆ.

ಜಯಪುರ ಹೋಬಳಿ ವ್ಯಾಪ್ತಿಯ ದೂರ, ಮುರುಡಗಳ್ಳಿ, ಉದ್ಬೂರು, ದೊಡ್ಡಕಾಟೂರು, ತಳೂರು, ಮಾರ್ಬಳ್ಳಿ, ಮಾರ್ಬಳ್ಳಿಹುಂಡಿ, ಕೆಲ್ಲಹಳ್ಳಿ, ಟಿ.ಕಾಟೂರು, ಅರಸಿನಕೆರೆ, ಹಾರೋ ಹಳ್ಳಿ, ಗುಜ್ಜೇಗೌಡನಪುರ, ಮಂಡನಹಳ್ಳಿ, ಮದ್ದೂರು, ಕಲ್ಲಹಳ್ಳಿ ಮುಂತಾದ ಗ್ರಾಮಗಳ ಬಹುತೇಕ ರೈತರು ಮಳೆಯನ್ನೇ ನಂಬಿ ಕೃಷಿ ಮಾಡುತ್ತಿದ್ದಾರೆ.

ಅಲ್ಲದೇ ವಿವಿಧ ಗ್ರಾಮಗಳಲ್ಲಿ ರೈತರು ಧಾನ್ಯಗಳಾದಹೆಸರು, ಅಲಸಂದೆ, ಉದ್ದು, ಅವರೆ ಕಾಯಿ ಹಾಗೂ ಕೆಲವು ತರಕಾರಿಗಳನ್ನು ಬೆಳೆದಿದ್ದರು. ಹೂ ಬಿಡುವ ಹಂತದಲ್ಲಿದ್ದ ಬೆಳೆಗೆ ಮಳೆ ಕೈಕೊಟ್ಟ ಕಾರಣ ಶೇ.೨೫ರಷ್ಟು ಬೆಳೆ ಕೈ ಸೇರುತ್ತದೆ ಎಂಬ ಭರವಸೆಯೂ ರೈತರಲ್ಲಿ ಕಾಣುತ್ತಿಲ್ಲ. ರೈತರು ಒಂದು ಎಕರೆಗೆ ಕನಿಷ್ಠ ರೂ. ಹತ್ತು ಸಾವಿರದಿಂದ ಗರಿಷ್ಟ ಮೂವತ್ತು ಸಾವಿರ ರೂ.ವರೆಗೆ ಖರ್ಚು ಮಾಡಿದ್ದಾರೆ. ಕಳೆದ ವರ್ಷ ಉತ್ತಮವಾಗಿ ಮಳೆ ಬಿದ್ದರೂ ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ದೊರೆತಿರಲಿಲ್ಲ. ಕಳೆದ ಐದಾರು ವರ್ಷಗಳಿಂದ ರೈತರಿಗೆ ಬಿತ್ತನೆಗೆಂದು ಮಾಡಿದ ಖರ್ಚು ಕೂಡ ದೊರಕುತ್ತಿಲ್ಲ.

ಹೋಬಳಿ ವ್ಯಾಪ್ತಿಯಲ್ಲಿ ಕೆರೆಕಟ್ಟೆಗಳ ನೀರು ದಿನ ಕಳೆದಂತೆ ಬರಿದಾಗುತ್ತಿದೆ. ಅಂತರ್ಜಲ ಮಟ್ಟ ಕುಸಿತಗೊಂಡು ಬೋರ್‌ವೆಲ್ಗಳಲ್ಲಿಯೂ ನೀರಿನ ಮಟ್ಟ ಕಡಿಮೆಯಾಗುತ್ತಿದೆ. ಆದ್ದರಿಂದ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಹೋಬಳಿ ಕೇಂದ್ರಗಳಲ್ಲಿ ದನ-ಕರುಗಳಿಗೆ ಮೇವು ಕೇಂದ್ರಗಳನ್ನು ತೆರೆಯಬೇಕೆಂದು ಹಾಗೂ ಕೆರೆ ಕಟ್ಟೆಗಳಿಗೆ ನೀರು ತುಂಬಿಸುವ ಕೆಲಸ ಮಾಡಬೇಕೆಂದು ಈ ಭಾಗದ ರೈತರು ಒತ್ತಾಯಿಸಿದ್ದಾರೆ.

” ಈ ಬಾರಿ ಸಕಾಲಕ್ಕೆ ಮಳೆಯಾಗದೆ ಮಳೆ ಕೊರತೆಯಾದರೂ ರೈತರು ವಾರ್ಷಿಕ ಗುರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಧಾನ್ಯಗಳನ್ನು ಬಿತ್ತನೆ ಮಾಡಿದ್ದರು. ಆದರೆ ಮಳೆ ಕಡಿಮೆಯಾದ್ದರಿಂದ ಇಳುವರಿ ಪ್ರಮಾಣದಲ್ಲಿ ಕುಂಠಿತವಾಗಬಹುದು.”

-ಅರುಣಾ, ರೈತ ಸಂಪರ್ಕ ಅಧಿಕಾರಿ, ಜಯಪುರ

” ಹಾರೋಹಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ಸುಮಾರು ನೂರಾರು ಎಕರೆಯಷ್ಟು ಕುಂಬಳಕಾಯಿ ಬಿತ್ತನೆ ಮಾಡಿ ಹೂ ಮತ್ತು ಕಾಯಿ ಬಿಡುವ ಸಂದರ್ಭದಲ್ಲಿ ಮಳೆ ಕೈಕೊಟ್ಟ ಕಾರಣ ಬಿಟ್ಟ ಕಾಯಿ ದಪ್ಪ ಆಗದೆ ಒಣಗುತ್ತಿವೆ. ಸರ್ಕಾರ ರೈತರಿಗೆ ಪರಿಹಾರ ನೀಡಬೇಕು.”

-ಹೆಚ್.ಎನ್.ಚಂದ್ರ, ರೈತ, ಹಾರೋಹಳ್ಳಿ

 

 

Tags:
error: Content is protected !!