ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದಿದೆ ಎನ್ನಲಾದ ಎರಡು ಕೋಟಿ ರೂ.ಗಳಿಗೂ ಅಧಿಕ ಅನುದಾನ ದುರ್ಬಳಕೆಯ ಹಗರಣ ಕನ್ನಡಿಗರ ಸಾಂಸ್ಕೃತಿಕ ಅಸ್ಮಿತೆಗೆ ಬಡಿದ ಭೀಕರ ಪೆಟ್ಟು. ಜವಾಬ್ದಾರಿಯುತ ಅಧ್ಯಕ್ಷರೇ ಆರ್ಥಿಕ ವಂಚನೆಯ ಆರೋಪ ಎದುರಿಸಿ ಆಜೀವ ಸದಸ್ಯತ್ವ ಕಳೆದುಕೊಳ್ಳುವಂತಾಗಿರುವುದು ನಾಲ್ಕು ಲಕ್ಷಕ್ಕೂ ಅಧಿಕ ಸದಸ್ಯರ ನಂಬಿಕೆಗೆ ಎಸಗಿದ ಮಹಾ ದ್ರೋಹವಾಗಿದೆ. ಈ ಸಾಂಸ್ಕೃತಿಕ ಪತನವನ್ನು ತಡೆಯಲು ಸರ್ಕಾರವು ತಕ್ಷಣವೇ ಕಠಿಣ ಸುಧಾರಣಾ ಕ್ರಮಗಳನ್ನು ಕೈಗೊಳ್ಳಬೇಕು. ನಿಷ್ಪಕ್ಷಪಾತ ತನಿಖೆಯ ಮೂಲಕ ದುರುಪಯೋಗವಾದ ಸಾರ್ವಜನಿಕರ ಹಣವನ್ನು ವಸೂಲಿ ಮಾಡಬೇಕು. ಆಡಳಿತಾಧಿಕಾರಿ ಆಳ್ವಿಕೆಯನ್ನು ದೀರ್ಘಕಾಲ ಮುಂದುವರಿಸದೆ ತಕ್ಷಣ ಪಾರದರ್ಶಕವಾಗಿ ಚುನಾವಣೆ ನಡೆಸಬೇಕು. ವೆಚ್ಚ ತಗ್ಗಿಸಲು ಡಿಜಿಟಲ್ ಮತದಾನ ಜಾರಿಗೊಳಿಸಬೇಕು. ಅಧ್ಯಕ್ಷರ ಸರ್ವಾಧಿಕಾರಕ್ಕೆ ಬ್ರೇಕ್ ಹಾಕಿ, ಬೈಲಾ ತಿದ್ದುಪಡಿಯ ಮೂಲಕ ಮಹಿಳೆಯರು ಹಿಂದುಳಿದ ವರ್ಗಗಳಿಗೆ ಕಡ್ಡಾಯ ಮೀಸಲಾತಿ ಹಾಗೂ ಸಮಾನ ಪ್ರಾತಿನಿಧ್ಯ ಕಲ್ಪಿಸಿ ಪರಿಷತ್ತಿನ ಸ್ವಾಯತ್ತತೆಯನ್ನು ರಕ್ಷಿಸಬೇಕು.
-ಡಾ.ಎಚ್.ಕೆ.ವಿಜಯಕುಮಾರ್, ಬೆಂಗಳೂರು



