ಮೈಸೂರು ನಗರದಲ್ಲಿ ಬೀದಿ ನಾಯಿಗಳ ಉಪಟಳ ದಿನೇ ದಿನೇ ಹೆಚ್ಚುತ್ತಿದೆ. ಪ್ರತಿದಿನ ನಾಯಿ ಕಡಿತದ ನೂರಾರು ಪ್ರಕರಣಗಳು ವರದಿಯಾಗುತ್ತಿವೆ. ಮೈಸೂರು ನಗರದಲ್ಲಿ ೧೫-೨೦ ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು, ಯಾವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ನಾಯಿ ಕಡಿತಕ್ಕೆ ನೀಡುವ ಎಆರ್ವಿ ಲಸಿಕೆ ದೊರೆಯದ ಕಾರಣ ಅವರನ್ನು ಮೇಟಗಳ್ಳಿಯ ಜಿಲ್ಲಾ ಆಸ್ಪತ್ರೆಗೆ ಸಾಗಹಾಕಲಾಗುತ್ತದೆ. ಒಂದು ಎಆರ್ವಿ ಲಸಿಕೆ ವಯಲ್ ಓಪನ್ ಮಾಡಿದರೆ ಅದರಿಂದ ೧೦ ಜನಕ್ಕೆ ಚಿಕಿತ್ಸೆ ನೀಡಬಹುದು. ಒಂದು ಬಾರಿ ಓಪನ್ ಮಾಡಿದರೆ ಅದನ್ನು ಅಂದೇ ಉಪಯೋಗಿಸಬೇಕು. ಇಲ್ಲದಿದ್ದರೆ ವ್ಯರ್ಥವಾಗುತ್ತದೆ. ಪ್ರತಿ ದಿನ ಒಂದು ಆರೋಗ್ಯ ಕೇಂದ್ರಕ್ಕೆ ಇಷ್ಟು ಜನ ಬೀದಿ ನಾಯಿ ಕಡಿತದ ಚಿಕಿತ್ಸೆಗೆ ಬಾರದ ಕಾರಣ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಇದನ್ನು ಉಪಯೋಗಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ನಗರದ ನಾಲ್ಕೂ ದಿಕ್ಕುಗಳ ಆಯ್ದ ಆಸ್ಪತ್ರೆಗಳಲ್ಲಿ ಎಆರ್ವಿ ಲಸಿಕೆ ಲಭ್ಯ ವಿರುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಕ್ರಮ ವಹಿಸಬೇಕು.
– ಮುಳ್ಳೂರು ಪ್ರಕಾಶ್, ಕನಕದಾಸನಗರ, ಮೈಸೂರು



