Mysore
28
overcast clouds

Social Media

ಭಾನುವಾರ, 12 ಜುಲೈ 2026
Light
Dark

ಹಾಡುಪಾಡು | ಜೈಫುಲ್ ಮೇಷ್ಟ್ರ ಕಷ್ಟಕ್ಕೆ ಮಿಡಿಯುತ್ತಿರುವ ಶಿಷ್ಯ ಹೃದಯಗಳು

ಗುರುವಿಗೆ ಕೃತಜ್ಞತೆ ಸಲ್ಲಿಸುವ ಶಿಷ್ಯರ ಈ ಕಾರ್ಯ ಯುವ ಪೀಳಿಗೆಗೆ ಮಾದರಿಯಾಗಿದೆ.

ಚಂದ್ರಶೇಖರ್ ಮೂರ್ತಿ ಕೆ.ಎಸ್.

ಹಾರ್ಮೋನಿಯಂ ವಾದಕ, ಗೀತ ರಚನೆಕಾರ, ಗಾಯಕ ಜಾಯ್ ಫುಲ್ ಜಯಶೇಖರ್ ಅವರು. ಚಾಮರಾಜನಗರ ಜಿಲ್ಲೆ ತಾಳವಾಡಿ ತಾಲ್ಲೂಕು ತಿಗಣಾರೆ ಗ್ರಾಮದವರು. ಜಾಯ್ ಫುಲ್ ಜಯಶೇಖರ್ ಅವರು ಚಾಮರಾಜನಗರ, ಮಂಡ್ಯ, ಮೈಸೂರು ಭಾಗದ ಪ್ರತಿ ಹಳ್ಳಿಗಳಲ್ಲೂ ಜೈಫುಲ್ ಮೇಷ್ಟ್ರು ಅಂತಾನೇ ಸುಪ್ರಸಿದ್ಧರು.

ಗ್ರಾಮೀಣ ನಾಟಕ, ನಿರ್ದೇಶನ, ಹಾರ್ಮೋನಿಯಂ ವಾದನ, ಸುಗಮ ಸಂಗೀತ, ಕಥಾ ವಾಚನವನ್ನೇ ವೃತ್ತಿಯಾಗಿಸಿಕೊಂಡು ೬೦ಕ್ಕೂ ಹೆಚ್ಚು ನಾಟಕಗಳಲ್ಲಿ ಅನಕ್ಷರಸ್ಥ ಗ್ರಾಮೀಣ ಕಲಾವಿದರನ್ನು ಒಳಗೊಂಡಂತೆ ನೂರಾರು ಕಲಾವಿದರಿಗೆ ಅವಕಾಶ ಕೊಟ್ಟು ಬದುಕಿಗೆ ದಾರಿದೀಪವಾಗಿ ಸಾವಿರಾರು ಶಿಷ್ಯ ವರ್ಗ ಹಾಗೂ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ಕಲಾ ಕ್ಷೇತ್ರದಲ್ಲಿ ಗಣನೀಯ ಸೇವೆಗೈದು ಸಾಧನೆಯ ಶಿಖರ ಏರಿರುವ ೮೭ ವರ್ಷದ ಜಾಯ್ ಫುಲ್ ಜಯಶೇಖರ್ ಅವರು ಇತ್ತೀಚೆಗೆ ವಯೋಸಹಜ ಕಾಯಿಲೆಗೆ ಒಳಗಾಗಿದ್ದಾರೆ. ಸಾಮಾನ್ಯ ಜ್ವರದಿಂದ ಆರಂಭವಾಗಿ ಇಂದು ಮೈಲ್ಡ್ ಬ್ರೈನ್ ಸ್ಟ್ರೋಕ್, ಕಿಡ್ನಿ ಸಮಸ್ಯೆ ಅಂತಹ ಗಂಭೀರ ಸ್ವರೂಪದ ಆರೋಗ್ಯ ಸಮಸ್ಯೆಗೆ ತುತ್ತಾಗಿದ್ದಾರೆ. ಇದರಿಂದ ಬದುಕು ಒಂದು ರೀತಿಯಲ್ಲಿ ಅನಿಶ್ಚಿತತೆಯೆಡೆಗೆ ಹೊರಳಿದಂತಾಗಿದೆ. ಮೊದಲೇ ಆರ್ಥಿಕವಾಗಿ ಸಬಲರಾಗಿರದ ಮಧ್ಯಮ ವರ್ಗದ ಕುಟುಂಬವಾದ್ದರಿಂದ ಆಸ್ಪತ್ರೆ ಚಿಕಿತ್ಸೆಯ ದುಬಾರಿ ವೆಚ್ಚ ಕುಟುಂಬಕ್ಕೆ ಕೈ ಎಟುಕಿದರೂ ತಾಕದ ಹಾಗೇ ಇದೆ. ಜಾಯ್ ಫುಲ್ ಜಯಶೇಖರ್ ಅವರಿಗೆ ಪತ್ನಿ, ಮೂವರು ಹೆಣ್ಣು ಮಕ್ಕಳು, ಅಳಿಯಂದಿರು ಚೆನ್ನಾಗಿ ನೋಡಿಕೊಂಡು ಸಹ ಆರೋಗ್ಯ ಕೈ ಕೊಟ್ಟಾಗ, ಆರ್ಥಿಕ ಪರಿಸ್ಥಿತಿ ಹದಗೆಟ್ಟಾಗ ಕೈ ಹಿಡಿಯುವ ಜೀವಗಳ ಎದುರು ನೋಡುವುದು ಸಾಮಾನ್ಯ.

ಆದರೆ ಇಂತಹ ಸಂಧರ್ಭದಲ್ಲಿ ಗುರುಗಳ ಆರೋಗ್ಯ ಹದಗೆಟ್ಟ ಸುದ್ದಿ ತಿಳಿದು ಜ್ಞಾನಧಾರೆ ಎರೆದ, ಬದುಕಿನ ಪಾಠ ಹೇಳಿಕೊಟ್ಟ ಗುರುಗಳ ಕುಟುಂಬದ ಆರ್ಥಿಕ ಪರಿಸ್ಥಿತಿ ಮನಗಂಡು ಶಿಷ್ಯವರ್ಗ ಸ್ವಯಂಪ್ರೇರಿತರಾಗಿ ಹೃದಯ ವೈಶಾಲ್ಯತೆಯ ಫಲವಾಗಿ ಲಕ್ಷಾಂತರ ರೂಪಾಯಿ ಅವರ ಚಿಕಿತ್ಸಾ ವೆಚ್ಚಕ್ಕೆ ಸೇರುವ ಹಾಗೆ ಮಾಡಿದ್ದಾರೆ. ಜಾಯ್ ಫುಲ್ ಜಯಶೇಖರ್ ಅಭಿಮಾನಿ ಬಳಗ ಎಂಬ ವಾಟ್ಸಪ್ ಗ್ರೂಪ್ ಮೂಲಕ ಶಿಷ್ಯರು, ಅಭಿಮಾನಿಗಳು ಗುರುವಿನ ತೀರಿಸಲಾಗದ ಋಣವನ್ನು ಕೊಂಚ ಮಟ್ಟಿಗೆ ತೀರಿಸುವ ನಿಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ಆರ್ಥಿಕ ಸಹಾಯಕ್ಕೆ ಕುಟುಂಬದ ಜೊತೆಗೆ ಕೈ ಜೋಡಿಸಿ ಗುರುಭಕ್ತಿ, ಅಭಿಮಾನಿ ಪ್ರೀತಿ ಔದಾರ್ಯ ತೋರಿದ್ದಾರೆ ಅವರ ಶಿಷ್ಯ ಅಭಿಮಾನ ಬಳಗದವರಾದ ಕಿರಣ್ ಗಿರ್ಗಿ, ಎಸ್.ಜಿ.ಮಹಾಲಿಂಗ ಗಿರ್ಗಿ, ಧನಲಕ್ಷ್ಮೀ ಎನ್., ಕಿರಗಸೂರು ರಾಜಪ್ಪ.

ಅವರ ಶಿಷ್ಯರಾದ ಎಸ್.ಜಿ.ಮಹಾಲಿಂಗ ಗಿರ್ಗಿ ಅವರು ಹೇಳುವಂತೆ ಕ್ರೈಸ್ತ ಧರ್ಮದ ಆರಾಧಕರಾಗಿದ್ದರೂ ಸಹ ಎಲ್ಲ ಧರ್ಮಗಳನ್ನ ಅಧ್ಯಯನ ಮಾಡಿಕೊಂಡು ಮನುಷ್ಯತ್ವ ಧರ್ಮವನ್ನು ಅರಿತಿದ್ದರು. ಸೌಮ್ಯ ಸ್ವಭಾವದ, ಸರಳತೆಯ ಆದರ್ಶ ವ್ಯಕ್ತಿತ್ವಗಳನ್ನು ಕಂಡ ನಮಗೆ ಅವರು ಸಿಕ್ಕಿರುವುದು ಸೌಭಾಗ್ಯ ಅವರ ಆರೋಗ್ಯ ಚೇತರಿಕೆ ಆಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ ಅವರ ಎಲ್ಲಾ ಶಿಷ್ಯ ಅಭಿಮಾನಿ ಬಳಗ.

ಗುರು-ಶಿಷ್ಯರ ಸಂಬಂಧಕ್ಕೆ ಯಾವುದೇ ಕಾಲಮಿತಿಯಿಲ್ಲ ಎಂಬುದನ್ನು ಈ ಘಟನೆ ಸಾಕ್ಷೀಕರಿಸಿದೆ. ಗುರುವಿಗೆ ಕೃತಜ್ಞತೆ ಸಲ್ಲಿಸುವ ಶಿಷ್ಯರ ಈ ಕಾರ್ಯ ಯುವ ಪೀಳಿಗೆಗೆ ಮಾದರಿಯಾಗಿದೆ.

(ಜಾಯ್ ಫುಲ್ ಜಯಶೇಖರ್ ಮೇಷ್ಟರಿಗೆ ಸಹಾಯ ಮಾಡಬಯಸುವವರು ಕಿರಣ್ ಗಿರ್ಗಿ ಅವರನ್ನು 7411491077 ಈ ಸಂಖ್ಯೆಯಲ್ಲಿ ಸಂಪರ್ಕಿಸಬಹುದು)

Tags:
error: Content is protected !!